ಬಡವರಿಗೆ ನೆರವಾಗುವ ಸೇವಾ ಕಾರ್ಯಗಳಿಂದ ಮನಸ್ಸಿಗೆ ನೆಮ್ಮದಿ ಸಾಧ್ಯ: ಎಂ.ಲಕ್ಷ್ಮಣ್‌ಗೌಡ

KannadaprabhaNewsNetwork |  
Published : Jun 30, 2026, 01:15 AM IST
೨೯ಕೆಎಲ್‌ಆರ್-೫ಕೋಲಾರದ ಪತ್ರಕರ್ತರ ಭವನದಲ್ಲಿ ಸೋಮವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಹಾಗೂ ಎಲ್.ಜಿ ಫೌಂಡೇಷನ್ ವತಿಯಿಂದ ಪತ್ರಕರ್ತರ ಮಕ್ಕಳಿಗೆ ಹಾಗೂ ೧೧ ಸರ್ಕಾರಿ ಶಾಲೆಯ ೬೦೦ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳನ್ನು ವಿತರಿಸಲಾಯಿತು. | Kannada Prabha

ಸಾರಾಂಶ

ಇದೇ ವೇಳೆ ನಗರ ಮತ್ತು ಸುತ್ತಮುತ್ತಲ ಒಟ್ಟು ೧೧ ಸರ್ಕಾರಿ ಶಾಲೆಗಳ ೬೦೦ಕ್ಕೂ ಹೆಚ್ಚು ಮಕ್ಕಳಿಗೆ ಪರಿಕರಗಳನ್ನು ಗಣ್ಯರು ವಿತರಿಸಿದರು.

ಕನ್ನಡಪ್ರಭ ವಾರ್ತೆ ಕೋಲಾರ

ದೇವರು ಕೊಟ್ಟಿದ್ದರಲ್ಲಿ ಬಡವರಿಗೆ ಸಹಾಯ ಮಾಡುವ ಸೇವಾ ಕಾರ್ಯಗಳು ಮನಸ್ಸಿಗೆ ನೆಮ್ಮದಿ, ಶಾಂತಿ ನೀಡುತ್ತವೆ ಎಂದು ಎಲ್.ಜಿ.ಫೌಂಡೇಷನ್ ಸಂಸ್ಥಾಪಕ ಎಂ.ಲಕ್ಷ್ಮಣ್‌ಗೌಡ ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಹಾಗೂ ಎಲ್.ಜಿ ಫೌಂಡೇಷನ್‌ನಿಂದ ಪತ್ರಕರ್ತರ ಮಕ್ಕಳಿಗೆ ಹಾಗೂ ೧೧ ಸರ್ಕಾರಿ ಶಾಲೆಯ ೬೦೦ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನನ್ನ ಜೀವನದಲ್ಲಿ ಎಲ್ಲಾ ಸಂಪಾದನೆ ಮಾಡಿದ್ದೇನೆ, ಮುಂದೆ ಏನು ಮಾಡಬೇಕು ಎಂಬ ಯೋಚನೆಯಲ್ಲಿದ್ದಾಗ ತನ್ನ ಕುಟುಂಬದವರ ಬೆಂಬಲದಿಂದ ಸಮಾಜ ಸೇವೆ ಮಾಡಲು ಮುಂದಾಗಿ ನಿಸ್ವಾರ್ಥ ಸೇವೆ ಮಾಡುವ ಮೂಲಕ ನನ್ನ ಮನಸ್ಸಿಗೆ ಸಂತೋಷ ಪಡೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರು.

ಕೆಲವರು ರಾಜಕಾರಣಕ್ಕೆ ಬುನಾದಿ ಹಾಕಲು ಸೇವೆ ಮಾಡಲು ಬಂದಿದ್ದಾರೆ ಎಂದು ಅರ್ಥೈಸಿಕೊಳ್ಳುತ್ತಾರೆ. ಕೋಟಿಗಟ್ಟಲೆ ಹಣವಿದ್ದರೂ ಎಂಎಲ್‌ಎ, ಎಂಪಿ ಆಗಲು ಸಾಧ್ಯವಿಲ್ಲ. ಜನರ ಆಶೀರ್ವಾದ, ಪ್ರೀತಿ ಅವರು ನೀಡುವ ಭಿಕ್ಷೆಯಿಂದ ಅಧಿಕಾರ ಪಡೆಯಬಹುದು ಎಂದರು.

ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ನೀವು ಚೆನ್ನಾಗಿ ಓದಿ ಉನ್ನತ ಸ್ಥಾನಕ್ಕೆ ಬರಬೇಕೆಂದು ಅಳಿಲು ಸೇವೆ ಮಾಡುತ್ತಿದ್ದೇನೆ, ಇದರ ಸದುಪಯೋಗ ಪಡೆದುಕೊಳ್ಳಲು ಕೋರಿದರು.

ಖಡ್ಗಕ್ಕಿಂತ ಪೆನ್ನು ಹರಿತವೆಂದು ಜಗಜ್ಜಾಹೀರಾಗಿದೆ. ಅದರಂತೆ ಪತ್ರಕರ್ತರು ಸಮಾಜದ ಅಂಕು ಡೊಂಕುಗಳನ್ನು ತಿದ್ದಿ, ಅವರದೇ ಆದ ಸೇವೆ ನೀಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ನಿಮ್ಮ ಸ್ವಂತಿಕೆ, ಸ್ವಾಭಿಮಾನವನ್ನು ಅಡಮಾನ ಇಡಬೇಡಿ. ಎಷ್ಟೇ ಕಷ್ಟ ಬಂದರೂ ನಿಮ್ಮತನವನ್ನು ಮಾರಿಕೊಳ್ಳಬೇಡಿ ಎಂದು ಕಿವಿಮಾತು ಹೇಳಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಕೆ.ಎಸ್.ಗಣೇಶ್ ಮಾತನಾಡಿ, ನಮ್ಮ ಸಹಕಾರ ಸಂಘದಡಿ ಶೇರುದಾರರಿಗೆ ಬಡ್ಡಿ ರಹಿತ ಸಾಲ, ಯಶಸ್ವಿನಿ ಕಾರ್ಡ್ ವಿತರಣೆ ಹಾಗೂ ಸದಸ್ಯತ್ವ ಅಭಿಯಾನ ಮಾಡಿಕೊಂಡು ಬರುತ್ತಿದ್ದು, ಇದೇ ಮೊದಲ ಬಾರಿಗೆ ಹೊರಗೆ ಬಂದು ಸಹಾಯ ಮಾಡಲು ಮುಂದಾಗಿದ್ದೇವೆ. ಇದಕ್ಕೆಲ್ಲಾ ಕಾರಣರೂ ಎಲ್.ಜಿ.ಫೌಂಡೇಷನ್ ಸಂಸ್ಥಾಪಕ ಎಂ.ಲಕ್ಷ್ಮಣ್‌ಗೌಡರು ಎಂದು ಹೇಳಿದರು.

ಕೆಲವರು ರಾಜಕಾರಣದಲ್ಲಿ ಬೆಳೆಯಬೇಕು, ಅತ್ಯುನ್ನತ ಸ್ಥಾನಗಳನ್ನು ಗಳಿಸಬೇಕು ಎಂದು ಸೇವೆ ಮಾಡಲು ಬರುತ್ತಾರೆ. ಆದರೆ ಲಕ್ಷ್ಮಣ್ ಗೌಡರು ಯಾವುದೇ ನಿರೀಕ್ಷೆ, ಆಸೆಪಡದೆ ಜನರ ಸೇವೆ ಮಾಡಲು ಬಂದಿದ್ದಾರೆ. ಸರ್ಕಾರಿ ಶಾಲಾ ಮಕ್ಕಳಿಗೆ ಶೈಕ್ಷಣಿಕವಾಗಿ ಸಹಾಯ ಮಾಡಿದರೆ ಚೆನ್ನಾಗಿ ಓದುತ್ತಾರೆ ಎಂಬ ಅಭಿಲಾಷೆಯಿಂದ ಈ ಸಹಾಯವನ್ನು ಮಾಡಲಾಗುತ್ತಿದೆ ಎಂದರು.

ನಮ್ಮ ಸಹಕಾರ ಸಂಘದಿಂದ ಇನ್ನೂ ವಿವಿಧ ಸಮಾಜಮುಖಿ ಕಾರ್ಯಗಳನ್ನು ಮಾಡಲಾಗುವುದು. ಮುಂದಿನ ದಿನಗಳಲ್ಲಿ ಗ್ರಾಮಾಂತರ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೂ ಶೈಕ್ಷಣಿಕ ಪರಿಕರಗಳ ವಿತರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.

ಎಲ್.ಜಿ. ಫೌಂಡೇಷನ್‌ನ ಎಲ್.ಎಸ್. ಲತಾ ಲಕ್ಷ್ಮಣ್‌ಗೌಡ ಮಾತನಾಡಿ, ಸರ್ಕಾರಿ ಶಾಲೆಯಲ್ಲಿ ಓದುವ ಮಕ್ಕಳು ಯಾವುದೇ ಖಾಸಗಿ ಶಾಲೆಯ ಮಕ್ಕಳಗಿಂತ ಕಡಿಮೆಯಲ್ಲ. ಸರ್ಕಾರಿ ಶಾಲೆಯಲ್ಲಿ ಓದಿದ ಎಷ್ಟೋ ಮಹಾನುಭಾವರು ನಮ್ಮ ಕಣ್ಣ ಮುಂದೆ ಇದ್ದಾರೆ. ಅವರಂತೆ ನೀವು ಸಹ ಚೆನ್ನಾಗಿ ಓದಿ ಪೋಷಕರಿಗೆ ಹಾಗೂ ದೇಶಕ್ಕೆ ಉತ್ತಮ ಹೆಸರನ್ನು ತನ್ನಿ ಎಂದು ಆಶಿಸಿದರು.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ಅಬ್ಬಣಿ ಶಂಕರ್, ಸಹಕಾರ ಸಂಘ ಪ್ರಾರಂಭವಾಗಿ ೨೦ ವರ್ಷಗಳಾಗಿದೆ. ಈಗ ನಾವೆಲ್ಲರೂ ಹೊರಗೆ ಬಂದು ಸಮಾಜಮುಖಿ ಕಾರ್ಯಗಳನ್ನು ಮಾಡಲು ಮುಂದಾಗಿದ್ದೇವೆ. ಲಕ್ಷ್ಮಣ್ ಗೌಡರಂತಹ ದಾನಿಗಳು ಮುಂದೆ ಬಂದರೆ ಇನ್ನೂ ಅನೇಕ ಸಮಾಜಮುಖಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಉತ್ತಮ ಸಮಾಜ ನಿರ್ಮಾಣ ಮಾಡುತ್ತೇವೆ ಎಂದು ತಿಳಿಸಿದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಮಾನ್ಯತೆ ಪಡೆದ ಪತ್ರಿಕೆಗಳ ಸಂಪಾದಕರ ಸಂಘದ ರಾಜ್ಯಾಧ್ಯಕ್ಷ ಎ.ಸದಾನಂದ ಮಾತನಾಡಿ, ಸಮಾಜದಲ್ಲಿ ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ವಿದ್ಯಾರ್ಥಿಗಳಿಗೆ ಲಕ್ಷ್ಮಣ್ ಗೌಡರು ಸಹಾಯ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಇದೇ ವೇಳೆ ನಗರ ಮತ್ತು ಸುತ್ತಮುತ್ತಲ ಒಟ್ಟು ೧೧ ಸರ್ಕಾರಿ ಶಾಲೆಗಳ ೬೦೦ಕ್ಕೂ ಹೆಚ್ಚು ಮಕ್ಕಳಿಗೆ ಪರಿಕರಗಳನ್ನು ಗಣ್ಯರು ವಿತರಿಸಿದರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಎ.ಜಿ. ಸುರೇಶ್ ಕುಮಾರ್, ಖಜಾಂಚಿ ರಾಜೇಂದ್ರ ಸಿಂಹ ಬಿ.ಎಲ್., ಜಿಲ್ಲಾ ಕಾರ್ಯದರ್ಶಿ ಶಮ್ಗರ್, ಸಣ್ಣ ಮತ್ತು ಮಧ್ಯಮ ಪತ್ರಿಕೆಗಳ ಸಂಪಾದಕರ ಸಂಘದ ಅಧ್ಯಕ್ಷ ಎಚ್.ಎನ್.ಮುರಳೀದರ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಾಹ್ಯ ಯಶಸ್ಸಿನ ಆತುರದಲ್ಲಿ ಅಂತರ್ಯದ ಯಶಸ್ಸು ಮರೆಯದಿರಿ
ದಲಿತರಿಂದ ಮಲಗುಂಡಿ ಸ್ವಚ್ಛಗೊಳಿಸಿದ ಕೃತ್ಯಕ್ಕೆ ಖಂಡನೆ