ದೇಶದಲ್ಲಿ ಎಲ್ಲಾ ಧರ್ಮಗಳು ಒಂದಾಗಿ ಸಹಬಾಳ್ವೆ ನಡೆಸುತ್ತಿವೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ನಾವು ಬದುಕಿಬಾಳೋಣ. ಕೆಲವರು ತಮ್ಮ ಸ್ವಾರ್ಥಕ್ಕೆ ಶಾಂತಿ ಕದಡುವ ಕೆಲಸಕ್ಕೆ ಕೈಹಾಕುವವರಿಗೆ, ಒಡಕು ಮಾಡುವವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಶಾಂತಿ, ಸೌಹಾರ್ದತೆ, ಸಹಬಾಳ್ವೆ ಎಲ್ಲಾ ಧರ್ಮಗಳ ಒಂದೇ ಸಾರಾಂಶವಾಗಿದೆ ಅಲ್ಲದೆ ನಾವೆಲ್ಲರೂ ಭಾರತೀಯರು, ಎಲ್ಲಾ ಧರ್ಮದವರು ಸೌಹಾರ್ದತೆಯಿಂದ ಜೀವನ ನಡೆಸುವುದು ಹಾಗೂ ಆರೋಗ್ಯಕರ ಸಮಾಜವನ್ನು ನಿರ್ಮಾಣ ಮಾಡುವ ಏಕೈಕ ಉದ್ದೇಶದಿಂದ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಸೌಹಾರ್ದತೆ ಕರ್ನಾಟಕ ಸಂಘಟನೆ ವತಿಯಿಂದ ಸೌಹಾರ್ದತಾ ಮಾನವ ಸರಪಳಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಗತಿಪರ ಚಿಂತಕರು, ಕನ್ನಡ ಪರ ಸಂಘಟನೆಗಳು, ದಲಿತ ಸಂಘಟನೆಗಳು, ರೈತ ಸಂಘ, ಹಿಂದೂ,ಮುಸ್ಲಿಂರು, ಕ್ರೈಸ್ತರು ಸೇರಿದಂತೆ ಎಲ್ಲಾ ಧರ್ಮಗಳ ಮುಖಂಡರು ಹಾಗೂ ವಿವಿಧ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ನ್ಯಾಷನಲ್ ಕಾಲೇಜ್ ಮುಂಭಾಗದಿಂದ ಪಟ್ಟಣದ ಕೆಎಸ್ಆರ್ ಟಿಸಿ ಬಸ್ ನಿಲ್ದಾಣದ ಮುಂಭಾಗದವರೆವಿಗೂ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ನಾವೆಲ್ಲ ಭಾರತೀಯರು
ಈ ಸಂದರ್ಭದಲ್ಲಿ ಸೌಹಾರ್ದತಾ ಕರ್ನಾಟಕ ಸಂಘಟನೆ ಮುಖಂಡ ಹಾಗೂ ಹಿರಿಯ ವಕೀಲರಾದ ಎ.ಜಿ.ಸುಧಾಕರ್ ಮಾತನಾಡಿ, ಬಾಗೇಪಲ್ಲಿಯಲ್ಲಿ ಯಾರೇ ಬಂದು ಧರ್ಮ ಧರ್ಮಗಳ ನಡುವೆ ಒಡಕು ಉಂಟು ಮಾಡುವ ಪ್ರಯತ್ನ ಮಾಡಿದರೂ ನಾವು ಒಡಕುಂಟಾಗಲು ಬಿಡಲ್ಲ, ನಾವೆಲ್ಲ ಒಂದೇ, ನಾವೆಲ್ಲ ಭಾರತೀಯರು ಎಂಬುದನ್ನು ಈ ಸೌಹಾರ್ದತಾ ಮಾನವ ಸರಪಳಿ ಮೂಲಕ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದೇವೆ.
ಇಲ್ಲಿ ಎಲ್ಲಾ ಧರ್ಮಗಳು ಒಂದಾಗಿ ಸಹಬಾಳ್ವೆ ನಡೆಸುತ್ತಿವೆ ಮುಂದಿನ ದಿನಗಳಲ್ಲಿಯೂ ಇದೇ ರೀತಿಯಲ್ಲಿ ನಾವು ಬದುಕಿಬಾಳೋಣ. ಕೆಲವರು ತಮ್ಮ ಸ್ವಾರ್ಥಕ್ಕೆ ಶಾಂತಿ ಕದಡುವ ಕೆಲಸಕ್ಕೆ ಕೈಹಾಕಿದರೆ, ಧರ್ಮ ಧರ್ಮಗಳ ನಡುವೆ ವಿಷಭೀಜ ಹಾಕಲು ಬಂದವರಿಗೆ, ಒಡಕು ಮಾಡುವವರಿಗೆ ಯಾವುದೇ ಕಾರಣಕ್ಕೂ ಅವಕಾಶ ನೀಡಬೇಡಿ ಎಂದು ಮನವಿ ಮಾಡಿದರು.
ಸಂವಿಧಾನ ಪಾಲನೆ ಮಾಡಿ
ಇಲ್ಲಿ ಯಾವುದೇ ಕಾರಣಕ್ಕೂ ಶಾಂತಿ ಸೌಹಾರ್ದತೆಗೆ ಧಕ್ಕೆಯಾಗದಂತೆ ಹಾಗೂ ನಮ್ಮನಮ್ಮಲ್ಲಿ ಯಾವುದೇ ಒಡಕು ಉಂಟಾಗದಂತೆ ಒಗ್ಗಟ್ಟಾಗಿ ಎಲ್ಲರೂ ಒಂದಾಗಿ ಸ್ವಾರ್ಥಿಗಳ ವಿರುದ್ದ ಸಮರ ಸಾರಲು ಪ್ರತಿಯೊಬ್ಬರು ಕೈಜೋಡಿಸಬೇಕು. ಇದಕ್ಕೂ ಮೊದಲು ನಮ್ಮ ದೇಶದ ಸಂವಿಧಾನವನ್ನು ಓದಿ, ಸಂವಿಧಾನವನ್ನು ಒಪ್ಪಿ ನಾವು ಅಳವಡಿಸಿಕೊಂಡಿದ್ದೇವೆ, ಸಂವಿಧಾನವನ್ನು ಸಮರ್ಪಕವಾಗಿ ಪಾಲನೆ ಮಾಡುವುದಲ್ಲದೆ ಸಂವಿಧಾನವನ್ನು ಸಂರಕ್ಷಣೆ ಮಾಡುವುದಾಗಿ ಈ ಸಂದರ್ಭದಲ್ಲಿ ಪ್ರತಿಜ್ಞೆ ಮಾಡಿದರು.
ಈ ಸಂದರ್ಭದಲ್ಲಿ ಸೌಹಾರ್ದತಾ ಕರ್ನಾಟಕದ ಮುಖಂಡರಾದ ರಾಮಕೃಷ್ಣಪ್ಪ, ಟಿ.ರಘುನಾಥರೆಡ್ಡಿ, ನಾರಾಯಣಸ್ವಾಮಿ, ಚೆನ್ನರಾಯಪ್ಪ, ರಾಮಲಿಂಗಪ್ಪ, ಮಹಮ್ಮದ್ ನೂರೂಲ್ಲಾ, ದಲಿತ ಮುಖಂಡರಾದ ಲಕ್ಷ್ಮೀನರಸಿಂಹಪ್ಪ, ನಾಗಪ್ಪ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.