ರಾಮನಗರ: ನಗರದ ಆಗಾ ಲೇಔಟ್ ಮತ್ತು ಜಿ.ಕಾರ್ಪ್ ಲೇಔಟ್ನಲ್ಲಿರುವ ಉದ್ಯಾನವನಗಳಲ್ಲಿ ಸ್ವಚ್ಛತಾ ಕಾರ್ಯ ಹಮ್ಮಿಕೊಳ್ಳುವ ಮೂಲಕ ಡಾ.ಬಿ.ಆರ್.ಅಂಬೇಡ್ಕರ್ ಪರಿನಿರ್ವಾಣ ದಿನವನ್ನು ನಗರಸಭೆ ವತಿಯಿಂದ ವಿಭಿನ್ನವಾಗಿ ಆಚರಿಸಲಾಯಿತು.
ಸಂವಿಧಾನ ಶಿಲ್ಪಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ, ಡಾ.ಬಿ.ಆರ್.ಅಂಬೇಡ್ಕರ್ ತಮ್ಮ ಜೀವನದುದ್ದಕ್ಕೂ ಸಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದವರು. ಸಮಾಜದಲ್ಲಿ ಸ್ಥಾನಮಾನ ಬಂದ ಮೇಲೂ ತಮ್ಮ ಜೀವಿತಾದವಧಿವರೆಗೂ ಸಾಮಾಜಿಕ ಪಿಡುಗಾದ ಅಸ್ಪೃಶ್ಯತೆ ವಿರುದ್ದ ಹೋರಾಟ ಮಾಡಿದವರು ಎಂದರು.
ಶ್ರೇಣಿಕೃತ ವ್ಯವಸ್ಥೆಯಲ್ಲಿ ಮನುಷ್ಯರನ್ನು ಪ್ರಾಣಿಗಳಿಗಿಂತಲೂ ಕೀಳಾಗಿ ಕಾಣುವ ವ್ಯವಸ್ಥೆ ಇತ್ತು. ಎಲ್ಲರು ಒಂದಾಗಿ ಬದುಕಬೇಕು ಎಂಬುದು ಅಂಬೇಡ್ಕರ್ ಅವರ ಆಶಯವಾಗಿತ್ತು. ಸಂವಿಧಾನದ ಮೂಲಕ ಅದನ್ನು ಪ್ರತಿಪಾದಿಸಿದ್ದಾರೆ. ದೇಶದಲ್ಲಿರುವ ಎಲ್ಲ ಜಾತಿ, ಧರ್ಮಗಳನ್ನು, ಸಂಸ್ಕೃತಿಯನ್ನು ಗೌರವಿಸುವ, ಎಲ್ಲರಿಗೂ ಜೀವಿಸುವ ಹಕ್ಕು, ಸಮಾನತೆಯ ಹಕ್ಕನ್ನು ಸಂವಿಧಾನದ ಮೂಲಕ ನೀಡಿದ್ದಾರೆ ಎಂದು ಹೇಳಿದರು.ಕೂಲಿ ಕೆಲಸ ಮಾಡುವ ವ್ಯಕ್ತಿಯಿಂದ ರಾಷ್ಟ್ರಪತಿಯವರಿಗೆ ಒಂದೇ ಮತದಾನದ ಹಕ್ಕು ನೀಡಿ ಅಂಬೇಡ್ಕರ್ ರವರು ಸೂರ್ಯ ಚಂದ್ರ ಇರುವವರೆಗೆ ಅಜರಾಮರರು. ಅವರ ಆಶಯಗಳನ್ನು ಪಾಲಿಸಿದರೆ ಮಾತ್ರ ಸಮ ಸಮಾಜ ಮತ್ತು ಬಲಿಷ್ಠವಾದ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ ಎಂದು ಶೇಷಾದ್ರಿ ಹೇಳಿದರು.
ಈ ವೇಳೆ ನಗರಸಭೆಯ ಸ್ವಚ್ಚತಾ ರಾಯಭಾರಿ ಚಿತ್ರರಾವ್, ಪ್ರಮುಖರಾದ ಕವಿತಾರಾವ್, ಹರೀಶ್ ಮತ್ತು ಆಗಾ ಮತ್ತು ಜಿ.ಕಾರ್ಪ್ ಲೇಔಟ್ ನಿವಾಸಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
6ಕೆಆರ್ ಎಂಎನ್ 4.ಜೆಪಿಜಿರಾಮನಗರದ ಆಗಾ ಲೇಔಟ್ ಮತ್ತು ಜಿ.ಕಾರ್ಪ್ ಲೇಔಟ್ನಲ್ಲಿರುವ ಉದ್ಯಾನವನಗಳಲ್ಲಿ ಪೌರಕಾರ್ಮಿಕರೊಂದಿಗೆ ನಗರಸಭೆ ಪ್ರತಿನಿಧಿಗಳು, ಅಧಿಕಾರಿಗಳು, ಸಿಬ್ಬಂದಿ, ಯುಧರ್ಮ ಸಂಘಟನೆಯ ಸದಸ್ಯರು ಸ್ವಚ್ಛತಾ ಕಾರ್ಯ ನಡೆಸಿದರು.