ಹೊಸಪೇಟೆ: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಗೆ ಭಾರೀ ಹಿನ್ನಡೆಯಾಗಿದ್ದು, ಇದು ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಮತ್ತು ಜನಜೀವನದ ಮೇಲಿನ ದಾಳಿಯನ್ನು ಹಿಮ್ಮೆಟ್ಟಿಸುವ ಸಂದೇಶವನ್ನು ಸಾರಿದ ಜನತಾ ತೀರ್ಪು ಆಗಿದೆ ಎಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಯು.ಬಸವರಾಜ ಅಭಿಪ್ರಾಯಪಟ್ಟರು.
ನಿರುದ್ಯೋಗ, ಬೆಲೆ ಏರಿಕೆ, ಕೃಷಿ ಸಂಕಷ್ಟ, ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲಿನ ದಾಳಿ ಮತ್ತು ಕೋಮು ದ್ವೇಷದ ಹಿನ್ನೆಲೆಯಲ್ಲಿ ಇಂಡಿಯಾ ಕೂಟದ ಜೊತೆ ಜನರು ನಿಲ್ಲಲು ಕಾರಣವಾಗಿದೆ. ಚುನಾವಣೆಯ ಪ್ರಚಾರದ ಸಂದರ್ಭದಲ್ಲಿ ನರೇಂದ್ರ ಮೋದಿಯವರು ನೀತಿ ಸಂಹಿತೆಯನ್ನು ಉಲ್ಲಂಘಿಸಿ ಮಾಡಿದ ದ್ವೇಷ ಭಾಷಣದ ವಿರುದ್ದ ಚುನಾವಣಾ ಆಯೋಗ ಕ್ರಮ ಕೈಗೊಂಡಿದ್ದಲ್ಲಿ ಖಂಡಿತವಾಗಿ ಬಿಜೆಪಿ ಮತ್ತಷ್ಟು ಹಿನ್ನಡೆ ಅನುಭವಿಸುತ್ತಿತ್ತು ಎಂದರು.
ಈ ಬಾರಿ ಸಿಪಿಎಂ 4, ಸಿಪಿಐ ಹಾಗೂ ಸಿಪಿಎಂಎಲ್ ತಲಾ 2 ಸೇರಿ ಎಡಪಕ್ಷಗಳು ಒಟ್ಟು ಎಂಟು ಸ್ಥಾನಗಳನ್ನು ಪಡೆದು ಹಿಂದಿಗಿಂತ ಉತ್ತಮ ಸ್ಥಿತಿ ಹೊಂದಿವೆ. ಕರ್ನಾಟಕದಲ್ಲಿಯೂ ಬಿಜೆಪಿ, ಜೆಡಿಎಸ್ ಕೈಜೋಡಿಸಿದರೂ ಕಳೆದ ಬಾರಿಗೆ ಹೋಲಿಸಿದರೆ ಶೇ.5ರಷ್ಟು ಮತಗಳ ಹಿನ್ನಡೆ ಕಂಡಿದೆ. ಸಿಪಿಎಂ ಮತ್ತಿತರೆ ಪ್ರಜಾಸತ್ತಾತ್ಮಕ ಶಕ್ತಿಗಳ ಕರೆಗೆ ಓಗೊಟ್ಟು ಬಿಜೆಪಿಯನ್ನು ಹಿಮ್ಮೆಟ್ಟಿಸಿ, ಪ್ರಜಾಪ್ರಭುತ್ವ ಉಳಿಸಿಕೊಳ್ಳಲು ಜನರು ಮುಂದಾಗಿರುವುದನ್ನು ಸಿಪಿಎಂ ಅಭಿನಂದಿಸುತ್ತದೆ. ದೇಶದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಉಳಿಯಬೇಕು. ಜಾತ್ಯತೀತ ನೆಲೆಗಟ್ಟಿನಲ್ಲಿ ಭಾರತ ಮುನ್ನಡೆಯಬೇಕು ಎಂದರು.ಮುಖಂಡರಾದ ಆರ್.ಎಸ್.ಬಸವರಾಜ, ಬಿ.ಮಾಳಮ್ಮ, ಆರ್.ಭಾಸ್ಕರ ರೆಡ್ಡಿ ಇದ್ದರು.