ಹುಬ್ಬಳ್ಳಿ:
ಹಳೇ ಹುಬ್ಬಳ್ಳಿಯ ದಿಡ್ಡಿ ಹನುಮಾನ್ ದೇವಸ್ಥಾನದ ಬಳಿ ಕುಡಿಯುವ ನೀರಿನ ಸರಬರಾಜು ಪೈಪ್ಲೈನ್ ಒಡೆದು 15 ದಿನಗಳಾದರೂ ಎಲ್ ಆ್ಯಂಡ್ ಟಿ ಅಧಿಕಾರಿಗಳು ಕ್ರಮಕೈಗೊಂಡಿಲ್ಲ. ಪೈಪ್ಲೈನ್ ದುರಸ್ತಿಗೆ ಅಗತ್ಯ ಸಾಮಗ್ರಿಗಳ ಕೊರತೆ ಇದೆ ಎಂದು ಅಧಿಕಾರಿಗಳು ದಿನ ದೂಡುತ್ತಿದ್ದಾರೆ. ನೀರು ಬಿಡುವವರೆಗೂ ನಾವು ರಸ್ತೆ ತಡೆ ಮುಂದುವರಿಸುತ್ತೇವೆ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಪ್ರತಿಭಟನೆ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನಿಸಿದರು. ಆದರೆ, ಸಫಲವಾಗಲಿಲ್ಲ. ನಂತರ ಸ್ಥಳಕ್ಕೆ ಪಾಲಿಕೆ ಸದಸ್ಯ ಇಕ್ಬಾಲ್ ನವಲೂರ ಆಗಮಿಸಿ, ಎಲ್ ಆ್ಯಂಡ್ ಟಿ ಕಂಪನಿ ಅಧಿಕಾರಿಗಳಿಗೆ ತಾಕೀತು ಮಾಡುವ ಮೂಲಕ ಮಂಗಳವಾರವೇ ನೀರು ಪೂರೈಸುವಂತೆ ಸೂಚಿಸಿದರು.ನೀರು ಬಿಡುವ ಭರವಸೆ ನೀಡಿದ ನಂತರವೇ ಪ್ರತಿಭಟನೆ ಹಿಂಪಡೆಯುವುದಾಗಿ ಪಾಲಿಕೆ ಸದಸ್ಯ ನವಲೂರ ಹಾಗೂ ಪ್ರತಿಭಟನಾಕಾರರು ಪಟ್ಟು ಹಿಡಿದರು. ಆಗ ಸ್ಥಳಕ್ಕೆ ಆಗಮಿಸಿದ್ದ ಎಲ್ ಆ್ಯಂಡ್ ಟಿ ಅಧಿಕಾರಿಗಳು, ಪಾಲಿಕೆ ಸದಸ್ಯ ಹಾಗೂ ಅಲ್ಲಿನ ಜನರ ಮನವೊಲಿಸಿ, ನೀರು ಬಿಡುವ ಭರವಸೆ ವ್ಯಕ್ತಪಡಿಸಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಇತ್ತ ಹಳೇ ಹುಬ್ಬಳ್ಳಿ ನಿವಾಸಿಗಳು ನೀರಿಗಾಗಿ ದಿಢೀರ್ ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ ಕಾರಣ ಸಂಜೆಯೊಳಗೆ ಪೈಪ್ಲೈನ್ ದುರಸ್ತಿ ಪೂರ್ಣಗೊಳಿಸಿ ನೀರು ಪೂರೈಕೆ ಮಾಡಲಾಯಿತು. ಆಸರಹೊಂಡ, ದಿಡ್ಡಿ ಓಣಿ, ಕೋಟೂರ ಓಣಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಕ್ಕೆ ಸುಮಾರು 4 ಗಂಟೆ ನೀರು ಪೂರೈಸಲಾಗಿದೆ. ಉಳಿದ ಪ್ರದೇಶಕ್ಕೆ ಏ.1ರಂದು ನೀರು ಪೂರೈಸುವುದಾಗಿ ಎಲ್ ಆ್ಯಂಡ್ ಟಿ ಅಧಿಕಾರಿಗಳು ತಿಳಿಸಿದ್ದಾರೆ.