ಕನ್ನಡಪ್ರಭ ವಾರ್ತೆ ಮೈಸೂರು
ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಹಿಂದುಳಿದ ತಾಲೂಕುಗಳ ಜನರ ತಲಾ ಆದಾಯ ಹೆಚ್ಚಾಗಬೇಕು. ಈ ನಿಟ್ಟಿನಲ್ಲಿ ಸೌಲಭ್ಯಗಳನ್ನು ಕಲ್ಪಿಸಿ ಯೋಜನೆಗಳನ್ನು ರೂಪಿಸಬೇಕು ಎಂದು ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷರಾದ ಆರ್ಥಿಕ ತಜ್ಞ ಪ್ರೊ.ಎಂ.ಗೋವಿಂದರಾವ್ ತಿಳಿಸಿದರು.ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸೋಮವಾರ ನಡೆದ ಮೈಸೂರು ವಿಭಾಗ ಮಟ್ಟದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರಾದೇಶಿಕ ಅಸಮತೋಲನ ಸಮಿತಿ 2024ರ ಸೆಪ್ಟೆಂಬರ್ ನಿಂದ ಕೆಲಸ ಮಾಡಲು ಪ್ರಾರಂಭಿಸಿದೆ. ನಂಜುಂಡಪ್ಪ ವರದಿಯಲ್ಲಿ 35 ಸೂಚ್ಯಂಕಗಳನ್ನು ಅಧ್ಯಯನ ಮಾಡಿ ವರದಿ ನೀಡಿತ್ತು. ವರದಿಯಂತೆ 31 ಸಾವಿರ ಕೋಟಿ ಹಣ ಖರ್ಚು ಮಾಡಲಾಗಿದೆ. ಆದರೂ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಗಿಲ್ಲ. ಈ ಬಗ್ಗೆ ಸಮಿತಿಯಿಂದ ಹಲವು ಆಯಾಮಗಳಲ್ಲಿ ಅಧ್ಯಯನ ನಡೆಸಲಾಗುವುದು ಎಂದರು.
ಅನುದಾನ ಖರ್ಚು ಮಾಡಿದರೆ ಅಭಿವೃದ್ಧಿ ಆಗುತ್ತದೆ ಎಂಬುದು ಸಾಧ್ಯವಿಲ್ಲ. ಅಲ್ಲಿನ ಜನರ ತಲಾ ಆದಾಯ ಹೆಚ್ಚಾಗಬೇಕು. ಉತ್ತರ ಕರ್ನಾಟಕ ಹಾಗೂ ದಕ್ಷಿಣ ಕರ್ನಾಟಕದ ತಲಾ ಆದಾಯದಲ್ಲಿ ವ್ಯತ್ಯಾಸ ಇವೆ. ಉತ್ತರ ಕರ್ನಾಟಕ ಕಡಿಮೆ ತಲಾ ಆದಾಯ ಹೊಂದಿವೆ. ಪ್ರಾದೇಶಿಕ ಅಸಮತೋಲನ ಹೋಗಲಾಡಿಸಲು ಕಾರ್ಖಾನೆಗಳು ಸ್ಥಾಪನೆ ಆಗಬೇಕು. ಜನರಿಗೆ ಉದ್ಯೋಗಾವಕಾಶಗಳು ದೊರೆಯುವಂತೆ ಯೋಜನೆಗಳನ್ನು ರೂಪಿಸಬೇಕು ಎಂದರು.ಸಮಿತಿ ಸದಸ್ಯ ಪ್ರೊ.ಸೂರ್ಯನಾರಾಯಣ್ ಮಾತನಾಡಿ, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳು ಈ ಭಾಗದಲ್ಲಿ ಅಭಿವೃದ್ಧಿ ಹೊಂದಿರುವ ಜಿಲ್ಲೆಗಳು ಆದರೂ ಉಡುಪಿ ಜಿಲ್ಲೆಯ ಬ್ರಹ್ಮಾವರದ ಹಲವು ಶಾಲೆಗಳಲ್ಲಿ ವಿಜ್ಞಾನ ಪ್ರಯೋಗಾಲಯಗಳು ಇಲ್ಲ. ಜಿಲ್ಲೆಗಳ ಅಭಿವೃದ್ಧಿಗೆ ಉತ್ತಮ ಶಿಕ್ಷಣ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದರು.
ಸಮಿತಿಯ ನಿರ್ದೇಶಕ ಚಂದ್ರಶೇಖರಯ್ಯ ಮಾತನಾಡಿ, 1956 ರಲ್ಲಿ ಕರ್ನಾಟಕ ಏಕೀಕರಣ ಆಯಿತು. ಮೈಸೂರು ಭಾಗ ಅಭಿವೃದ್ದಿ ಆಗಿತ್ತು. ಆದರೆ, ಹೈದರಾಬಾದ್ ಪ್ರಾಂತ್ಯ ಅಭಿವೃದ್ಧಿ ಆಗಿರಲಿಲ್ಲ. 2000 ರಲ್ಲಿ ಪ್ರೊ. ನಂಜುಂಡಯ್ಯ ಅವರ ಅಧ್ಯಕ್ಷತೆಯಲ್ಲಿ ಪ್ರಾದೇಶಿಕ ಅಸಮತೋಲನ ಸಮಿತಿಯನ್ನು ಸರ್ಕಾರ ರಚನೆ ಮಾಡಿತ್ತು. ಈ ಸಮಿತಿಯು ವರದಿಯನ್ನು ಸರ್ಕಾರಕ್ಕೆ ನೀಡಿತು. ಅಂದಿನ 175 ತಾಲೂಕುಗಳಲ್ಲಿ 113 ತಾಲೂಕುಗಳು ಹಿಂದುಳಿದವು ಎಂದು ವರದಿ ನೀಡಿತು.ವರದಿ ಪ್ರಕಾರ ಸರ್ಕಾರ 31 ಸಾವಿರ ಕೋಟಿ ರೂ. ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಬಳಸಬೇಕು. ಶೇ.60 ಉತ್ತರ ಕರ್ನಾಟಕಕ್ಕೆ ಹಾಗೂ ಶೇ.40 ಅನುದಾನವನ್ನು ದಕ್ಷಿಣ ಕರ್ನಾಟಕಕ್ಕೆ ಬಳಸಬೇಕು ಎಂದು ವರದಿ ನೀಡಿತು ಎಂದು ವಿವರಿಸಿದರು.
ಸಭೆಯಲ್ಲಿ ಉದ್ಯಮಿಗಳು, ಕೈಗಾರಿಕೋದ್ಯಮಿಗಳು, ಸಂಘ ಸಂಸ್ಥೆಗಳು ಪ್ರತಿನಿಧಿಗಳು ಹಾಗೂ ಮೈಸೂರು ವಿಭಾಗದ ಜಿಲ್ಲೆಗಳ ಅಧಿಕಾರಿಗಳು ತಮ್ಮ ಅಭಿಪ್ರಾಯ ಹಾಗೂ ಸಲಹೆಗಳನ್ನು ಸಭೆಗೆ ತಿಳಿಸಿದರು.ಕರ್ನಾಟಕ ಪ್ರಾದೇಶಿಕ ಸಮತೋಲನ ಸಮಿತಿಯ ಸದಸ್ಯರಾದ ಡಾ.ಎಸ್.ಟಿ. ಬಾಗಲಕೋಟಿ, ಯೋಜನೆ ಇಲಾಖೆಯ ಯೋಜನೆ ಇಲಾಖೆಯ ಕಾರ್ಯದರ್ಶಿ ಹಾಗೂ ಸಮಿತಿಯ ಸದಸ್ಯ ಕಾರ್ಯದರ್ಶಿ ಡಾ.ಆರ್. ವಿಶಾಲ್, ಜಿಪಂ ಸಿಇಒ ಯುಕೇಶ್ ಕುಮಾರ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಪಿ. ಶಿವರಾಜು ಮೊದಲಾದವರು ಇದ್ದರು.ತಾಲೂಕಿನ ಅಭಿವೃದ್ಧಿಗೆ ಸಾಮಾಜಿಕ ನ್ಯಾಯ ಒದಗಿಸಿ: ಅನಿಲ್ ಚಿಕ್ಕಮಾದು
ಶಾಸಕ ಅನಿಲ್ ಚಿಕ್ಕಮಾದು ಮಾತನಾಡಿ, ಎಚ್.ಡಿ.ಕೋಟೆ ಹಾಗೂ ಸರಗೂರು ತಾಲೂಕುಗಳು ಹಿಂದುಳಿದಿವೆ. ನಮ್ಮ ತಾಲೂಕು ವಿಸ್ತೀರ್ಣದಲ್ಲಿ ದೊಡ್ಡದು ಇದೆ. ವಿಸ್ತೀರ್ಣದ ಆದರದ ಮೇಲೆ ಅನುದಾನ ನೀಡಬೇಕು. ನಮ್ಮ ತಾಲೂಕಿನಲ್ಲಿ 300 ಹಳ್ಳಿಗಳು ಇವೆ. ಆದರೆ, ನಮ್ಮ ತಾಲೂಕು ಕೆಎಸ್ಆರ್ ಟಿಸಿಯಲ್ಲಿ ಕೇವಲ 70 ಬಸ್ ಗಳು ಇವೆ. ಈ ಬಸ್ಗಳು ಹಳೆಯಾದಾಗಿವೆ. ನಮ್ಮ ತಾಲೂಕಿನ ಶಾಲೆಗಳಲ್ಲಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಹಳ್ಳಿಗಳಿಗೆ ಸಂಪರ್ಕ ರಸ್ತೆಗಳು ಸಮರ್ಪಕವಾಗಿ ಇಲ್ಲ. ತಾಲೂಕಿನಲ್ಲಿ ಹೆಚ್ಚಿನ ಹಾಡಿ ಜನರು ವಾಸ ಮಾಡುತ್ತಿದ್ದಾರೆ. ಹೀಗಾಗಿ, ನಮ್ಮ ತಾಲೂಕಿನ ಅಭಿವೃದ್ಧಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬೇಕು ಎಂದು ಮನವಿ ಮಾಡಿದರು.