ಹಿರೇಬಾಸೂರ ಗ್ರಾಮದ ಫಲಾನುಭವಿಗಳ ಮನೆ ಪಟ್ಟಾ ನೀಡಲು ಆಗ್ರಹಿಸಿ ಮನವಿ

KannadaprabhaNewsNetwork | Published : Jun 27, 2025 12:48 AM

ಇತ್ತೀಚೆಗೆ ಮತ್ತೆ ಇದು ಸ್ಮಶಾನ ಎಂದು ಇರುವುದಾಗಿ ತಿಳಿಸಿ ಮನೆಗಳ ಸರ್ವೇ ಮಾಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಹೀಗಾಗಿ ಇಲ್ಲಿ ವಾಸಿಸುವವರಿಗೆ ಆತಂಕ ಉಂಟಾಗಿದೆ.

ಹಾನಗಲ್ಲ: ತಾಲೂಕಿನ ಹಿರೇಬಾಸೂರ ಗ್ರಾಮದಲ್ಲಿ 50 ವರ್ಷಗಳಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿರುವ 34ಕ್ಕೂ ಅಧಿಕ ಕುಟುಂಬಗಳಿಗೆ ಮನೆ ಪಟ್ಟಾ ನೀಡುವಂತೆ ತಹಸೀಲ್ದಾರರಿಗೆ ಫಲಾನುಭವಿಗಳು ಮನವಿ ಸಲ್ಲಿಸಿದರು.ತಾಲೂಕಿನ ಹಿರೇಬಾಸೂರು ಗ್ರಾಮದ ಒಂದು ಎಕರೆ ಜಮೀನಿನ ಪಹಣಿಯಲ್ಲಿ ಹಿಂದೂ ಜನರ ಸ್ಮಶಾನ ಎಂದು ದಾಖಲಾಗಿರುವುದನ್ನು ರದ್ದುಪಡಿಸಿ, ಈ ಜಮೀನಿನಲ್ಲಿ 50 ವರ್ಷಗಳಿಂದ ಜನರು ಮನೆ ಕಟ್ಟಿಕೊಂಡು ವಾಸಿಸುತ್ತಿದ್ದಾರೆ. ಅಲ್ಲದೆ ಸೋಮಸಾಗರ ಗ್ರಾಮ ಪಂಚಾಯಿತಿಯು ಈ ಮನೆಗಳಿಗೆ ಕುಡಿಯುವ ನೀರು, ಬೀದಿದೀಪ, ಆಶ್ರಯ ಮನೆಗಳನ್ನು ನೀಡಿದೆ. ಅಲ್ಲದೆ ದೃಢೀಕರಣ ಪತ್ರಗಳನ್ನೂ ನೀಡಿದೆ. ವಿದ್ಯುತ್ ಸಂಪರ್ಕವನ್ನೂ ನೀಡಲಾಗಿದೆ. ಇತ್ತೀಚೆಗೆ ಮತ್ತೆ ಇದು ಸ್ಮಶಾನ ಎಂದು ಇರುವುದಾಗಿ ತಿಳಿಸಿ ಮನೆಗಳ ಸರ್ವೇ ಮಾಡಲು ಅಧಿಕಾರಿಗಳು ನಿರಾಕರಿಸಿದ್ದಾರೆ. ಹೀಗಾಗಿ ಇಲ್ಲಿ ವಾಸಿಸುವವರಿಗೆ ಆತಂಕ ಉಂಟಾಗಿದೆ. ಈಗಾಗಲೇ ಹಿರೇಬಾಸೂರ ಗ್ರಾಮದಲ್ಲಿ ಬೇರೆಡೆಗೆ ಹಿಂದೂ ಹಾಗೂ ಮುಸ್ಲಿಂ ಸಮುದಾಯಕ್ಕೆ ಸ್ಮಶಾನಕ್ಕೆ ಜಾಗಗಳನ್ನು ನೀಡಲಾಗಿದೆ. ಇಂತಹ ಸಂದರ್ಭದಲ್ಲಿ ಇಲ್ಲಿ ಮನೆ ಕಟ್ಟಿಕೊಂಡು ವಾಸಿಸುವವರೆಗೆ ಅನಗತ್ಯ ತೊಂದರೆಯಾಗದಂತೆ ಪಟ್ಟಾ ನೀಡಿ ಅವರಿಗೆ ಅನುಕೂಲ ಮಾಡಿಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ರೈತ ಮೋರ್ಚಾ ಕಾರ್ಯದರ್ಶಿ ಬಸವರಾಜ ಹಾದಿಮನಿ, ಜಿಲ್ಲಾ ಅಧ್ಯಕ್ಷ ಕಲ್ಯಾಣಕುಮಾರ ಶೆಟ್ಟರ, ಗ್ರಾಪಂ ಅಧ್ಯಕ್ಷ ಮಹೇಶ ಬಣಕಾರ, ಮುಖಂಡರಾದ ಸುರೇಶ ಭಜಂತ್ರಿ, ಮಾರ್ತಂಡಪ್ಪ ದೇಸಾಯಿ, ಬಸಣ್ಣ ಹಾದಿಮನಿ, ಸುರೇಶ ಕಾಗಿನೆಲ್ಲಿ, ರಾಜು ಪೂಜಾರ, ಶ್ರೀಧರ ಕಾಗಿನೆಲ್ಲಿ, ಪ್ರಕಾಶ ಯಮನೂರ, ರಶೀದಸಾಬ್ ನಿರಮನಿಯಾರ, ಮಂಜು ಪೂಜಾರ, ಶಿವಾನಂದ ಭಜಂತ್ರಿ, ಮಲ್ಲೇಶ ಪೂಜಾರ, ಬಸಪ್ಪ ಅಂಗಡಿ, ಅಲ್ತಾಫ್ ನಾಗನೂರ ಇದ್ದರು.ಸ್ಪಷ್ಟನೆ: ಈ ಕುರಿತು ಸ್ಪಷ್ಟನೆ ನೀಡಿದ ತಹಸೀಲ್ದಾರ್ ಎಸ್. ರೇಣುಕಮ್ಮ, ಅವರೆಲ್ಲ ವಾಸಿಸುವ ಜಾಗೆ ಸ್ಮಶಾನದ ಜಾಗೆ ಎಂದಾಗಿ ನಮೂದಾಗಿದೆ. ಅದನ್ನು ಕೂಡಲೇ ಬದಲಾಯಿಸಿ. ಅವರೆಲ್ಲರಿಗೂ ಪಟ್ಟಾ ನೀಡಲಾಗುತ್ತದೆ. ಈ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಬಹಳ ಕಾಲದಿಂದ ಅಲ್ಲಿ ಜನವಸತಿ ಇರುವುದು ಗಮನದಲ್ಲಿದೆ. ಶೀಘ್ರ ಕಾನೂನು ಕ್ರಮದಲ್ಲಿ ಸಮಸ್ಯೆ ಪರಿಹರಿಸಲಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.