ಸುಳ್ಳು ಸುದ್ದಿ ನಂಬಿ ಇ-ಕೆವೈಸಿಗಾಗಿ ಗ್ಯಾಸ್ ಏಜೆನ್ಸಿಗೆ ಜನರ ಲಗ್ಗೆ!!

KannadaprabhaNewsNetwork |  
Published : Dec 27, 2023, 01:31 AM IST
ಶಿವಮೊಗ್ಗ ನಗರದ ಹೆಚ್. ಪಿ. ಗ್ಯಾಸ್ ಏಜೆನ್ಸಿಯೊಂದರ ಮುಂದೆ ಕೆವೈಸಿಗಾಗಿ ನೆರೆದಿರುವ ಗ್ರಾಹಕರು.. | Kannada Prabha

ಸಾರಾಂಶ

ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಬಂದಾಗಿನಿಂದ ಹಳ್ಳಿಗರಿಗೂ ಎಲೆಕ್ಟ್ರಾನಿಕ್‌ ವಸ್ತುಗಳ ಪರಿಚಯ, ಬಳಕೆ, ಅರಿವು, ಅದರ ಸಂಕಷ್ಟ ಅನುಭವಿಸುವುದು ತಪ್ಪಿಲ್ಲ. ಇವುಗಳಲ್ಲೊಂದು ಇ-ಕೆವೈಸಿ. ಗೃಹೋಪಯೋಗಿ ಅನಿಲ ಸಂಪರ್ಕ ಹೊಂದಿರುವವರು ಇ-ಕೆವೈಸಿ ಮಾಡಿಸದಿದ್ದರೆ ಕೇಂದ್ರ ಸರ್ಕಾರ ಸಬ್ಸಿಡಿ ನಿಲ್ಲಿಸುತ್ತದೆ ಎಂಬ ಸುಳ್ಳು ಸುದ್ದಿ ನಂಬಿದ ಗ್ರಾಹಕರು ಮಂಗಳವಾರದಿಂದ ಶಿವಮೊಗ್ಗ ನಗರದ ಗ್ಯಾಸ್ ಏಜೆನ್ಸಿಗಳ ಮುಂದೆ ಮುಗಿಬಿದ್ದಿದ್ದಾರೆ.

ಕನ್ನಡಪ್ರಭ ವಾರ್ತೆ ಶಿವಮೊಗ್ಗ ಗೃಹೋಪಯೋಗಿ ಅನಿಲ ಸಂಪರ್ಕ ಹೊಂದಿರುವವರು ಇ-ಕೆವೈಸಿ ಮಾಡಿಸದಿದ್ದರೆ ಕೇಂದ್ರ ಸರ್ಕಾರ ಸಬ್ಸಿಡಿ ನಿಲ್ಲಿಸುತ್ತದೆ ಎಂಬ ಸುಳ್ಳು ಸುದ್ದಿ ನಂಬಿದ ಗ್ರಾಹಕರು ಮಂಗಳವಾರದಿಂದ ನಗರದ ಗ್ಯಾಸ್ ಏಜೆನ್ಸಿಗಳ ಮುಂದೆ ಮುಗಿಬಿದ್ದಿದ್ದಾರೆ.

ಬೆಳಗ್ಗೆಯಿಂದಲೇ ಗ್ಯಾಸ್ ಏಜೆನ್ಸಿಗಳ ಮುಂದೆ ಜನರ ದಂಡೇ ನೆರೆದಿತ್ತು. ಎಲ್ಲರೂ ಆಧಾರ್ ಕಾರ್ಡ್‌ಗಳೊಂದಿಗೆ ಧಾವಿಸಿದ್ದರು. ಕೆವೈಸಿ ಮಾಡಿಸದಿದ್ದರೆ ಮುಂದಿನ ದಿನಗಳಲ್ಲಿ ಕೇಂದ್ರ ಸರ್ಕಾರ ನೀಡುವ ಸಬ್ಸಿಡಿ ನಿಲ್ಲಿಸಲಾಗುತ್ತದೆ. ಜೊತೆಗೆ ಈ ಸಂಪರ್ಕವನ್ನು ವಾಣಿಜ್ಯ ಸಂಪರ್ಕ ಎಂದು ಪರಿಗಣಿಸಲಾಗುತ್ತದೆ ಎಂಬ ಸುದ್ದಿ ಹರಡಿತ್ತು. ಕಳೆದ ವಾರ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ರೀತಿಯ ಸುದ್ದಿ ಹರಡಿ ಅಲ್ಲಿಯೂ ಗ್ಯಾಸ್ ಏಜೆನ್ಸಿಗಳ ಮುಂದೆ ಜನ ನೆರೆದಿದ್ದರು.

ಈ ವಾರ ಶಿವಮೊಗ್ಗದಲ್ಲಿ ಅದೇ ರೀತಿ ಜನ ಏಜೆನ್ಸಿಗಳ ಎದುರು ಜಮಾಯಿಸಿದ್ದಾರೆ. ಇದನ್ನು ನಿರೀಕ್ಷಿಸದೇ ಇದ್ದ ಕೆಲವು ಗ್ಯಾಸ್ ಏಜೆನ್ಸಿಗಳು ಕಂಗಾಲಾಗಿದ್ದವು. ಈ ಸಂಬಂಧ ಪೂರಕ ಸಿದ್ಧತೆ ಮಾಡಿಕೊಳ್ಳದೇ ಇದ್ದುದರಿಂದ ಪರದಾಡುವಂತಾಯಿತು. ಬಳಿಕ ಅಗತ್ಯ ವ್ಯವಸ್ಥೆ ಮಾಡಿಕೊಂಡು, ಕೆವೈಸಿ ದಾಖಲಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.

ಜಿ.ಎನ್. ಎಚ್.ಪಿ. ಗ್ಯಾಸ್ ಏಜೆನ್ಸಿ ಮಾಲೀಕ ಸುಧೀರ್ ಜಿ.ಎನ್. ಈ ಸಂಬಂಧ ಮಾಹಿತಿ ನೀಡಿ, ಕೆವೈಸಿ ಮಾಡಿಸದಿದ್ದರೆ ಸಂಪರ್ಕ ರದ್ದಾಗುತ್ತದೆ ಎಂದಾಗಲಿ, ವಾಣಿಜ್ಯ ಸಂಪರ್ಕಕ್ಕೆ ಸಂಪರ್ಕ ಬದಲಾಗುತ್ತದೆ ಎಂಬುದೆಲ್ಲ ಸುಳ್ಳು ಸುದ್ದಿ. ಈ ರೀತಿಯ ಯಾವ ಆದೇಶವೂ ನಮಗೆ ಬಂದಿಲ್ಲ. ಆದರೆ ಕೆವೈಸಿ ಮಾಡಿಸುವುದು ಒಳ್ಳೆಯದು. ಇದರಿಂದ ಮುಂದಿನ ದಿನಗಳ ದಾಖಲಾತಿ ಸಂಗ್ರಹವಾದಂತಾಗುತ್ತದೆ. ಜೊತೆಗೆ ನಕಲಿ ಸಂಪರ್ಕಗಳು, ಇದ್ದರೆ ಅವೆಲ್ಲ ಸಹಜವಾಗಿಯೇ ರದ್ದಾಗುವಂತಾಗುತ್ತದೆ ಎಂದ ಅವರು, ಆಗಮಿಸಿದ್ದ ಎಲ್ಲರಿಗೂ ಕೆವೈಸಿ ಮಾಡಿಕೊಡಲಾಗುತ್ತಿದೆ ಎಂದು ಹೇಳಿದರು.

- - - -ಫೋಟೋ: ಶಿವಮೊಗ್ಗ ನಗರದ ಹೆಚ್. ಪಿ. ಗ್ಯಾಸ್ ಏಜೆನ್ಸಿಯೊಂದರ ಮುಂದೆ ಕೆವೈಸಿಗಾಗಿ ನೆರೆದಿರುವ ಗ್ರಾಹಕರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಕ್ಕೆಯಲ್ಲಿ ಇಂದು ತಾಲೂಕು ಭಜನೋತ್ಸವ: ಮಾಧವ ಗೌಡ
ಗ್ರಾಮ ಸಹಾಯಕರನ್ನು ಡಿ ಗ್ರೂಪ್‌ಗೆ ಸೇರಿಸುವಂತೆ ಮನವಿ