ಜನಪರವಾದ ಕೆಲಸ ಮಾಡಿದರೆ ಜನರ ಪ್ರೀತಿ ಗಳಿಸಬಹುದು

KannadaprabhaNewsNetwork | Published : Mar 1, 2024 2:19 AM

ಸಾರಾಂಶ

ಅಧಿಕಾರಲ್ಲಿದ್ದಾಗ ಜನಪರವಾದ ಜನೋಪಯೋಗಿ ಕೆಲಸಗಳನ್ನು ಮಾಡಿದರೆ ಜನರ ಪ್ರೀತಿ ಜೊತೆಗೆ ಪ್ರಶಸ್ತಿಗಳು ಬರುತ್ತವೆ, ಜನರ ನೆನಪಿನಲ್ಲೂ ಉಳಿಯಬಹುದು ಎಂದು ಅಖಿಲ ಕರ್ನಾಟಕ ಶ್ರೀ ಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಅಮರ ನಾರಾಯಣ ಅವರು ಹೇಳಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಅಧಿಕಾರಲ್ಲಿದ್ದಾಗ ಜನಪರವಾದ ಜನೋಪಯೋಗಿ ಕೆಲಸಗಳನ್ನು ಮಾಡಿದರೆ ಜನರ ಪ್ರೀತಿ ಜೊತೆಗೆ ಪ್ರಶಸ್ತಿಗಳು ಬರುತ್ತವೆ, ಜನರ ನೆನಪಿನಲ್ಲೂ ಉಳಿಯಬಹುದು ಎಂದು ಅಖಿಲ ಕರ್ನಾಟಕ ಶ್ರೀ ಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷ ಹಾಗೂ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಅಮರ ನಾರಾಯಣ ಅವರು ಹೇಳಿದರು.

ನಗರದ ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಕೆ.ಅಮರ ನಾರಾಯಣ ಚಾಮರಾಜನಗರ ಜಿಲ್ಲಾಧಿಕಾರಿ ಗಳಾಗಿದ್ದಾಗ ಸಂಘದ ಕಟ್ಟಡ ನಿರ್ಮಾಣಕ್ಕೆಜಾಗ ಹುಡುಕಿಕೊಟ್ಟು, ಕಟ್ಟಡ ನಿರ್ಮಾಣವಾಗಲು ಕಾರಣಕರ್ತರಾಗಿದ್ದರಿಂದ ಸಂಘದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸರಳ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಅಧಿಕಾರಿಗಳು ಜನಪರವಾದ ಕೆಲಸಗಳನ್ನು ಮಾಡಿದರೆ ಪ್ರತಿಯೊಬ್ಬರು ಮೆಚ್ಚುಗೆಗೆ ಪಾತ್ರರಾಗುತ್ತಾರೆ, ಯಾವ ವ್ಯಕ್ತಿಯಾದರೂ ಸರಿ ಜನಪರ ಕಾಳಜಿಯುಳ್ಳಂತಹ ಕೆಲಸ-ಕಾರ್ಯಗಳನ್ನು ಮಾಡಿದರೆ, ಅಂತಹವರ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಅದು ಉತ್ತಮವಾಗಿದ್ದರೆ, ಅವರನ್ನು ಪ್ರಶಸ್ತಿಗಳು ಕೂಡಾ ಹುಡುಕಿಕೊಂಡು ಬರುತ್ತವೆ ಎಂದರು.

ನಾವು ಅಧಿಕಾರಿಗಳಾಗಿರುವುದೇ ಜನರ ಸೇವೆ ಮಾಡಲು, ಆ ನಿಟ್ಟಿನಲ್ಲಿ ನಾವು ಪ್ರಾಮಾಣಿಕತೆಯಿಂದ ಕೆಲಸ ನಿರ್ವಹಿಸಿದರೆ, ಅವು ಜನರ ಮನತಟ್ಟುತ್ತದೆ, ನಾವು ಹೋದಾಗ ನೆನಪಿಸಿಕೊಂಡು ಗೌರವಕೊಡುತ್ತಾರೆ ಎಂದರು.

ಈ ಜಿಲ್ಲೆಯಲ್ಲಿ ನಾನು ಡೀಸಿ ಆಗಿದ್ದಾಗ ಜಿಲ್ಲೆಯಲ್ಲಿ ಸ್ವಚ್ಛತೆ, ಪರಿಸರ ಕಾಳಜಿಗೆ ಹೆಚ್ಚಿನ ಒತ್ತುಕೊಟ್ಟು ಕೆಲಸ ಮಾಡಿದೆ, ಪ್ಲಾಸ್ಟಿಕ್ ಮುಕ್ತ ಬಿಳಿಗಿರಿ ರಂಗನಬೆಟ್ಟ, ಕೆಲ ಪುರಾತನ ದೇವಸ್ಥಾನಗಳ, ಕಲ್ಯಾಣಿಗಳ ಸ್ವಚ್ಛತೆ ಮಾಡಿಸಿದೆ, ಬಂಡೀಪುರದಲ್ಲಿ ಕೆಲ ಅಕ್ರಮಗಳನ್ನು ತಡೆಗಟ್ಟಿ, ಅರಣ್ಯ ಇಲಾಖೆಗೆ ಭೂಮಿಯನ್ನು ಉಳಿಸಿಕೊಟ್ಟೆ, ಕೆಲ ಜನಪಯೋಗಿ ಕೆಲಸಗಳಿಗೆ ಗಮನಹರಿಸಿದ್ದರಿಂದ, ನಾಗೇಂದ್ರ ಅವರು ನನಗೆ ಗೊತ್ತಿಲ್ಲದಂತೆ ಸೀಡಿ ಮಾಡಿದ್ದರಿಂದಾಗಿ ರಾಜ್ಯೋತ್ಸವ ಪ್ರಶಸ್ತಿ, ಅರಣ್ಯ ಇಲಾಖೆ ಪ್ರಶಸ್ತಿ ಹುಡುಕಿಕೊಂಡು ಬಂದವು ಎಂದರು.

ಜಿಲ್ಲಾಕಾರ್ಯನಿರತ ಪತ್ರಕರ್ತರ ಸಂಘದವರು ಅಂದು ನನ್ನಲ್ಲಿ ಬಂದು ಜಾಗಕ್ಕಾಗಿ ಮನವಿ ಮಾಡಿದಾಗ ನನ್ನಕರ್ತವ್ಯವನ್ನು ಮಾಡಿದೆ ಅಷ್ಟೆ, ನಮ್ಮದು ತೆರೆದ ಹಾಳೆ ಇದ್ದರೀತಿ, ಸಾರ್ವಜನಿಕ ಜೀವನದಲ್ಲಿದ್ದಾಗ , ಜನೋಪಯೋಗಿ ಕೆಲಸವನ್ನು ಮಾಡಬೇಕು ಎಂದರು.

ನಮ್ಮದು ಕೃಷಿ ಕುಟುಂಬ ಆದ್ದರಿಂದ ನಿವೃತ್ತನಾದ ನಂತರ ಅಖಿಲ ಕರ್ನಾಟಕ ಶ್ರೀ ಗಂಧ ಮತ್ತು ವನಕೃಷಿ ಬೆಳೆಗಾರರ ಸಂಘದ ಗೌರವಾಧ್ಯಕ್ಷನಾಗಿ ಕೃಷಿಯ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದೇನೆ ಇದು ನನಗೆ ತೃಪ್ತಿತಂದಿದೆ ಎಂದರು.

ಈ ವೇಳೆ ಅವರ ಕಾರ್ಯ ವೈಖರಿ ಬಗ್ಗೆ ಹಿರಿಯ ಪತ್ರಕರ್ತ ಅಬ್ರಹಾಂ ಡಿ ಸಿಲ್ವ, ಸಂಘದ ಅಧ್ಯಕ್ಷ ದೇವರಾಜು ಕಪ್ಪಸೋಗೆ ತಮ್ಮ ಅನಿಸಿಕೆಗಳನ್ನು ತಿಳಿಸಿದರು. ಇದೇ ಸಂದರ್ಭದಲ್ಲಿ ಜಿಲ್ಲಾಕಾರ್ಯನಿರರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಲಾಯಿತು. ನಿವೃತ್ತ ಐಪಿಎಸ್‌ ಅಧಿಕಾರಿ ಶರಣಪ್ಪ, ಕೃಷಿಕ ಹುಣಸೂರು ಬಸವರಾಜು ಹಾಜರಿದ್ದರು. ಹಿರಿಯ ಪತ್ರಕರ್ತ ಬನಶಂಕರ ಆರಾಧ್ಯ ನಿರೂಪಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ಲಕ್ಕೂರು ಪ್ರಸಾದ್ ವಂದಿಸಿದರು.

Share this article