ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ
ಭಗವಂತನ ಆರಾಧನೆಯಿಂದ ನಾಡಿನಲ್ಲಿ ಸುಖ-ಶಾಂತಿ, ನೆಮ್ಮದಿ ಇರುತ್ತದೆ ಎಂದು ರಾಜ್ಯ ವಿಮಾ ಸಹಕಾರ ಮಹಾಮಂಡಳ ಅಧ್ಯಕ್ಷ ಶಿವನಗೌಡ ಬಿರಾದಾರ ಹೇಳಿದರು.ಪಟ್ಟಣದ ಮರಗಮ್ಮದೇವಿ ದೇವಸ್ಥಾನದ ಜಾತ್ರಾಮಹೋತ್ಸವದಂಗವಾಗಿ ಹಮ್ಮಿಕೊಂಡಿರುವ ಗುಡ್ಡಾಪುರದ ದಾನಮ್ಮಮಮದೇವ ಪುರಾಣವನ್ನು ಸೋಮವಾರ ಸಂಜೆ ಉದ್ಘಾಟಿಸಿ ಮಾತನಾಡಿದ ಅವರು, ಮೊದಲು ಸಣ್ಣ ಪ್ರಮಾಣದಲ್ಲಿದ್ದ ಮರಗಮ್ಮದೇವಿ ದೇವಸ್ಥಾನವನ್ನು ಇದೀಗ ಎಲ್ಲ ಜನರ ಸಹಕಾರದಿಂದ ಉತ್ತಮವಾದ ದೇವಸ್ಥಾನವನ್ನಾಗಿ ನಿರ್ಮಾಣ ಮಾಡಿದ್ದು ಶ್ಲಾಘನೀಯ. ಇಲ್ಲಿನ ದೇವಸ್ಥಾನ ಸಮಿತಿಯವರು ಜಾತ್ರಾಮಹೋತ್ಸವದಂಗವಾಗಿ ಪುರಾಣ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿರುವುದು ಒಳ್ಳೆಯದು ಎಂದರು.
ಯುವ ಮುಖಂಡ ಸಂಗಮೇಶ ಓಲೇಕಾರ ಮಾತನಾಡಿ, ಮನುಷ್ಯನು ಕೇವಲ ಬಾಹ್ಯವಾಗಿ ಶುಚಿಯಾದರೆ ಸಾಲದು. ಅಂತರಂಗವೂ ಶುಚಿಯಾಗಬೇಕು. ಅಂತರಂಗ ಶುಚಿಯಾಗಬೇಕಾದರೆ ಪುರಾಣ-ಪ್ರವಚನ ಆಲಿಸಬೇಕು. ಇಂತಹ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಜನತೆ ಭಾಗವಹಿಸುವ ಮೂಲಕ ತಮ್ಮ ಅಂತರಂಗವನ್ನು ಶುದ್ಧಿ ಮಾಡಿಕೊಂಡು ಉತ್ತಮ ಜೀವನ ಸಾಗಿಸಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಮಾತನಾಡಿ, ಈ ದೇವಸ್ಥಾನದ ಸುತ್ತಮುತ್ತಲಿನ ಎಲ್ಲ ಜನರು ಒಂದಾಗಿ ಮರಗಮ್ಮದೇವಿ ಜಾತ್ರೆ ಮಾಡುತ್ತಿರುವುದು ಶ್ಲಾಘನೀಯ. ಈ ದೇವಸ್ಥಾನವು ಯಾವುದೇ ಅನುದಾನದ ಸಹಾಯವಿಲ್ಲದೇ ನಿರ್ಮಾಣ ಮಾಡಿದ್ದಾರೆ. ಊರುಗಳಲ್ಲಿ ದೇವಸ್ಥಾನಗಳು ಇದ್ದರೆ ಶಾಂತಿ,ನೆಮ್ಮದಿ ಇರಲು ಸಾಧ್ಯ. ಪಟ್ಟಣದಲ್ಲಿರುವ ವಿರಕ್ತಮಠದ ಶ್ರೀಗಳು ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಸಂಘಟಿಸಿ ಅವುಗಳು ನಡೆಯುವಂತೆ ಮಾಡಿದರೆ, ಹಿರೇಮಠದ ಶ್ರೀಗಳು ತಮ್ಮ ಪ್ರವಚನ ಮೂಲಕ ನಾಡಿನ ತುಂಬಾ ತಮ್ಮ ಆಧ್ಯಾತ್ಮಿಕ ಜ್ಞಾನವನ್ನು ಪಸರಿಸುತ್ತಾರೆ ಎಂದರು.
ಪ್ರವಚನಕಾರ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಈ ಬಸವನಾಡಿನಲ್ಲಿ ನಾವು ಜನಿಸಿದ್ದು ನಮ್ಮೆಲ್ಲರ ಪುಣ್ಯ. ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿಯೇ ಎಲ್ಲರೂ ನಡೆಯುವಂತಾಗಬೇಕು. ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕಾದರೆ ಎಲ್ಲರ ಸಹಕಾರ ಮುಖ್ಯವಾಗಿದೆ ಎಂದರು.ಸಾನ್ನಿಧ್ಯ ವಹಿಸಿದ್ದ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ, ಮುಖಂಡರಾದ ಬಿ.ಕೆ.ಕಲ್ಲೂರ, ಜಗದೀಶ ಕೊಟ್ರಶೆಟ್ಟಿ ಮಾತನಾಡಿದರು. ವೇದಿಕೆಯಲ್ಲಿ ಮುಖಂಡರಾದ ಅಂಬೋಜಿ ಪವಾರ, ಮುರಗೆಪ್ಪ ಚಿಂಚೋಳಿ, ಸುರೇಶ ಹಾರಿವಾಳ, ಶೇಖರ ಗೊಳಸಂಗಿ, ಬಸವರಾಜ ಹಾರಿವಾಳ, ಜಗದೇವಿ ಗುಂಡಳ್ಳಿ, ಯಮನೂರಿ ಬಿದರಕುಂದಿ, ಸಂಗಯ್ಯ ಕಾಳಹಸ್ತೇಶ್ವರಮಠ, ಶಿವಾಜಿ ಜಗತಾಪ, ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಸುರೇಶ ಪಡಶೆಟ್ಟಿ, ಉಪಾಧ್ಯಕ್ಷ ಶಿವಾಜಿ ಪವಾರ ಇದ್ದರು. ಬಸವರಾಜ ಚಿಂಚೋಳಿ ಸ್ವಾಗತಿಸಿದರು. ಪಿ.ಎಸ್.ಬಾಗೇವಾಡಿ, ಕೊಟ್ರೇಶ ಹೆಗಡ್ಯಾಳ ನಿರೂಪಿಸಿದರು. ಎಸ್.ಪಿ.ಮಡಿಕೇಶ್ವರ ವಂದಿಸಿದರು.
----