ಆ್ಯಂಬುಲೆನ್ಸನಲ್ಲಿ ರೋಗಿಗಳ ಬದಲು ಜನರ ಪ್ರಯಾಣ

KannadaprabhaNewsNetwork |  
Published : Mar 10, 2026, 03:15 AM IST
ಜಿಲ್ಲಾ ಆಸ್ಪತ್ರೆಯ ಮುಂಭಾಗದಲ್ಲಿ ಆ್ಯಂಬುಲೆನ್ಸ್ ನಿಂದ ಇಳಿಯುತ್ತಿರುವ ಜನರು.  | Kannada Prabha

ಸಾರಾಂಶ

ಜಿಮ್ಸ್ ಆಸ್ಪತ್ರೆಯಿಂದ ನಗರದ ವಿವಿಧ ಭಾಗಗಳಿಗೆ ಹೋಗುವ ಜನರನ್ನು ಆ್ಯಂಬುಲೆನ್ಸ್ ಚಾಲಕರು ನಿತ್ಯವೂ ಡ್ರಾಪ್ ನೀಡುತ್ತಿರುವುದು ಬೆಳಕಿಗೆ ಬಂದಿದೆ. ರೋಗಿಗಳನ್ನು ಸಾಗಿಸಲು ಮೀಸಲಿಟ್ಟಿರುವ ವಾಹನದಲ್ಲಿ ಸಾಮಾನ್ಯ ಜನರನ್ನು ತುಂಬಿಕೊಂಡು ಸಾಗಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಶಿವಕುಮಾರ ಕುಷ್ಟಗಿ

ಗದಗ: ತುರ್ತು ಚಿಕಿತ್ಸೆಗೆ ಬಳಕೆಯಾಗಬೇಕಾದ ಇಲ್ಲಿನ ಜಿಲ್ಲಾ ಆಸ್ಪತ್ರೆ (ಜಿಮ್ಸ್)ಯ ಆ್ಯಂಬುಲೆನ್ಸ್‌ಗಳು ಸಾರ್ವಜನಿಕರನ್ನು ಸಾಗಿಸುವ ಪ್ಯಾಸೆಂಜರ್ ವಾಹನಗಳಂತೆ ಬಳಕೆಯಾಗುತ್ತಿದ್ದು, ಈ ಕುರಿತ ವಿಡಿಯೋ ವೈರಲ್‌ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ವ್ಯಕ್ತವಾಗಿದೆ.

ಜಿಮ್ಸ್ ಆಸ್ಪತ್ರೆಯಿಂದ ನಗರದ ವಿವಿಧ ಭಾಗಗಳಿಗೆ ಹೋಗುವ ಜನರನ್ನು ಆ್ಯಂಬುಲೆನ್ಸ್ ಚಾಲಕರು ನಿತ್ಯವೂ ಡ್ರಾಪ್ ನೀಡುತ್ತಿರುವುದು ಬೆಳಕಿಗೆ ಬಂದಿದೆ. ರೋಗಿಗಳನ್ನು ಸಾಗಿಸಲು ಮೀಸಲಿಟ್ಟಿರುವ ವಾಹನದಲ್ಲಿ ಸಾಮಾನ್ಯ ಜನರನ್ನು ತುಂಬಿಕೊಂಡು ಸಾಗಿಸುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಆಕ್ರೋಶ: ಗದಗ ಮೆಡಿಕಲ್ ಕಾಲೇಜು ಆವರಣದಲ್ಲಿ ವೈದ್ಯಕೀಯ, ನರ್ಸಿಂಗ್ ಸೇರಿದಂತೆ ಹಲವಾರು ಕೋರ್ಸ್ ಕಾಲೇಜುಗಳಿವೆ. ಆಸ್ಪತ್ರೆಯಲ್ಲಿ ನಿತ್ಯವೂ ನೂರಾರು ಜನ ಕೆಲಸ ಮಾಡುತ್ತಾರೆ. ಇವರಲ್ಲಿ ಬಹುತೇಕರು ಆಸ್ಪತ್ರೆಯ ಮುಂಭಾಗದಲ್ಲಿರುವ ರಾಜ್ಯ ಹೆದ್ದಾರಿಯಲ್ಲಿ ತಮ್ಮ ತಮ್ಮ ಮನೆಗಳಿಗೆ ತೆರಳುವ ವೇಳೆಯಲ್ಲಿಯೇ ಆ್ಯಂಬುಲೆನ್ಸನಲ್ಲಿ ಹೋಗುತ್ತಾರೆ ಎನ್ನುವ ಗಂಭೀರ ಆರೋಪ ಕೇಳಿ ಬರುತ್ತಿವೆ.

ವಿಡಿಯೋಗಳು ವೈರಲ್: ಆ್ಯಂಬುಲೆನ್ಸ್‌ಗಳಲ್ಲಿ ಸಾರ್ವಜನಿಕರನ್ನು ಕರೆದುಕೊಂಡು ಹೋಗುತ್ತಿರುವುದು ಮತ್ತು ಇಳಿಸುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಅಲ್ಪ ಹಣದ ಆಸೆಗಾಗಿ ಅಥವಾ ಪರಿಚಯಸ್ಥರ ಓಲೈಕೆಗಾಗಿ ಈ ರೀತಿ ಮಾಡುತ್ತಿದ್ದಾರೆ. ಇದೆಲ್ಲದರ ಮಧ್ಯೆ ಕೆಲವರು ಅಲ್ಪ ಹಣ ಪಡೆದು ಸಾಗಾಟ ಮಾಡುತ್ತಿದ್ದಾರೆ ಎನ್ನುವುದು ಸ್ಥಳೀಯರ ಗಂಭೀರ ಆರೋಪ.

ರೋಗಿಗಳಿಗೆ ಸಿಗುತ್ತಿಲ್ಲ ಸೇವೆ: ಜಿಲ್ಲೆಯ ಯಾವುದೋ ಮೂಲೆಯಲ್ಲಿ ಅಪಘಾತವಾದಾಗ ಅಥವಾ ಗರ್ಭಿಣಿಯರಿಗೆ ತುರ್ತು ವಾಹನದ ಅಗತ್ಯವಿದ್ದಾಗ ಆ್ಯಂಬುಲೆನ್ಸ್ ಇಲ್ಲ ಎಂಬ ಉತ್ತರ ಬರುತ್ತದೆ. ಆದರೆ, ನಗರದೊಳಗೆ ಜನರನ್ನು ಸಾಗಿಸಲು ಮಾತ್ರ ಇವುಗಳಿಗೆ ಡೀಸೆಲ್ ಮತ್ತು ಸಮಯ ಎರಡೂ ಲಭ್ಯವಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ರೋಗಿಗಳಿಗೆ ಸಿಗದೇ ಇರುವ ಸೇವೆ, ತಮಗೆ ಬೇಕಾದವರಿಗೆ ನೀಡುತ್ತಿದ್ದಾರೆ.

ಆಳವಾಗಿ ತನಿಖೆ: ಈ ಕುರಿತು ಈಗಾಗಲೇ ಪರಿಶೀಲನೆ ನಡೆಸಲಾಗಿದೆ. ಪ್ರಾಥಮಿಕ ತನಿಖೆಯ ಆಧಾರದಲ್ಲಿ ಎರಡು ಆ್ಯಂಬುಲೆನ್ಸ್‌ಗಳು ನಮಗೆ ಸಂಬಂಧಿಸಿದ್ದಲ್ಲ ಎನ್ನುವುದು ಪತ್ತೆಯಾಗಿದೆ. ಆದರೂ ಈ ಕುರಿತು ಇನ್ನಷ್ಟು ಆಳವಾಗಿ ತನಿಖೆ ನಡೆಸಲು ಮತ್ತು ಸಿಸಿ ಕ್ಯಾಮೆರಾ ಪುಟೇಜ್ ಚೆಕ್ ಮಾಡಿ, ಇದು ಯಾವಾಗ ಆಗಿರುವ ಘಟನೆ, ಯಾರು ಚಾಲಕರಾಗಿ ಕೆಲಸ ಮಾಡಿದ್ದಾರೆ ಎನ್ನುವ ಬಗ್ಗೆಯೂ ಪರಿಶೀಲನೆ ನಡೆಸಲಾಗುವುದು ಎಂದು ಡಿಎಚ್‌ಒ ಡಾ. ಎಸ್.ಎಸ್. ನೀಲಗುಂದ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಡಿಂಪಲ್ ಕ್ವೀನ್ ರಚಿತಾ ರಾಮ್ ಸ್ವೀಟ್ - 14
13 ಮಂದಿ ಐಎಎಸ್‌ ಅಧಿಕಾರಿಗಳ ವರ್ಗ, ಕೆಲವರಿಗೆ ಹೆಚ್ಚುವರಿ ಹೊಣೆ