ಕನ್ನಡಪ್ರಭ ವಾರ್ತೆ ಶಿಗ್ಗಾಂವಿ
ತಾಲೂಕಿನ ಬಂಕಾಪುರ ಅರಳೆಲೆ ಹಿರೇಮಠದ ಆವರಣದಲ್ಲಿ ನಿರ್ಮಿಸಿದ ಶ್ರೀ ಗುರು ರುದ್ರಮುನೀಶ್ವರ ಸಮುದಾಯ ಭವನದಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ನಂತರ ನಡೆದ ಧರ್ಮ ಸಮಾರಂಭದ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಜೀವನದಲ್ಲಿ ಹಣ ಸಂಪಾದನೆಯೊಂದೇ ಗುರಿಯಲ್ಲ. ಹಣದ ಜೊತೆಗೆ ಒಂದಿಷ್ಟಾದರೂ ಆಧ್ಯಾತ್ಮ ಚಿಂತನೆ ಬೆಳೆಸಿಕೊಳ್ಳಬೇಕು. ಆಡುವ ಮಾತು, ನಡೆಯುವ ದಾರಿ ಬೇರೆ ಬೇರೆ ಆದ ಕಾರಣ ಜೀವನದಲ್ಲಿ ಇರಬೇಕಾದಷ್ಟು ಶಾಂತಿಯಿಲ್ಲ. ಸತ್ಯ ಮತ್ತು ಧರ್ಮದ ವಾತಾವರಣದಲ್ಲಿ ಬೆಳೆದು ಬಲಗೊಳ್ಳಬೇಕಾದರೆ ಗುರುವೇ ಮೂಲನಾಗಿದ್ದಾನೆ. ಜೀವನ ವಿಕಾಸ ಮತ್ತು ಅಭ್ಯುದಯ ಧರ್ಮದ ಆಚರಣೆಯಿಂದ ದೊರಕುತ್ತದೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಮೌಲ್ಯಾಧಾರಿತ ಬದುಕಿಗೆ ಧರ್ಮದ ದಶವಿಧ ಸೂತ್ರಗಳನ್ನು ಬೋಧಿಸಿದ್ದಾರೆ. ಅಷ್ಟಾವರಣ, ಪಂಚಾಚಾರ ಮತ್ತು ಷಟ್ಸ್ಥಲ ಚಿಂತನೆಗಳಿಂದ ಬದುಕು ಬಲಗೊಳ್ಳಲು ಸಾಧ್ಯ. ಶಿವನನ್ನು ಪೂಜಿಸಿದರೆ ಸಕಲ ದೇವಾನುದೇವತೆಗಳನ್ನು ಪೂಜಿಸಿದ ಫಲ ಪ್ರಾಪ್ತವಾಗುತ್ತದೆ ಎಂದರು.ನೇತೃತ್ವ ವಹಿಸಿದ್ದ ಪಟ್ಟಾಧ್ಯಕ್ಷ ರೇವಣಸಿದ್ಧೇಶ್ವರ ಶಿವಾಚಾರ್ಯರು, ವಿಮಲ ರೇಣುಕ ಮುಕ್ತಿಮುನಿ ಶಿವಾಚಾರ್ಯರು ಮಾತನಾಡಿ, ಲಿಂಗೈಕ್ಯ ಶ್ರೀ ಗುರು ರುದ್ರಮುನಿ ಶಿವಾಚಾರ್ಯರು ಭಕ್ತರ ಒಳಿತಿಗಾಗಿ ಬಹಳಷ್ಟು ಶ್ರಮಿಸಿದ್ದನ್ನು ಮರೆಯಲಾಗದು. ಭೌತಿಕ ಬದುಕು ಶ್ರೀಮಂತಗೊಂಡಂತೆ ಆಂತರಿಕ ಬದುಕು ಪರಿಶುದ್ಧಗೊಳ್ಳಬೇಕಾಗಿದೆ. ಅರಿವಿನ ದಾರಿಯಲ್ಲಿ ನಡೆಸುವುದೇ ನಿಜವಾದ ಗುರುವಿನ ಕರ್ತವ್ಯ ಎಂದರು.