ಸ್ವಾವಲಂಬನೆಯಿಂದ ಬದುಕಬೇಕೆಂಬ ಬಯಕೆ ನಮ್ಮದಾದರೆ ನೆಮ್ಮದಿ ಸಾಧ್ಯ-ದಯಾಶೀಲ

KannadaprabhaNewsNetwork | Updated : Sep 28 2024, 01:16 AM IST

ನನ್ನಂತೆ ಎಲ್ಲರೂ ನೆಮ್ಮದಿಯಿಂದ ಬದುಕಲು ಬಿಡಬೇಕು, ಲೋಕ ಕಲ್ಯಾಣಕ್ಕಾಗಿ ಮಿಡಿಯಬೇಕು, ಸ್ವಾವಲಂಬನೆಯಿಂದ ಬದುಕಬೇಕೆಂಬ ಬಯಕೆ ನಮ್ಮದಾದರೆ ಎಲ್ಲೆಡೆ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಧಾರವಾಡ ಪ್ರಾದೇಶಿಕ ವಿಭಾಗದ ನಿರ್ದೇಶಕಿ ದಯಾಶೀಲ ತಿಳಿಸಿದರು.

ಹಾನಗಲ್ಲ: ನನ್ನಂತೆ ಎಲ್ಲರೂ ನೆಮ್ಮದಿಯಿಂದ ಬದುಕಲು ಬಿಡಬೇಕು, ಲೋಕ ಕಲ್ಯಾಣಕ್ಕಾಗಿ ಮಿಡಿಯಬೇಕು, ಸ್ವಾವಲಂಬನೆಯಿಂದ ಬದುಕಬೇಕೆಂಬ ಬಯಕೆ ನಮ್ಮದಾದರೆ ಎಲ್ಲೆಡೆ ಶಾಂತಿ ನೆಮ್ಮದಿ ನೆಲೆಸಲು ಸಾಧ್ಯ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಧಾರವಾಡ ಪ್ರಾದೇಶಿಕ ವಿಭಾಗದ ನಿರ್ದೇಶಕಿ ದಯಾಶೀಲ ತಿಳಿಸಿದರು.ಶುಕ್ರವಾರ ಹಾನಗಲ್ಲಿನ ಶ್ರೀಕುಮಾರೇಶ್ವರ ವಿರಕ್ತಮಠದ ಸದಾಶಿವ ಮಂಗಲ ಭವನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಆಯೋಜಿಸಿದ ಸಂಘಗಳ ಒಕ್ಕೂಟಗಳ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸಬಲೀಕರಣದ ಮೂಲಕ ಸಾಮಾಜಿಕ ಸ್ವಾಸ್ಥ್ಯಕ್ಕಾಗಿ ಕಂಕಣಬದ್ಧವಾದ ಧರ್ಮಸ್ಥಳ ವೀರೇಂದ್ರ ಹೆಗ್ಗಡೆಯವರ ಪರಿಕಲ್ಪನೆಯ ಸಂಸ್ಥೆ ಈಗ ಪ್ರತಿ ಗ್ರಾಮ ಮಟ್ಟದಲ್ಲಿ ಸಾಧನೆ ಮಾಡಿದೆ. ಗ್ರಾಮೀಣ ಜನರ ಪ್ರಗತಿ ಸಕಾರಾತ್ಮಕ ಪರಿವರ್ತನೆಯೇ ನಮ್ಮ ಗುರಿ. ಸಮರ್ಪಣಾ ಮನೋಭಾವದಿಂದ ಸೇವೆ ಸಲ್ಲಿಸುತ್ತಿರುವುದರಿಂದಲೇ ಇಂದು ಸಂಘದ ಮಹಿಳೆಯರು ಆರ್ಥಿಕ ಸಾಮಾಜಿಕ ಕೌಟುಂಬಿಕ ಉನ್ನತಿಯಲ್ಲಿದ್ದಾರೆ. ಸಾಮರಸ್ಯದ ಮಂತ್ರ ಸಾಕಾರವಾಗಿದೆ. ನಾನು ಮಾತ್ರ ನೆಮ್ಮದಿಯಿಂದಿದ್ದರೆ ಸಾಲದು ನನ್ನೊಂದಿಗಿರುವ ಇಡೀ ಸಮಾಜ ಚನ್ನಾಗಿದ್ದರೆ ಮಾತ್ರ ನಾನು ನೆಮ್ಮದಿಯಿಂದಿರಲು ಸಾಧ್ಯ ಎಂದರು.ಹಾವೇರಿ ಐಡಿಬಿಐ ಬ್ಯಾಂಕ್‌ ಪ್ರಬಂಧಕ ಸೋಮಶೇಖರ ಮಾತನಾಡಿ, ಆರ್ಥಿಕ ಸಂಸ್ಥೆಗಳ ವ್ಯವಹಾರದಲ್ಲಿ ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡುವ ಸ್ವಚ್ಛ ಮನಸ್ಸು ಬೇಕು. ವಾಣಿಜ್ಯ ಸಂಸ್ಥೆಗಳು ಸಾಲ ವಿತರಣೆ ಮರುಪಾವತಿಯ ವಿಷಯದಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗುವುದಿಲ್ಲ. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ. ಧರ್ಮಸ್ಥಳ ಸಂಘಗಳಿಗೆ ಕೊಡಮಾಡುವ ಸಾಲದ ವಿಷಯದಲ್ಲಿ ಈ ಸಂಸ್ಥೆ ಹೆಚ್ಚಿನ ಹೊಣೆಗಾರರಾಗಿ ಸಾಲ ಸೌಲಭ್ಯಕ್ಕೆ ಸಹಕರಿಸುತ್ತಿದ್ದಾರೆ. ಮನೆ ಬಾಗಿಲಲ್ಲೆ ಸಿಗುವ ಸಾಲ ಸೌಲಭ್ಯದ ಸದುಪಯೋಗ ಮರುಪಾವತಿಯಾಗಲಿ ಎಂದರು.ಸಂಘದ ಜಿಲ್ಲಾ ನಿರ್ದೇಶಕ ಶಿವರಾಯಪ್ರಭು ಮಾತನಾಡಿ, ಆರ್ಥಿಕ ವ್ಯವಹಾರ ಮಾಡುವ ಸಂಘ ಸಂಸ್ಥೆಗಳಿಗೆ ಹಣದ ಮಹತ್ವ ತಿಳಿದಿರಬೇಕು. ಕೊಡುವವರು ಕೊಳ್ಳುವವರ ನಡುವೆ ಸೌಹಾರ್ದ ಸಂಬಂಧವೂ ಇರಬೇಕು. ಹಳ್ಳಿ ಹಳ್ಳಿಗಳಲ್ಲಿ ಸಾವಿರಾರು ಸಂಘಗಳ ಮೂಲಕ ಪ್ರತಿ ತಾಲೂಕಿನಲ್ಲಿ ಮಹಿಳೆಯವರು ಆರ್ಥಿಕ ಸುವ್ಯವಹಾರ ಹಾಗೂ ಸಾಲ ಪಡೆದು, ಸಕಾಲಿಕವಾಗಿ ಮರುಪಾವತಿ ಮಾಡುವ ಮೂಲಕ ನೂರಕ್ಕೆ ನೂರು ಸಾಧನೆಯಲ್ಲಿವೆ. ಮಹಿಳೆ ಮನಸ್ಸು ಮಾಡಿದರೆ ಎಂತಹ ಕಷ್ಟಕರ ಕೆಲಸವನ್ನೂ ಸುಲಭವಾಗಿಸಬಲ್ಲಳು ಎಂದರು.ಪುರಸಭೆ ಅಧ್ಯಕ್ಷೆ ಮಮತಾ ಆರೆಗೊಪ್ಪ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಸದಸ್ಯರಾದ ನಾರಾಯಣಸ್ವಾಮಿ, ವಾಸುದೇವಮೂರ್ತಿ ಮೂಡಿ, ನಾಗರಾಜ ಪಾವಲಿ, ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ, ಧರ್ಮಸ್ಥಳ ಸಂಸ್ಥೆ ತಾಲೂಕು ಯೋಜನಾಧಿಕಾರಿ ರಾಘವೇಂದ್ರ ಪಟಗಾರ, ಐಡಿಬಿಐ ಬ್ಯಾಂಕ ಸಹಾಯಕ ಪ್ರಬಂಧಕ ಅಮೃತೇಶ ಇದ್ದರು.