ಶಿರಹಟ್ಟಿ: ಆಧ್ಯಾತ್ಮಿಕ, ಪಾರಲೌಕಿಕ ದೃಷ್ಟಿಯಿಂದ ಗ್ರಾಮದೇವತೆಗಳು ಆ ಗ್ರಾಮದ ರಕ್ಷಕ ಶಕ್ತಿಗಳು. ಅವರ ಅನುಮತಿ ಇಲ್ಲದೇ ಆ ಊರಲ್ಲಿ ಬೇರೆ ಶಕ್ತಿಗಳು ಪ್ರವೇಶಿಸುವುದಿಲ್ಲ. ಆ ಕಾರಣಕ್ಕಾಗಿಯೇ ನಿತ್ಯವೂ ಗ್ರಾಮ ದೇವತೆ ದ್ಯಾಮವ್ವದೇವಿ ಆರಾಧನೆ ಮಾಡುವುದು ನಿರಂತರವಾಗಿ ದೇವಿಯ ಸೇವೆಯಲ್ಲಿ ತೊಡಗುವುದರಿಂದ ಶಾಂತಿ,ನೆಮ್ಮದಿ ಸಾಧ್ಯ ಎಂದು ಶ್ರೀದೇವಿ ಜಾತ್ರಾ ಮಹೋತ್ಸವದ ಮಾರ್ಗದರ್ಶಕ ಎನ್.ಆರ್. ಕುಲಕರ್ಣಿ ಹೇಳಿದರು.
ಶಿರಹಟ್ಟಿ ಭಾವೈಕ್ಯತೆಗೆ ಹೆಸರಾಗಿದ್ದು, ಇಲ್ಲಿ ಯಾವುದೇ ಧರ್ಮದ ಜಾತ್ರೆ, ಸಡಗರ,ಸಂಭ್ರಮದ ಕಾರ್ಯಗಳು ನಡೆದರೂ ಎಲ್ಲ ಜನಾಂಗದವರು ಸೇರಿಕೊಂಡು ಆಚರಣೆ ಮಾಡುವುದು ಹಿಂದಿನಿಂದಲೂ ಇದೆ. ಜಗತ್ತಿನ ಸೃಷ್ಟಿಗೆ ತಾಯಿಯೇ ಕಾರಣ. ತಾಯಿ ಇಲ್ಲದ ಜಗತ್ತನ್ನು ಕಲ್ಪನೆ ಮಾಡಲೂ ಸಾಧ್ಯವಿಲ್ಲ. ಸೃಷ್ಟಿಯ ಸಂಚಲನ, ಸೃಷ್ಟಿಯ ವಿಸ್ತರಣೆ ಆಗಲೂ ಸಾಧ್ಯವಿಲ್ಲ ಎಂದ ಅವರು ಗ್ರಾಮ ದೇವತೆ ಶ್ರೀ ದ್ಯಾಮವ್ವದೇವಿ ಜಾತ್ರಾ ಮಹೋತ್ಸ ಕಾರ್ಯಕ್ರಮದಲ್ಲಿ ನಾವು ನೀವೆಲ್ಲರೂ ಪಾಲ್ಗೊಂಡಿದ್ದು ಸಂತಸ ತಂದಿದೆ. ನಿಮ್ಮೆಲ್ಲರ ಸಹಕಾರ ಇದೇ ರೀತಿ ಮುಂದುವರೆಯಲಿ ಎಂದು ತಿಳಿಸಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿಂಗಪ್ಪ ಓಲೇಕಾರ ಮಾತನಾಡಿ, ನಮ್ಮ ಭಾರತೀಯ ಜೀವನ ಪದ್ಧತಿಯಲ್ಲಿ ಪರಮಾತ್ಮನಿಗೆ ಪ್ರಥಮ ಆದ್ಯ ಸ್ಥಾನ ನೀಡಲಾಗಿದೆ. ಅತನನ್ನು ಪೂಜಿಸಿ ಜ್ಞಾನಿಸುವದು ನಿಜವಾದ ಜೀವನ.ಸಮಾಜದಲ್ಲಿ ಎಲ್ಲರೂ ಮಾನವೀಯ ಮೌಲ್ಯ ಬೆಳೆಸಿಕೊಳ್ಳುವುದರೊಂದಿಗೆ ದೈಹಿಕ, ಭಾವನಾತ್ಮಕ, ಬೌದ್ಧಿಕ ಕಾರ್ಯ ಸಾಧನೆ ಮಾಡಬೇಕು. ಇಂದು ನಿರ್ಗುಣ, ನಿರಾಕಾರ ಭಕ್ತಿಯ ಮಾರ್ಗ ಬೇಕಾಗಿದೆ. ಆಟೋಟ, ಟೀಕೆಯಲ್ಲಿ ಜೀವನ ಕಳೆಯದೇ, ಆಡಂಬರದ ಭಕ್ತಿ ತೊರೆದು ಜಾಗೃತ ಸ್ಥಿತಿಯಲ್ಲಿ ನಡೆಯಬೇಕಾಗಿದೆ ಎಂದರು.ಶಾಸಕ ಚಂದ್ರು ಲಮಾಣಿ ಕಾರ್ಯಕ್ರಮ ಉದ್ಘಾಟಿಸಿದರು. ವೇದಿಕೆ ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದ ಪಪಂ ಮಾಜಿ ಅಧ್ಯಕ್ಷ ನಾಗರಾಜ ಲಕ್ಕುಂಡಿ, ಶಿರಹಟ್ಟಿ ಪೊಲೀಸ್ ಠಾಣೆ ಪಿಎಸ್ಐ ಈರಪ್ಪ ರಿತ್ತಿ, ಪಪಂ ಸದಸ್ಯ ಫಕ್ಕೀರೇಶ ರಟ್ಟಿಹಳ್ಳಿ ಮಾತನಾಡಿದರು.