ಮುದ್ದೇಬಿಹಾಳ: ನ್ಯಾಯಾಲಯದಲ್ಲಿನ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲು ಶಾಶ್ವತ ಲೋಕ್ ಅದಾಲತ್ ಆರಂಭಿಸಲಾಗಿದ್ದು, ಪಕ್ಷಗಾರರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾ.ರವೀಂದ್ರಕುಮಾರ ಕಟ್ಟಿಮನಿ ಹೇಳಿದರು.
ಪಟ್ಟಣದ ನ್ಯಾಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ ಹಾಗೂ ಸರ್ಕಾರಿ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಶಾಶ್ವತ ಲೋಕ್ ಅದಾಲತ್ನಲ್ಲಿ ಅವರು ಮಾತನಾಡಿದರು. ಸಮಾಜದಲ್ಲಿ ಶಾಂತಿ ನೆಲೆಸಲಿ ಎಂಬ ಸದುದ್ದೇಶದಿಂದ ಶಾಶ್ವತ ಲೋಕ್ ಅದಾಲತ್ ಪ್ರಾರಂಭಿಸಲಾಗಿದೆ. ಈ ಮೊದಲು ಪ್ರತೀ ಮೂರು ತಿಂಗಳಿಗೊಮ್ಮೆ ಲೋಕ್ ಅದಾಲತ್ ಹಮ್ಮಿಕೊಳ್ಳುವ ಮೂಲಕ ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುತ್ತಿದೆ. ಸಧ್ಯ ಶಾಶ್ವತ ಲೋಕ್ ಅದಾಲತ್ ಮೂಲಕ ಯಾವುದೇ ಸಂದರ್ಭದಲ್ಲಿಯೂ ಕೂಡ ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲು ಮುಂದಾಗಿದ್ದು, ಚಾಲ್ತಿ ಪ್ರಕರಣಗಳೂ ಸೇರಿದಂತೆ ಹೊಸ ವ್ಯಾಜ್ಯಗಳನ್ನೂ ಸಹ ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಲಾಗುತ್ತದೆ ಎಂದರು.ಹಿರಿಯ ವಕೀಲ ಎಸ್.ಆರ್.ಸಜ್ಜನ ವಿಶೇಶ ಉಪನ್ಯಾಸ ನೀಡಿ ಖಾಯಂ ಲೋಕ ಅದಾಲತ್ನಲ್ಲಿ ಪ್ರಕರಣ ದಾಖಲಿಸಲು ನ್ಯಾಯಾಲಯದ ಶುಲ್ಕ ವಿಧಿಸುವ ಅವಶ್ಯಕತೆ ಇಲ್ಲ. ಒಂದು ವೇಳೆ ಖಾಯಂ ಲೋಕ ಅದಾಲತ್ನಲ್ಲಿ ಪ್ರಕರಣ ಇತ್ಯರ್ಥಗೊಳ್ಳದಿದ್ದಲ್ಲಿ ಪ್ರಕರಣವನ್ನು ನ್ಯಾಯಾಲಯದ ಮೂಲಕ ಮುಂದುವರೆಸಲೂ ಅವಕಾಶಗಳು ಇವೆ. ಈ ಅವಕಾಶಗಳನ್ನು ಬಳಸಿಕೊಂಡು ಪಕ್ಷಗಾರರು ತಮ್ಮ ವ್ಯಾಜ್ಯಗಳಿಗೆ ಪರಿಹಾರ ಕಂಡುಕೊಳ್ಳಲು ಮುಂದಾಗಬೇಕು ಎಂದು ತಿಳಿಸಿದರು.ನ್ಯಾಯವಾದಿಗಳ ಸಂಘದ ಅದ್ಯಕ್ಷ ಶಶಿಕಾಂತ ಮಾಲಗತ್ತಿ ಮಾತನಾಡಿ, ಜನತೆಗೆ ತೀವ್ರವಾಗಿ ನ್ಯಾಯ ಒದಗಿಸುವ ಉದ್ದೇಶದಿಂದ ಶಾಶ್ವತ ಲೋಕ್ ಅದಾಲತ್ ಪ್ರಾರಂಭಿಸಲಾಗಿದೆ. ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ಹೇಳಿದರು.ನ್ಯಾ.ಸಚಿನ್ ಕೌಶಿಕ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ಸಿವಿಲ್ ನ್ಯಾಯಾಧೀಶರಾದ ರಾಮಮೂರ್ತಿ.ಎನ್, ಅಪರ ಸರ್ಕಾರಿ ವಕೀಲರಾದ ಎಚ್.ಎಲ್.ಸರೂರ, ಕಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ಬಸವರಾಜ ಆಹೇರಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶಿವಮೂರ್ತಿ ಕುಂಬಾರ, ತಹಸೀಲ್ದಾರ್ ಕಚೇರಿಯ ಶಿರಸ್ತೇದಾರ ಎಂ.ಎ.ಬಾಗೇವಾಡಿ, ನ್ಯಾಯವಾದಿಗಳ ಸಂಘದ ಪ್ರಧಾನ ಕಾರ್ಯದರ್ಶಿ ಪಿ.ಬಿ.ಗೌಡರ, ಹಿರಿಯ ನ್ಯಾಯವಾದಿಗಳಾದ ಜೆ.ಎ.ಚಿನಿವಾರ, ರವಿ ನಾಲತವಾಡ, ಚೇತನ ಶಿವಶಿಂಪಿ, ಹಸೀನಾ ಅನಂತಪೂರ, ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕ ಅರವಿಂದ ಕುಂಬಾರ, ದಲಾಯತ್ ಮಹಾಂತೇಶ ಹಚರೆಡ್ಡಿ ಸೇರಿದಂತೆ ನ್ಯಾಯಾಲಯದ ಸಿಬ್ಬಂದಿ ಮತ್ತು ಪಕ್ಷಗಾರರು ಭಾಗಿಯಾಗಿದ್ದರು.ಕೋಟ್:ಶಾಶ್ವತ ಲೋಕ್ ಅದಾಲತ್ನಲ್ಲಿ ₹ 1 ಕೋಟಿ ವರೆಗೆ ಪರಿಹಾರ ಕೊಡಿಸಲು ಅವಕಾಶಗಳಿವೆ. ವ್ಯಾಜ್ಯ ಮುಕ್ತ ದೇಶವನ್ನಾಗಿಸಲು ಸರ್ಕಾರ ಮತ್ತು ನ್ಯಾಯಾಂಗ ಇಲಾಖೆ ಸಾಕಷ್ಟು ಪ್ರಯತ್ನಿಸುತ್ತಿದ್ದು, ಇದರಲ್ಲಿ ಪಕ್ಷಗಾರರ ಸಹಭಾಗಿತ್ವದ ಅವಶ್ಯವಿದೆ.ರವೀಂದ್ರಕುಮಾರ ಕಟ್ಟಿಮನಿ, ಅಧ್ಯಕ್ಷರು, ತಾಲೂಕು ಕಾನೂನು ಸೇವಾ ಸಮಿತಿ