ಮಾನಸಿಕ ಅಸ್ವಸ್ಥರಂತೆ ಮಾತನಾಡೋ ಭಿನ್ನರು:ಬಿಜೆಪಿಯ ಎಂ.ಪಿ.ರೇಣುಕಾಚಾರ್ಯ

KannadaprabhaNewsNetwork |  
Published : Feb 05, 2025, 12:31 AM IST
4ಕೆಡಿವಿಡಿ1-ದಾವಣಗೆರೆಯಲ್ಲಿ ಮಂಗಳವಾರ ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಸುದ್ದಿಗಾರರೊಂದಿಗೆ ಮಾತನಾಡಿದರು.  | Kannada Prabha

ಸಾರಾಂಶ

ಭಿನ್ನಮತೀಯರು ದೆಹಲಿ ದಂಡಯಾತ್ರೆ ಮಾಡಿದರೂ ಬಿ.ವೈ.ವಿಜಯೇಂದ್ರ ಏನೆಂಬುದು ರಾಷ್ಟ್ರೀಯ ನಾಯಕರಿಗೂ ಗೊತ್ತಿದ್ದು, ಹಾದಿಬೀದಿಯಲ್ಲಿ ಮಾತನಾಡುವ ಮೂಲಕ ಭಿನ್ನಮತೀಯರು ಮಾನಸಿಕ ಅಸ್ವಸ್ಥರಾಗಿದ್ದಾರೆ

ಭಿನ್ನಮತೀಯರ ದೆಹಲಿ ದಂಡಯಾತ್ರೆ ಫಲ ಕೊಡುವುದಿಲ್ಲ । ಬಿ.ವೈ.ವಿಜಯೇಂದ್ರರ ಸ್ಥಾನ ಭದ್ರ

ಕನ್ನಡಪ್ರಭ ವಾರ್ತೆ ದಾವಣಗೆರೆ

ಭಿನ್ನಮತೀಯರು ದೆಹಲಿ ದಂಡಯಾತ್ರೆ ಮಾಡಿದರೂ ಬಿ.ವೈ.ವಿಜಯೇಂದ್ರ ಏನೆಂಬುದು ರಾಷ್ಟ್ರೀಯ ನಾಯಕರಿಗೂ ಗೊತ್ತಿದ್ದು, ಹಾದಿಬೀದಿಯಲ್ಲಿ ಮಾತನಾಡುವ ಮೂಲಕ ಭಿನ್ನಮತೀಯರು ಮಾನಸಿಕ ಅಸ್ವಸ್ಥರಾಗಿದ್ದಾರೆ ಎಂದು ಬಿಜೆಪಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ವಿಜಯಪುರ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ರಮೇಶ ಜಾರಕಿಹೊಳಿ ವಿರುದ್ಧ ವ್ಯಂಗ್ಯವಾಡಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಏನೆಂಬುದು ದೆಹಲಿ ನಾಯಕರಿಗೂ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳೆಸುವ ಕೆಲಸವನ್ನು ವಿಜಯೇಂದ್ರ ಮಾಡುತ್ತಿದ್ದರೆ, ಭಿನ್ನಮತೀಯರ ಗುಂಪು ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡುವ ಬದಲಿಗೆ ಸ್ವಪಕ್ಷದವರ ವಿರುದ್ಧವೇ ಮಾತನಾಡುತ್ತಿದೆ ಎಂದು ಕಿಡಿಕಾರಿದರು.

ರಾಜ್ಯದಲ್ಲಿ ಕಾಂಗ್ರೆಸ್ಪ ಅಧಿಕಾರಕ್ಕೆ ಬಂದು 2 ವರ್ಷವಾದರೂ ಇನ್ನೂ ಸರ್ಕಾರ ಟೇಕಾಫ್ ಆಗಿಲ್ಲ. ಆದರೆ, ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾತನಾಡದೇ, ಬಿಜೆಪಿಯವರ ವಿರುದ್ಧವೇ ಭಿನ್ನಮತೀಯರು ಮಾತನಾಡುತ್ತಿದ್ದಾರೆ. ಕೇವಲ ನಾಲ್ಕೈದು ಜನ ದೆಹಲಿಗೆ ಓಡಾಡುತ್ತಿದ್ದಾರೆ. ಹಿಂದೆ ಬಿ.ಎಸ್.ಯಡಿಯೂರಪ್ಪನವರಿಗೆ ತೊಂದರೆ ಕೊಟ್ಟಾಗ ಬಿಜೆಪಿಗೆ ಯಾವ ಸ್ಥಿತಿ ಬಂದಿತೆಂಬ ಸಂಗತಿಯನ್ನು ಮರೆಯಬಾರದು ಎಂದು ಹೇಳಿದರು.

ಸೂರ್ಯ ಚಂದ್ರರಿರುವುದು ಎಷ್ಟು ಸತ್ಯವೋ ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಮುಂದುವರಿಯುವುದೂ ಅಷ್ಟೇ ಸತ್ಯ. ಕಾಂಗ್ರೆಸ್ ಪಕ್ಷದ ವಿರುದ್ಧ ಭಿನ್ನಮತೀಯರ ಪೈಕಿ ಯಾರೂ ಮಾತನಾಡುತ್ತಿಲ್ಲ. ನಿಮಗೆ ಮನ ಮರ್ಯಾದೆಯೆಂಬುದು ಇದ್ದರೆ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿ. ಒಬ್ಬ ನಾಯಕ ಎಲ್ಲಾ ಬಿಚ್ಚಿಸುತ್ತೇನೆ ಎಂದು ಹೇಳುತ್ತೀಯಲ್ಲ, ಮಾಡಬಾರದ ಭ್ರಷ್ಟಾಚಾರ ನೀನು ಮಾಡಿದ್ದೀಯಾ ಎಂದು ಏಕವಚನದಲ್ಲಿ ಕಿಡಿಕಾರಿದರು.

ಭಿನ್ನಮತೀಯರು ಇಷ್ಟೆಲ್ಲಾ ಮಾತನಾಡುತ್ತಿರುವುದು, ಮಾಡುತ್ತಿರುವುದು ಕಾಂಗ್ರೆಸ್ ನಾಯಕರ ಕುಮ್ಮಕ್ಕಿನಿಂದ. ನಮಗೂ ದೆಹಲಿಗೆ ಹೋಗುವುದು ಗೊತ್ತು. ಸಭೆ ಮಾಡುವುದೂ ನಮಗೆ ಗೊತ್ತು. ಬಿಜೆಪಿಯನ್ನು ಹಾಳು ಮಾಡುವುದಕ್ಕೆ ಭಿನ್ನಮತೀಯರು ಹೀಗೆಲ್ಲಾ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇಂತಹ ಭಿನ್ನಮತೀಯರೆಲ್ಲಾ ಚುನಾವಣೆಗೆ ಸ್ಪರ್ಧೆ ಮಾಡಲಿ, ಯಾರ ಯೋಗ್ಯತೆ ಏನೆಂಬುದು ಆಗ ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಶ್ರೀರಾಮುಲುಗೆ ಎತ್ತಿ ಕಟ್ಟಲು ಪ್ರಯತ್ನಿಸಿದರಾದರೂ, ರಾಮುಲು ಇಕ್ಕೆಲ್ಲಾ ತಲೆ ಕೆಡಿಸಿಕೊಳ್ಳಲಿಲ್ಲ. ಈಗ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಹೆಸರುಗಳನ್ನು ಸುಮ್ಮನೇ ಎಳೆದು ತರುತ್ತಿದ್ದಾರೆ. ನಾವು ಎಲ್ಲರೂ ಸೇರಿಕೊಂಡು, ದೆಹಲಿಗೆ ಹೋಗುವುದಕ್ಕೆ ಸಿದ್ಧರಿದ್ದೇವೆ. ನಮಗೇನು ದೆಹಲಿ ದಾರಿಯೇನು ಗೊತ್ತಿಲ್ಲವೇ? ಇಂತಹ ಭಿನ್ನಮತೀಯರ ತಲೆ ಹರಟೆ ಹೆಚ್ಚಾಗಿದೆ. ಇದರಿಂದ ಪಕ್ಷದ ವರ್ಚಸ್ಸುಸಹ ಕಡಿಮೆಯಾಗುತ್ತಿದೆ ಎಂದು ದೂರಿದರು. ಬಿಜೆಪಿ ಸಂಘಟನೆಗೆ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಶ್ರಮಿಸುತ್ತಿದ್ದಾರೆ. ಭಿನ್ನಮತೀಯರ ವಿರುದ್ಧ ಬೆಂಗಳೂರಿನಲ್ಲಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ನಿವಾಸದಲ್ಲಿ ಫೆ.5ರಂದು ನಾವೂ ಸಭೆ ಸೇರಲಿದ್ದೇವೆ. ಭಿನ್ನಮತೀಯರ ವಿರುದ್ಧ ಹೇಗೆ ಹೋರಾಟ ಮಾಡಬೇಕೆಂಬ ಬಗ್ಗೆ ಬುಧವಾರದ ಸಭೆಯಲ್ಲಿ ನಾವೆಲ್ಲರೂ ತೀರ್ಮಾನ ಮಾಡುತ್ತೇವೆ. ನಾವೆಲ್ಲಾ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಬೆನ್ನಿಗೆ ನಿಲ್ಲುತ್ತೇವೆ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯಲ್ಲಿ ಗೊಂದಲ ಹುಟ್ಟು ಹಾಕುತ್ತಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿರುವ ಭಿನ್ನಮತೀಯರ ವಿರುದ್ಧ ಪಕ್ಷದ ರಾಷ್ಟ್ರೀಯ ನಾಯಕರು ಸೂಕ್ತ ಕ್ರಮ ಕೈಗೊಳ್ಳಬೇಕು. ಇಂತಹ ಭಿನ್ನಮತೀಯರವನ್ನು ಪಕ್ಷದಿಂದ ಉಚ್ಛಾಟಿಸುವಂತೆಯೂ ನಾಳೆ ಬೆಂಗಳೂರಿನ ಸಭೆಯಲ್ಲಿ ನಾವೆಲ್ಲರೂ ಸೇರಿ ಚರ್ಚಿಸಿ, ವರಿಷ್ಠರಿಗೆ ಒತ್ತಾಯಿಸಲಿದ್ದೇವೆ ಎಂದು ಮಾಹಿತಿ ನೀಡಿದರು.

ಪಕ್ಷದ ಯುವ ಮುಖಂಡರಾದ ರಾಜು ವೀರಣ್ಣ, ಪ್ರವೀಣ ಜಾಧವ್‌, ಪಂಜು ಪೈಲ್ವಾನ್ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಜ್ಯದಲ್ಲಿ ಮದ್ಯ ಮಾರಾಟ ನಿಷೇಧವಾಗುತ್ತಾ ?
ಯಾವ ದೇವ್ರಿಗೆ ಪೂಜೆ ಮಾಡಿಸಿದ್ದೀರಿ? : ಮಧುಗೆ ರವಿ!