ಕನಕಗಿರಿ:
ಸಾಮೂಹಿಕ ವಿವಾಹಕ್ಕೆ ಅನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಸೂಚಿಸಿದರು. ಪಟ್ಟಣದ ತಹಸೀಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಬಾಲ್ಯ ವಿವಾಹ ಸಮನ್ವಯ ಸಮಿತಿ, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆ ಹಾಗೂ ಮಕ್ಕಳ ರಕ್ಷಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಗ್ರಾಮದ ಜಾತ್ರೆ, ಮತ್ತಿತರೆ ಕಾರ್ಯಕ್ರಮಗಳಲ್ಲಿ ಹಮ್ಮಿಕೊಳ್ಳುವ ಸಾಮೂಹಿಕ ವಿವಾಹ ಮಹೋತ್ಸವಕ್ಕೆ ತಾಲೂಕು ಆಡಳಿತ ಅಥವಾ ಬಾಲ್ಯ ವಿವಾಹ ಸಮನ್ವಯ ಸಮಿತಿಯಿಂದ ಪರವಾನಗಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು. ಒಂದು ವೇಳೆ ಪರವಾನಗಿ ಪಡೆಯದೇ ಸಾಮೂಹಿಕ ವಿವಾಹ ಕಾರ್ಯಕ್ರಮ ನಡೆಸಿದಲ್ಲಿ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದರು.
ಇನ್ನೂ ಬಾಲ್ಯ ವಿವಾಹ ಮುಕ್ತ ತಾಲೂಕುನ್ನಾಗಿಸಲು ಅಧಿಕಾರಿಗಳು ಮುಂದಾಗಬೇಕು. ಬಾಲ್ಯ ವಿವಾಹ ನಡೆಯುವುದು ಕಂಡು ಬಂದರೆ ಸಾರ್ವಜನಿಕರು ಹತ್ತಿರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಆಡಳಿತ ವರ್ಗ ಹಾಗೂ ಸಾರ್ವಜನಿಕರು ಒಗ್ಗಟ್ಟಾಗಿ ಕೆಲಸ ಮಾಡಿದರೆ ಬಾಲ್ಯ ವಿವಾಹ ಮುಕ್ತ ತಾಲೂಕಾಗಲಿದೆ. ಅಲ್ಲದೇ ಬಾಲ್ಯ ವಿವಾಹ ನಡೆಯುತ್ತಿರುವುದು ಕಂಡು ಬಂದರೂ ಅಂತಹವರ ಮೇಲೆ ಕೇಸ್ ದಾಖಲಿಸದಿದ್ದರೆ ಬಾಲ್ಯ ವಿವಾಹ ನಿಷೇಧಾಧಿಕಾರಿಗಳ ವಿರುದ್ಧವೇ ಸರ್ಕಾರ ಕ್ರಮಕೈಗೊಳ್ಳಲಿದೆ ಎಂದು ಎಚ್ಚರಿಸಿದರು.ತಾಪಂ ಇಒ ರಾಜಶೇಖರ, ಸಮುದಾಯ ಆರೋಗ್ಯ ಕೇಂದ್ರದ ನೀರಿಕ್ಷಣಾಧಿಕಾರಿ ರಮೇಶ, ಸಾಮಾಜಿಕ ಕಾರ್ಯಕರ್ತ ರವಿಕುಮಾರ ಸೇರಿದಂತೆ ತಹಸೀಲ್ದಾರ್ ಹಾಗೂ ಸಿಡಿಪಿಒ ಕಾರ್ಯಾಲಯದ ಸಿಬ್ಬಂದಿ ಇದ್ದರು. ಬಾಲ್ಯ ವಿವಾಹ, ಮಹಿಳಾ ಸಾಗಾಣಿಕೆ ಹಾಗೂ ಮಕ್ಕಳ ಅಪಹರಣಕ್ಕೆ ಕುರಿತಂತೆ ಸಾರ್ವಜನಿಕ ಸ್ಥಳಗಳಲ್ಲಿ ಗೋಡೆ ಬರಹ ಬರೆಯಿಸಿ ಜನರನ್ನು ಜಾಗೃತರನ್ನಾಗಿಸಲಾಗುವುದು. ಮಕ್ಕಳ ಹಾಗೂ ಮಹಿಳೆಯರ ಮೇಲಾಗುವ ದೌರ್ಜನ್ಯ, ಅನ್ಯಾಯ ತಡೆಯಲು ಮುಂದಾಗುತ್ತೇವೆ ಎಂದು ಸಿಡಿಪಿಒ ವಿರೂಪಾಕ್ಷಿ ಹೇಳಿದರು.