ಸಂಡೂರು: ಶರಣರ ವಚನ ಮಾನವೀಯ ಮೌಲ್ಯ ಬೆಳೆಸುತ್ತವೆ. ವಚನಗಳ ಅನುಸರಣೆಯಿಂದ ಪರಿಪೂರ್ಣ ವ್ಯಕ್ತಿತ್ವ ಸಾಧ್ಯ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಘಟಕದ ಅಧ್ಯಕ್ಷೆ ಕೆ. ಪ್ರೇಮಾ ಅಭಿಪ್ರಾಯಪಟ್ಟರು.
ಶರಣರ ವಚನಗಳ ಸ್ಮರಣೆಯಿಂದ ನಮ್ಮಲ್ಲಿ ಧನಾತ್ಮಕ ಚಿಂತನೆಗಳು ಬೆಳೆಯಲು ಸಾಧ್ಯ. ಅವುಗಳು ನಮ್ಮನ್ನು ಸನ್ಮಾರ್ಗದತ್ತ ಕೊಂಡೊಯುತ್ತವೆ. ಇಂದಿನ ಮಕ್ಕಳಿಗೆ ವಚನಗಳನ್ನು ಕಲಿಸುವುದು ಅಗತ್ಯವಿದೆ ಎಂದರು.
ಹೊಸಪೇಟೆಯ ನಿವೃತ್ತ ಪ್ರಾಚಾರ್ಯ ಡಿ.ಎಂ.ಮಲ್ಲಿಕಾರ್ಜುನಯ್ಯ ತಮ್ಮ ಪ್ರವಚನದಲ್ಲಿ ಸಮ್ಯಕ್ ಜ್ಞಾನ ಸರ್ಪಭೂಷಣ ಶಿವಯೋಗಿಗಳ ಜನನ, ಬಾಲ್ಯ, ಶಿಕ್ಷಣ, ದೇಶ ಸಂಚಾರ, ಸಾಹಿತ್ಯ ಕೃತಿಗಳ ಕುರಿತು ತಿಳಿಸಿ, ಮಹಾಜ್ಞಾನಿಗಳಾಗಿದ್ದ ಸರ್ಪಭೂಷಣ ಶಿವಯೋಗಿಗಳು ಕೈವಲ್ಯ ಕಲ್ಪವಲ್ಲರಿ ಎಂಬ ಕೃತಿ ರಚಿಸಿ, ಆಧ್ಯಾತ್ಮಿಕ ಜ್ಞಾನ ತಿಳಿಸಿಕೊಟ್ಟರು. ದೇಶ ಸಂಚಾರ ಮಾಡಿ ಅನುಭಾವಿಗಳಾದರು. ಜಾತಿಭೇದ ವಿರೋಧಿಸಿದ್ದಲ್ಲದೆ, ಮನುಷ್ಯರನ್ನು ಮಹಾತ್ಮರನ್ನಾಗಿಸಲು ಶ್ರಮಿಸಿದರು ಎಂದರು.ಪ್ರಸಾದದ ಸೇವೆ ಕೈಗೊಂಡಿದ್ದ ಪತ್ರಕರ್ತ ಅರಳಿ ಕುಮಾರಸ್ವಾಮಿ ಮಾತನಾಡಿ, ಪ್ರಭುಸ್ವಾಮಿಗಳ ಸಾನ್ನಿಧ್ಯದಲ್ಲಿ ಕಾರ್ತಿಕ ಮಾಸದಲ್ಲಿ ಪ್ರತಿ ಸೋಮವಾರ ಶಿವಾನುಭವಗೋಷ್ಠಿ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಅಕ್ಕನ ಬಳಗದ ಗೌರವಾಧ್ಯಕ್ಷೆ ಶಾಂತಮ್ಮ ಪ್ರಭುರಾಜ್ ಅಂಕಮನಾಳ್, ಹಿರಿಯ ಸಲಹಾ ಸಮಿತಿ ಸದಸ್ಯೆ ಚೆನ್ನಮ್ಮ ದೊರೇಗೌಡ್ರು, ಎಲ್.ವಸಂತಮ್ಮ ಕುಮಾರಸ್ವಾಮಿ, ನಿಕಟಪೂರ್ವ ಅಧ್ಯಕ್ಷೆ ಜ್ಯೋತಿ ನಾಗರಾಜ ಗುಡೆಕೋಟೆ, ಸರ್ವ ಸದಸ್ಯರು, ಮುಖಂಡ ಬಪ್ಪಕಾನ್ ಕುಮಾರಸ್ವಾಮಿ, ಹಗರಿ ಬಸವರಾಜಪ್ಪ, ಎಂ. ಚರಂತಯ್ಯ, ಗುಡೆಕೋಟೆ ನಾಗರಾಜ, ವೀರಯ್ಯಸ್ವಾಮಿ, ಚಂದ್ರಶೇಖರಪ್ಪ, ಮಂಗಾಪುರ ಈರಣ್ಣ, ವುಂತಕಲ್ ವೀರೇಶ್, ಹಗರಿ ಯೋಗೇಶ್, ಎಚ್. ಕೊಟ್ರಬಸಪ್ಪ ಮುಂತಾದವರು ಉಪಸ್ಥಿತರಿದ್ದರು.