ಕನ್ನಡಪ್ರಭ ವಾರ್ತೆ ತಿಪಟೂರು
ನಗರದ ಬಹುತೇಕ ಪೆಟ್ಟಿಗೆ ಅಂಗಡಿಗಳಲ್ಲಿ ಸಿಗರೇಟು, ಬೀಡಿಯಂತಹ ನಿಷೇಧಿತ ಮಾದಕ ಪದಾರ್ಥಗಳನ್ನು ಮಾರಾಟ ಮಾಡಲಾಗುತ್ತಿದೆ. ಕಾಲೇಜು ಹುಡುಗರು, ಪೋಲಿ ಪುಡಾರಿಗಳದ್ದೇ ವ್ಯವಹಾರವಾಗಿದೆ. ಹೆಸರಿಗೆ ಟೀ ಅಂಗಡಿಯಂತೆ ಕಾಣುತ್ತಿದ್ದರೂ ಒಳಗೆಲ್ಲಾ ಹೊಲಸು ದಂಧೆಗಳದ್ದೇ ಕಾರುಬಾರು. ಇನ್ನು ಇಲ್ಲಿ ಮಾಡಿಕೊಡುವ ಟೀ, ಕಾಫಿಯೂ ರಾಸಾಯನಿಕ ಮಿಶ್ರಿತ ಟೀಪುಡಿ ಉಪಯೋಗಿಸುತ್ತಿದ್ದು, ಯುವಕರೆಲ್ಲಾ ತಮಗೆ ಅರಿವಿಲ್ಲದೆ ಕುಡಿದು ರೋಗಗಳನ್ನು ಆಹ್ವಾನಿಸಿಕೊಳ್ಳುತ್ತಿದ್ದರೆ. ಇನ್ನು ಗೋಬಿ ಮಂಚೂರಿ, ಬೇಲ್ಪುರಿ, ಚುರುಮುರಿ, ಪಾನಿಪುರಿ ಅಂಗಡಿಗಳೆಲ್ಲಾ ಸ್ವಚ್ಛತೆ ಇಲ್ಲದೆ, ನಿಷೇಧಿತ ಟೇಸ್ಟ್ ಹಾಗೂ ಕಲರ್ ಪೌಡರ್ಗಳನ್ನು ಹಾಕುತ್ತಿದ್ದಾರೆ. ಆರೋಗ್ಯಾಧಿಕಾರಿಗಳಿಗೆ ಇವೆಲ್ಲ ತಿಳಿದಿದ್ದರೂ ಕಡಿವಾಣ ಹಾಕುತ್ತಿಲ್ಲ. ಸುಗಮ ಸಂಚಾರಕ್ಕೆ ಅಡ್ಡಿ: ನಗರದ ಖಾಸಗಿ ಮತ್ತು ಸರ್ಕಾರಿ ಬಸ್ ನಿಲ್ದಾಣಗಳ ಸುತ್ತಲಿನ ರಸ್ತೆ ಬದಿ, ನಗರಸಭೆ ವೃತ್ತದಿಂದ ರಾಷ್ಟ್ರೀಯ ಹೆದ್ದಾರಿ ೨೦೬ ಹಾಗೂ ರೈಲ್ವೆ ನಿಲ್ದಾಣ ರಸ್ತೆ, ಕಾರೋನೇಷನ್ ರಸ್ತೆ, ಸರ್ಕಾರಿ ಬಾಲಕಿಯರ ಜೂನಿಯರ್ ಕಾಲೇಜು ಮುಂಭಾಗ, ಸರ್ಕಾರಿ ಪದವಿ ಕಾಲೇಜು, ಅಂಬೇಡ್ಕರ್ ಸರ್ಕಲ್ ಸುತ್ತಮುತ್ತ, ಹಾಸನ ಸರ್ಕಲ್, ಗೋವಿನಪುರ ಸರ್ಕಲ್ ಸೇರಿದಂತೆ ಈ ಎಲ್ಲಾ ರಸ್ತೆಗಳ ಎರಡೂ ಕಡೆ ಇರುವ ಪೆಟ್ಟಿಗೆ ಅಂಗಡಿಗಳ ಮುಂದೆ ಸವಾರರು ವಾಹನಗಳನ್ನ ಅಡ್ಡಾದಿಡ್ಡಿಯಾಗಿ ನಿಲ್ಲಿಸಿ ಪಾದಚಾರಿಗಳು ಸೇರಿದಂತೆ ವಾಹನ ಸಂಚಾರಕ್ಕೆ ತೀವ್ರ ಅಡ್ಡಿಯನ್ನುಂಟು ಮಾಡುತ್ತಿದ್ದಾರೆ. ಅನೇಕ ಕಡೆ ಬಸ್ ಹತ್ತಲು ಬರುವ ವಿದ್ಯಾರ್ಥಿನಿಯರನ್ನು ಚುಡಾಯಿಸಲೂ ವಾಹನ ನಿಲ್ಲಿಸಿಕೊಂಡು ಪೋಲಿಪಟಾಲಂಗಳು ಕಾಡುತ್ತಿದ್ದು, ಈ ಬಗ್ಗೆ ಖಾಕಿ ಕಣ್ಣಿದ್ದು ಕುರುಡಾಗಿದೆ. ನಗರದ ಬಿ.ಎಚ್. ರಸ್ತೆಯುದ್ದಕ್ಕೂ ಸಾಕಷ್ಟು ಪೆಟ್ಟಿಗೆ ಅಂಗಡಿಗಳಿದ್ದು, ಅಲ್ಲೆಲ್ಲಾ ಬಿಸಾಡುತ್ತಿರುವ ಟೀ, ಲೋಟ, ಪ್ಲಾಸ್ಟಿಕ್ ಕವರ್ ವಸ್ತುಗಳು ರಸ್ತೆಗಳ ಅಕ್ಕಪಕ್ಕದ ಚರಂಡಿ ಮತ್ತಿತರೆ ಜಾಗಗಳಲ್ಲಿ ಬೀಳುತ್ತಿವೆ. ಇದರಿಂದ ನಗರದ ಪರಿಸರ, ಸೌಂದರ್ಯ ಮತ್ತು ನಾಗರೀಕರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧಿಸಿದ್ದರೂ ಚರಂಡಿಗಳಲ್ಲೆಲ್ಲಾ ಪ್ಲಾಸ್ಟಿಕ್ ಲೋಟಗಳದ್ದೇ ಕಾರುಬಾರಾಗಿದೆ. ಒಟ್ಟಾರೆ ತಿಪಟೂರು ನಗರ ಅಂದರೆ ಅದು ಪೆಟ್ಟಿಗೆ ಅಂಗಡಿಗಳ ಬೀಡು ಎಂಬ ಮತ್ತೊಂದು ಹೆಸರು ಸೇರಿಕೊಂಡಿದ್ದು, ಈ ಬಗ್ಗೆ ನಗರಸಭೆ, ಪೊಲೀಸ್ ಇಲಾಖೆ, ತಾಲೂಕು ಆಡಳಿತ ಗಮನಹರಿಸಿ ಯುವಕರ, ಕಾಮುಕರ, ಪೋಲಿಗಳ ಅಡ್ಡೆಗಳಾಗಿರುವ ಪೆಟ್ಟಿಗೆ ಅಂಗಡಿಗಳು ಮತ್ತು ಅಲ್ಲಿ ನಡೆಯುತ್ತಿರುವ ಅಕ್ರಮ, ಮಾದಕ ವಸ್ತುಗಳಿಗೆ ಕಡಿವಾಣ ಹಾಕುವ ಕೆಲಸ ಮಾಡಬೇಕು.
ನಗರದಲ್ಲಿ ಪೆಟ್ಟಿಗೆ ಅಂಗಡಿಗಳ ಸಂಖ್ಯೆ ಹೆಚ್ಚಾಗುತ್ತಿವೆ. ಆ ಅಂಗಡಿಗಳಲ್ಲಿ ಸ್ವಚ್ಛತೆ ಇಲ್ಲದಂತಾಗಿದೆ. ಶಾಲಾ ಮಕ್ಕಳು, ಯುವಕರೇ ಹೆಚ್ಚಾಗಿ ಇಂತಹ ಅಂಗಡಿಗಳನ್ನು ಅವಲಂಬಿಸಿರುವ ಕಾರಣ ಬೀಡಿ, ಸಿಗರೇಟಿನಂತಹ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದ್ದು, ಈ ಬಗ್ಗೆ ನಗರಸಭೆ ಹಾಗೂ ತಾಲೂಕು ಆಡಳಿತ ಕ್ರಮ ಕೈಗೊಳ್ಳಬೇಕು.- ವಿ. ಯೋಗೀಶ್, ನಗರಸಭೆ ಸದಸ್ಯರು, ತಿಪಟೂರು.
- ವಿಶ್ವೇಶ್ವರ ಬದರೆಗಡೆ, ಪೌರಾಯುಕ್ತರು, ನಗರಸಭೆ, ತಿಪಟೂರು.