ಕವಿವಿ ಖೋ ಖೋ ತಂಡಕ್ಕೆ ಕಲ್ಲೂರಿನ ಮೂವರು ಆಯ್ಕೆ

KannadaprabhaNewsNetwork |  
Published : Dec 23, 2024, 01:04 AM IST
18ಜಿಡಿಜಿ18 | Kannada Prabha

ಸಾರಾಂಶ

ಪ್ರಾಥಮಿಕ ಶಾಲೆ ಆರಂಭದಿಂದ ಇಲ್ಲಿಯವರೆಗೆ ದೈಹಿಕ ಶಿಕ್ಷಕರ ನೇಮಕ ಆಗಿಲ್ಲ. ಹೀಗಿದ್ದಾಗ್ಯೂ ಗ್ರಾಮದ ಯುವಕರು ಬೇರೆಡೆ ಖೋ ಖೋ ಕಲಿತು ಇಲ್ಲಿನ ಶಾಲಾ ಮಕ್ಕಳಿಗೆ ತರಬೇತಿ

ಗದಗ: ಕರ್ನಾಟಕ ವಿಶ್ವವಿದ್ಯಾಲಯದ ಪುರುಷರ ಖೋ-ಖೋ ತಂಡಕ್ಕೆ ತಾಲೂಕಿನ ಕಲ್ಲೂರ ಗ್ರಾಮದ ಮೂವರು ಖೋಖೋ ಕ್ರೀಡಾಪಟುಗಳು ಒಂದೇ ವರ್ಷದಲ್ಲಿ ಆಯ್ಕೆಯಾಗುವ ಮೂಲಕ ಜಿಲ್ಲೆಯ ಹೊಸ ಇತಿಹಾಸ ಸರಷ್ಟಿಸಿದ್ದಾರೆ.

ಕಲ್ಲೂರ ಗ್ರಾಮದ ದೇವೇಂದ್ರ ನೆಲೂಗಲ್, ಆದರ್ಶ ಯಳವತ್ತಿ ಹಾಗೂ ಹೊಳಲಪ್ಪ ಬಂಡಿವಡ್ಡರ ಖೋಖೋ ತಂಡಕ್ಕೆ ಆಯ್ಕೆಯಾದ ಪ್ರತಿಭೆಗಳು. ಇವರು ಗದಗ ನಗರದಲ್ಲಿನ ಬೇರೆ ಬೇರೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಆಯ್ಕೆ ಗ್ರಾಮಸ್ಥರಲ್ಲಿ ಹರ್ಷ ಮೂಡಿಸಿದೆ.

ಡಿ. 27 ರಿಂದ ಡಿ.31ರ ವರೆಗೆ ತಮಿಳುನಾಡಿನ ಕೇಂದ್ರಿಯ ವಿಶ್ವವಿದ್ಯಾಲಯದಲ್ಲಿ ನಡೆಯುವ ಅಂತರ ವಿಶ್ವವಿದ್ಯಾಲಯಗಳ ಖೋ ಖೋ ಕ್ರೀಡಾ ಸ್ಪರ್ಧೆಯಲ್ಲಿ ಈ ಮೂವರು ಕವಿವಿ ತಂಡ ಪ್ರತಿನಿಧಿಸಲಿದ್ದಾರೆ.

ಗ್ರಾಮಸ್ಥರ ಸಹಕಾರ: ಪ್ರಾಥಮಿಕ ಶಾಲೆ ಆರಂಭದಿಂದ ಇಲ್ಲಿಯವರೆಗೆ ದೈಹಿಕ ಶಿಕ್ಷಕರ ನೇಮಕ ಆಗಿಲ್ಲ. ಹೀಗಿದ್ದಾಗ್ಯೂ ಗ್ರಾಮದ ಯುವಕರು ಬೇರೆಡೆ ಖೋ ಖೋ ಕಲಿತು ಇಲ್ಲಿನ ಶಾಲಾ ಮಕ್ಕಳಿಗೆ ತರಬೇತಿ ನೀಡುತ್ತಿದ್ದು, ಶಾಲಾ ಮಟ್ಟದ ಕ್ರೀಡಾಕೂಟದಲ್ಲೂ ಸೈ ಎನಿಸಿಕೊಂಡಿದ್ದಾರೆ‌. ಕಳೆದೆರಡು ವರ್ಷಗಳಿಂದ ಪ್ರಕಾಶ ಪೂಜಾರ ಎಂಬುವರು ಖೋ-ಖೋ ತರಬೇತಿ ನೀಡುತ್ತಿದ್ದು, ಡ್ರೀಮ್ ಅಚೀವರ್ಸ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಖೋ-ಖೋ ಕ್ರೀಡೆ ಗ್ರಾಮದಲ್ಲಿ ಬೆಳೆಯುತ್ತಿದೆ. ಗ್ರಾಮದ ಪ್ರಾಥಮಿಕ ಶಾಲಾ ಆವರಣದಲ್ಲಿ ನಿತ್ಯ ಬೆಳಗಿನ ಜಾವ, ಸಂಜೆ ಖೋ-ಖೋ ಅಭ್ಯಾಸದಲ್ಲಿ ನಿರತರಾಗುವ ಕ್ರೀಡಾಪಟುಗಳಿಗೆ ಗ್ರಾಮಸ್ಥರೇ ಅಗತ್ಯ ಸೌಲಭ್ಯ ಒದಗಿಸುತ್ತಿದ್ದಾರೆ.

ಕರ್ನಾಟಕ ವಿಶ್ವವಿದ್ಯಾಲಯ ಖೋ ಖೋ ತಂಡ ಪ್ರತಿನಿಧಿಸುವುದು ನಮ್ಮ ಕನಸಾಗಿತ್ತು. ಅದು ಮೊದಲ ಪ್ರಯತ್ನದಲ್ಲೇ ಈಡೇರಿದ್ದು ಸಂತಸ ಇಮ್ಮಡಿಗೊಳಿಸಿದೆ ಎಂದು ಕ್ರೀಡಾಪಟುಗಳಾದ ಆದರ್ಶ, ಹೊಳಲಪ್ಪ ಹೇಳಿದ್ದಾರೆ.

ಕಲ್ಲೂರ ಗ್ರಾಮದಲ್ಲಿ ಉತ್ತಮ ಖೋ-ಖೋ ಕ್ರೀಡಾಪಟುಗಳಿದ್ದು, ಅವರಿಗೆ ಇನ್ನಷ್ಟು ತರಬೇತಿ ಅವಶ್ಯಕತೆ ಇದೆ. ಅಲ್ಪಾವಧಿಯ ತರಬೇತಿಯಲ್ಲಿ ಮೂವರು ಕವಿವಿ ತಂಡಕ್ಕೆ ಆಯ್ಕೆ ಆಗಿರುವುದು ಖುಷಿ ಕೊಟ್ಟಿದೆ ಎಂದು ತರಬೇತುದಾರ ಪ್ರಕಾಶ್ ಪೂಜಾರ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮೆಜೆಸ್ಟಿಕ್‌ನಲ್ಲಿ ಸಿಂಗಾಪುರ ಮೀರಿಸುವ ಪ್ರಾಜೆಕ್ಟ್‌ ಮೆಜೆಸ್ಟಿಕ್‌
ಬೀಗ ಹಾಕಿದ ಮನೆಗಳಿಗೆ ಕನ್ನಹಾಕುತ್ತಿದ್ದ ಐವರು ಕಳ್ಳರ ಸೆರೆ