ಪಿಡಿಒ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಓರ್ವನ ಬಂಧನ; 12 ಪರೀಕ್ಷಾರ್ಥಿಗಳ ಮೇಲೆ ಪ್ರಕರಣ ದಾಖಲು

KannadaprabhaNewsNetwork |  
Published : Nov 19, 2024, 12:51 AM ISTUpdated : Nov 19, 2024, 12:36 PM IST
Five-people-were-arrested-today-by-Bahraich-Police-in-the-case-of-shooting-dead-a-youth-in-Maharajganj

ಸಾರಾಂಶ

ಪಿಡಿಒ ಪರೀಕ್ಷೆಯಲ್ಲಿ ಪಶುಪತಿ ಎಂಬ ಪರೀಕ್ಷಾರ್ಥಿ ಪ್ರಶ್ನೆ ಪತ್ರಿಕೆಗಳನ್ನು ವಿತರಿಸುವ ಸಮಯದಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್ ಮೊದಲೇ ತೆಗೆಯಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ಪ್ರಶ್ನೆ ಪತ್ರಿಕೆಗಳು ಬಯಲಾಗಿದೆ ಎಂದು ಕೂಗುತ್ತಾ ಸುಳ್ಳು ಸುದ್ದಿಯನ್ನು ಹಬ್ಬಿಸಿದ 12 ಮಂದಿಯ ಮೇಲೆ ಪ್ರಕರಣ  

 ಸಿಂಧನೂರು : ಕರ್ನಾಟಕ ಲೋಕಸೇವಾ ಆಯೋಗದಿಂದ ಭಾನುವಾರ ಸಿಂಧನೂರು ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನಲ್ಲಿ ನಡೆದ ಪಿಡಿಒ ಹುದ್ದೆಯ ಪರೀಕ್ಷೆಯಲ್ಲಿ ಕೆಲ ಪರೀಕ್ಷಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿ ಗೊಂದಲ ಸೃಷ್ಠಿ ಮಾಡಿದ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಬಸವರಾಜ್ ತಡಕಲ್ ನೀಡಿದ ದೂರಿನ ಮೇಲೆ 12 ಪರೀಕ್ಷಾರ್ಥಿಗಳ ಮೇಲೆ ಪ್ರಕರಣ ದಾಖಲಾಗಿದ್ದು ಪಶುಪತಿ ಎಂಬ ಪರೀಕ್ಷಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.

ಪರೀಕ್ಷೆಯಲ್ಲಿ ಪಶುಪತಿ ಎಂಬ ಪರೀಕ್ಷಾರ್ಥಿ ಪ್ರಶ್ನೆ ಪತ್ರಿಕೆಗಳನ್ನು ವಿತರಿಸುವ ಸಮಯದಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್ ಮೊದಲೇ ತೆಗೆಯಲಾಗಿದೆ ಎಂದು ಅನುಮಾನ ವ್ಯಕ್ತಪಡಿಸಿ ಪ್ರಶ್ನೆ ಪತ್ರಿಕೆಗಳು ಬಯಲಾಗಿದೆ ಎಂದು ಕೂಗುತ್ತಾ ಸುಳ್ಳು ಸುದ್ದಿಯನ್ನು ಹಬ್ಬಿಸಿ, ಪರೀಕ್ಷಾರ್ಥಿಗಳಿಗೆ ಪ್ರಚೋದನೆ ಮಾಡಿ ಹೊರಗೆ ಕರೆ ತಂದದಲ್ಲದೆ, ಸಿಂಧನೂರು-ಕುಷ್ಟಗಿ ಮುಖ್ಯ ಹೆದ್ದಾರಿಯಲ್ಲಿ ಕುಳಿತು ವಾಹನ ಮತ್ತು ಸಾರ್ವಜನಿಕ ಸಂಚಾರ ತಡೆದು ಪ್ರತಿಭಟಿಸಿ, ಪರೀಕ್ಷೆ ನಡೆಸಲು ತೊಂದರೆ ಮಾಡಿರುವುದು ಬೆಳಕಿಗೆ ಬಂದಿದೆ.

ಪಶುಪತಿಯ ಜೊತೆಗೆ ಸುರಪುರದ ಬಾಬು, ಅಯ್ಯನಗೌಡ, ಅಮಿತ್, ವೆಂಕಟೇಶ್, ರವಿಶಂಕರ್, ವಿಶ್ವರಾಧ್ಯ, ಬಸವರಾಜ್, ವೆಂಕಟೇಶ್, ರಾಘವೇಂದ್ರ, ಸಾಬರೆಡ್ಡಿ ಅವರು ಸಹ ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಬಸವರಾಜ್ ತಡಕಲ್ ದೂರು ನೀಡಿದ್ದು, ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಪೊಲೀಸ್ ಇನ್ಸ್ ಪೆಕ್ಟರ್ ದುರುಗಪ್ಪ ಡೊಳ್ಳಿನ ತನಿಖೆ ಕೈಗೊಂಡಿದ್ದಾರೆ.ಪಿಡಿಒ ಪರೀಕ್ಷೆ ವಿವಾದ: ಕೆಪಿಎಸ್ಸಿಗೆ ಡಿಸಿ ವರದಿ ಸಿಂಧನೂರು: ಇಲ್ಲಿನ ಸರ್ಕಾರಿ ಮಹಾವಿದ್ಯಾಲಯದಲ್ಲಿ ಭಾನುವಾರ ಮೊದಲ ಅವಧಿಯಲ್ಲಿ ನಡೆದ ಪಿಡಿಒ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆಗಳ ಅದಲು ಬದಲು ,ಸೋರಿಕೆಗೆ ಸಂಬಂಧಿಸಿದಂತೆ ತಹಸಿಲ್ದಾರ್ ಅರುಣ್ ಕುಮಾರ್ ದೇಸಾಯಿ ಜಿಲ್ಲಾಧಿಕಾರಿಗಳಿಗೆ ಪ್ರಾಥಮಿಕ ವರದಿ ಸಲ್ಲಿಸಿದ್ದಾರೆ.

ಈ ಕುರಿತು ''''''''ಕನ್ನಡ ಪ್ರಭ'''''''' ತಹಸೀಲ್ದಾರ್‌ರನ್ನು ಮಾತನಾಡಿಸಿದಾಗ ಸರ್ಕಾರಿ ಕಾಲೇಜಿನಲ್ಲಿ ಅಳವಡಿಸಲಾಗಿರುವ ಸಿಸಿಟಿವಿ ಫುಟೇಜ್‌ಗಳನ್ನು ತರಿಸಿಕೊಂಡು ಅವುಗಳ ಮಾಹಿತಿ ಆಧಾರದ ಮೇಲೆ ವರದಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ಜಿಲ್ಲಾಧಿಕಾರಿಗಳು ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯ ದರ್ಶಿಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದರು.

ಭಾನುವಾರ ಸರ್ಕಾರಿ ಕಾಲೇಜಿನ ಮುಂದೆ ನೂರಾರು ಪಿಡಿಒ ಪರೀಕ್ಷಾರ್ಥಿಗಳು ರಾಜ್ಯ ಹೆದ್ದಾರಿ ತಡೆದು ಪ್ರತಿಭಟನೆ ಮಾಡಿ ನಾಲ್ಕು ತಾಸು ಸಂಚಾರ ವ್ಯವಸ್ಥೆಯನ್ನು ಬಂದ್ ಮಾಡಿದ್ದರು. ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾಡಳಿತ ನಡೆದಿರುವ ಘಟನೆಗಳ ವರದಿಯನ್ನು ಕೆಪಿಎಸ್ಸಿ ಕಾರ್ಯದರ್ಶಿಗೆ ಮಾಹಿತಿ ನೀಡಿದ್ದಾರೆ. ಮುಂದೆ ಪರೀಕ್ಷೆಯನ್ನು ಬಹಿಷ್ಕರಿಸಿದ ಪರೀಕ್ಷಾರ್ಥಿಗಳಿಗೆ ಮರು ಪರೀಕ್ಷೆ ನಡೆಸುತ್ತಾರೋ ಅಥವಾ ಅವರನ್ನು ಗೈರು ಹಾಜರಾಗಿದ್ದಾರೆಂದು ಪರಿಗಣಿಸುತ್ತಾರೋ ಎಂಬ ನಿರ್ಧಾರವನ್ನು ಕೆಪಿಎಸ್ಸಿಯೇ ತೆಗೆದುಕೊಳ್ಳಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಚಾಲಕನ ನಿಯಂತ್ರಣ ತಪ್ಪಿ ಗ್ಯಾಸ್ ತುಂಬಿದ್ದ ಟ್ಯಾಂಕರ್ ಪಲ್ಟಿ: ತಪ್ಪಿದ ಭಾರೀ ದುರಂತ
ಮುತ್ತೋಡಿ ಅರಣ್ಯ ಪ್ರದೇಶದಲ್ಲಿ ಭಾರೀ ಕಾಡ್ಗಿಚ್ಚು