ಹಿರಿಯೂರು: ನಗರಸಭೆ ವ್ಯಾಪ್ತಿಯ ಸಾರ್ವಜನಿಕರಿಗೆ ಕಂದಾಯ ಕಟ್ಟಲು ಅನುಕೂಲವಾಗುವ ನಿಟ್ಟಿನಲ್ಲಿ ನಗರಸಭೆಯಲ್ಲಿ ಬ್ಯಾಂಕ್ ಆಫ್ ಬರೋಡಾ ಶಾಖೆಯ ಗ್ರಾಹಕ ಸೇವಾ ಕೇಂದ್ರ ತೆರೆಯಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ರವರು ಗ್ರಾಹಕ ಸೇವಾ ಕೇಂದ್ರ ಉದ್ಘಾಟಿಸಿದರು ಎಂದು ನಗರಸಭೆ ಅಧ್ಯಕ್ಷ ಅಜಯ್ ಕುಮಾರ್ ತಿಳಿಸಿದರು.
ಕೆಲವೊಮ್ಮೆ ಸಾರ್ವಜನಿಕರು ಕಂದಾಯ ಕಟ್ಟಲೆಂದೇ ದಿನಗಟ್ಟಲೆ ಸಮಯ ವ್ಯರ್ಥ ಮಾಡಬೇಕಾಗಿತ್ತು. ಕೆಲವೊಮ್ಮೆ ಚಲನ್ ಬರೆಸಿಕೊಂಡು ಹೋದರು ಸಹ ಕಂದಾಯ ಕಟ್ಟಲಾಗದೇ ಎಷ್ಟೋ ಸಾರ್ವಜನಿಕರು ವಾಪಸ್ ಬಂದಿದ್ದಾರೆ. ಹಾಗಾಗಿ ನಗರಸಭೆ ವ್ಯಾಪ್ತಿಯ ಜನರ ಸಮಯ ಮತ್ತು ಅವರ ತೆರಿಗೆ ಕಟ್ಟುವ ಕಾರ್ಯ ಸುಲಭವಾಗಲಿ ಎಂಬ ಉದ್ದೇಶದಿಂದ ಬ್ಯಾಂಕ್ ಅಧಿಕಾರಿಗಳ ಜೊತೆ ಚರ್ಚಿಸಿ ನಮ್ಮ ನಗರಸಭೆಯಲ್ಲಿ ಬ್ರಾಂಚ್ ಸೌಲಭ್ಯ ಒದಗಿಸಿದ್ದು, ಗ್ರಾಹಕ ಸೇವಾ ಕೇಂದ್ರ ತೆರೆಯಲಾಗಿದೆ ಎಂದು ಹೇಳಿದರು.
ನಗರದಲ್ಲಿ ಜನಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಕಂದಾಯ ಕಟ್ಟುವ ಗ್ರಾಹಕರಿಗೆ ಇದು ಅನುಕೂಲಕರವಾಗಿದೆ. ಜೊತೆಗೆ ನಗರಸಭೆಯ ಸಂಪೂರ್ಣ ವ್ಯವಹಾರ ಇಲ್ಲೇ ನಡೆಯಲಿದೆ. ಗುತ್ತಿಗೆದಾರರಿಗೆ ಹಣ ನೀಡಲು, ನಗರಸಭೆಯ ವ್ಯವಹಾರಗಳಿಗೂ ಇದು ಅನುಕೂಲವಾಗಿದೆ. ಸಾರ್ವಜನಿಕರು ನಗರಸಭೆಯಿಂದ ಬ್ಯಾಂಕ್ ಗೆ ಅಲೆಯುವುದು ತಪ್ಪಿದಂತಾಗಿದೆ. ಇದೀಗ ಬ್ಯಾಂಕ್ ಆಫ್ ಬರೋಡಾ ಗ್ರಾಹಕ ಸೇವಾ ಕೇಂದ್ರ ಆರಂಭವಾಗಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಬೇಡಿಕೆಯ ಮೇರೆಗೆ ಎಟಿಎಂ ಕೂಡ ಸ್ಥಾಪಿಸಲಾಗುತ್ತದೆ ಎಂದರು.ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಅಂಬಿಕಾ ಆರಾಧ್ಯ, ಪೌರಾಯುಕ್ತ ಎ.ವಾಸಿಂ, ಸ್ಥಾಯಿ ಸಮಿತಿ ಅಧ್ಯಕ್ಷ ಅನಿಲ್ ಕುಮಾರ್, ಮಾಜಿ ಅಧ್ಯಕ್ಷೆ ಶಂಷುನ್ನಿಸಾ, ಮಾಜಿ ಉಪಾಧ್ಯಕ್ಷ ಬಿ.ಎನ್.ಪ್ರಕಾಶ್, ಸದಸ್ಯರಾದ ಜಗದೀಶ್, ಶಿವಕುಮಾರ್ ಮುಂತಾದವರು ಹಾಜರಿದ್ದರು.