- ಹರಿಹರ ತಾಪಂ ಕಚೇರಿಯಲ್ಲಿ ತಾಲೂಕುಮಟ್ಟದ ಕರಡು ಅಭಿವೃದ್ಧಿ ಯೋಜನೆ ಸಭೆ
ಕನ್ನಡಪ್ರಭ ವಾರ್ತೆ ಹರಿಹರ
ವಾರ್ಷಿಕ ಕರಡು ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಸಭೆಗಿಂತ ಮುಖ್ಯವಾಗಿ ಕ್ಷೇತ್ರದ ಅಭಿವೃದ್ಧಿಗೆ ಕುರಿತು ಪಟ್ಟಿ ಕಳಿಸುವಾಗ ಇಒ, ಪಿಡಿಒ ಅಧಿಕಾರಿಗಳು ಬಹಳಷ್ಟು ಮುತುವರ್ಜಿ ವಹಿಸಿ ಪಟ್ಟಿ ಸಿದ್ಧತೆ ಮಾಡಿ ಕಳಿಸಬೇಕು. ಆಗ ಮಾತ್ರ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚು ಅನುದಾನ ಬರುವುದಕ್ಕೆ ಸಾಧ್ಯವಾಗುತ್ತದೆ ಎಂದು ಶಾಸಕ ಬಿ.ಪಿ.ಹರೀಶ್ ಹೇಳಿದರು.ನಗರದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ತಾಪಂ ಮತ್ತು ಜಿಪಂ ಇಲಾಖೆ ಸಹಯೋಗದೊಂದಿಗೆ ಶುಕ್ರವಾರ ತಾಲೂಕುಮಟ್ಟದ ಕರಡು ಅಭಿವೃದ್ಧಿ ಯೋಜನೆಯಿಂದ ನಡೆದ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ನೀವೇನಾದರೂ ಅನುದಾನ ಕಡಿಮೆ ಬಿಡುಗಡೆ ಮಾಡಿದ್ದೀರಾ ಎಂದು ಪ್ರಶ್ನೆ ಕೇಳಿದಾಗ, ನೀವು ಅನುಮೋದನೆ ಮಾಡಿ ಕಳಿಸಿದ್ದೆ ಇಷ್ಟು. ಅದರಲ್ಲಿ ಜಾಸ್ತಿ ಕೇಳುತ್ತಿರಾ ಎಂದು ನಮಗೇ ಪ್ರಶ್ನೆ ಮಾಡಲಾಗುತ್ತದೆ. ತಾಲೂಕಿನಲ್ಲಿ ಬಹಳಷ್ಟು ಕಾಮಗಾರಿ ಮತ್ತು ಅಭಿವೃದ್ಧಿ ಕಾರ್ಯಗಳು ಆಗಬೇಕಾಗಿವೆ. ಆದ್ದರಿಂದ, ಕರಡು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ಡಿಪಿಆರ್ ಸಿದ್ಧತೆ ಮಾಡುವಾಗ ಬಹಳ ಮುತುವರ್ಜಿಯಿಂದ ಮತ್ತು ಶಿಸ್ತುಬದ್ಧವಾಗಿ ಸರ್ಕಾರದ ನಿಯಮಾನುಸಾರ ಪಟ್ಟಿಯನ್ನು ಸಿದ್ಧತೆ ಮಾಡಿ ಕಳಿಸುವಂತಾಗಬೇಕು ಎಂದ ಅವರು, ಪುನಃ ಸೋಮವಾರ ಸಭೆಯಲ್ಲಿ ಚರ್ಚೆ ಮಾಡಿ ಅಂತಿಮ ಪಟ್ಟಿ ಸರ್ಕಾರಕ್ಕೆ ಕಳಿಸೋಣ ಎಂದು ಹೇಳಿದರು.
ತಾಪಂ ಪ್ರಭಾರ ಇಒ ಎಚ್.ಬಸವರಾಜ್ ಮಾತನಾಡಿ, 2026-27ನೇ ಸಾಲಿನ ತಾಪಂ ವಾರ್ಷಿಕ ಕರಡು ಅಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ ತಾಪಂ ₹5 ಕೋಟಿ, ಆರೋಗ್ಯ ಇಲಾಖೆಗೆ ₹9.5 ಲಕ್ಷ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ₹2560 ಲಕ್ಷ, ಪಶು ಸಂಗೋಪನೆ ಇಲಾಖೆ ₹44 ಲಕ್ಷ, ಕೃಷಿ ಇಲಾಖೆ 20 ಲಕ್ಷ, ಪಂಚಾಯತ್ ರಾಜ್ ಇಲಾಖೆ ₹1145 ಲಕ್ಷ, ಸಮಾಜ ಕಲ್ಯಾಣ ಇಲಾಖೆ ₹1859 ಲಕ್ಷ, ಪುರಸಭೆ ಮಲೇಬೆನ್ನೂರು ₹109 ಲಕ್ಷ, ನಗರಸಭೆ ಹರಿಹರ ₹6025 ಲಕ್ಷ, ಶಿಕ್ಷಣ ಇಲಾಖೆ ₹314 ಲಕ್ಷ ಸೇರಿದಂತೆ ಒಟ್ಟು ₹6448 ಲಕ್ಷ ಅನುದಾನದ ಬೇಡಿಕೆ ಪಟ್ಟಿ ಸಿದ್ಧತೆ ಮಾಡಲಾಗಿದೆ ಎಂದು ವಿವರಿಸಿದರು.ಕೃಷಿ ಇಲಾಖೆ ನಟರಾಜ್, ಬಿಇಒ ಡಿ.ದುರಗಪ್ಪ, ಜಿಪಂ ಸಿಇಒ ಕೆ.ಗಿರೀಶ್, ಹಿಂದುಳಿದ ವರ್ಗಗಳ ಇಲಾಖೆ ಆಸ್ಮಾ ಬಾನು, ಸಿಡಿಪಿಒ ಪ್ರಿಯದರ್ಶಿನಿ, ಸಮಾಜ ಕಲ್ಯಾಣ ಇಲಾಖೆ ಹನುಮಂತಪ್ಪ, ತಾಪಂ ಇಲಾಖೆ ಪೂಜಾ ಹಾಗೂ ಇತರರು ಹಾಜರಿದ್ದರು.
- - --22HRR.01:
ಹರಿಹರ ತಾಲೂಕುಮಟ್ಟದ ಕರಡು ಅಭಿವೃದ್ಧಿ ಯೋಜನೆ ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ ಮಾತನಾಡಿದರು.