ಜನರ ಸಮಸ್ಯೆ ಆಲಿಸಲು ಫೋನ್‌ ಇನ್‌ ಕಾರ್ಯಕ್ರಮ: ಮೇಯರ್‌ ರಾಮಪ್ಪ ಬಡಿಗೇರ್‌

KannadaprabhaNewsNetwork | Published : Jan 22, 2025 12:31 AM

ಸಾರಾಂಶ

ಪ್ರತಿ ತಿಂಗಳ ಮೊದಲ ಬುಧವಾರ ಬೆಳಗ್ಗೆ 11ರಿಂದ 12ರ ವರೆಗೆ ಪೋನ್​ ಇನ್​ ಕಾರ್ಯಕ್ರಮ ನಡೆಸಲಾಗುವುದು. ಸಮಯ ವಿಸ್ತರಿಸುವ ಬಗ್ಗೆ ಚಿಂತಿಸಲಾಗುವುದು. ಜ. 22ರಂದು ಪೋನ್​ ಇನ್​ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದು ಮೇಯರ್‌ ರಾಮಪ್ಪ ಬಡಿಗೇರ ಹೇಳಿದರು.

ಹುಬ್ಬಳ್ಳಿ:ಜನರ ಸಮಸ್ಯೆಗಳನ್ನು ನೇರವಾಗಿ ಆಲಿಸಿ, ಪರಿಹರಿಸುವ ಉದ್ದೇಶದಿಂದ ಪಾಲಿಕೆ ಅಧಿಕಾರಿಗಳೊಂದಿಗೆ ಸೇರಿ ಪ್ರತಿ ತಿಂಗಳು ಮೊದಲ ಬುಧವಾರ ಫೋನ್‌ ಇನ್‌ ಕಾರ್ಯಕ್ರಮ ನಡೆಸಲು ಮೇಯರ್‌ ರಾಮಪ್ಪ ಬಡಿಗೇರ ತೀರ್ಮಾನಿಸಿದ್ದಾರೆ. ಇಂದು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.

ಪಾಲಿಕೆಯ ತಮ್ಮ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೇಯರ್‌, ಪಾಲಿಕೆ ವ್ಯಾಪ್ತಿಯ ಸಾರ್ವಜನಿಕರು "ಮೊಬೈಲ್​ ಸಂಖ್ಯೆ 82778 02331''''''''ಗೆ ಕರೆ ಮಾಡಿ ಸಮಸ್ಯೆ ಹೇಳಿದರೆ, 15 ದಿನಗಳೊಳಗೆ ಸಮಸ್ಯೆ ಬಗೆಹರಿಸಲಾಗುವುದು ಎಂದರು.

ಪ್ರತಿ ತಿಂಗಳ ಮೊದಲ ಬುಧವಾರ ಬೆಳಗ್ಗೆ 11ರಿಂದ 12ರ ವರೆಗೆ ಪೋನ್​ ಇನ್​ ಕಾರ್ಯಕ್ರಮ ನಡೆಸಲಾಗುವುದು. ಸಮಯ ವಿಸ್ತರಿಸುವ ಬಗ್ಗೆ ಚಿಂತಿಸಲಾಗುವುದು. ಜ. 22ರಂದು ಪೋನ್​ ಇನ್​ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.

ಈಗಾಗಲೇ ಕಾರ್ಯದಲ್ಲಿರುವ ಪಾಲಿಕೆ ಕಂಟ್ರೋಲ್​ ರೂಮ್​ಗೆ ಜನರು ಎಂದಿನಂತೆ ಕರೆ ಮಾಡಿ, ಸಮಸ್ಯೆ ದಾಖಲಿಸಬಹುದು. ಕಂಟ್ರೋಲ್​ ರೂಮ್​ ಸಹ ಎಂದಿನಂತೆ ಕಾರ್ಯನಿರ್ವಹಿಸುತ್ತದೆ ಎಂದು ತಿಳಿಸಿದರು.ಫೋನ್​ ಇನ್​ ಕಾರ್ಯಕ್ರಮಕ್ಕೆ ಕರೆ ಮಾಡಿ ಹೇಳುವ ಸಮಸ್ಯೆಗಳನ್ನು ನಿಗದಿತ ಸಮಯದೊಳಗೆ ಬಗೆಹರಿಸದೇ ಇದ್ದರೆ ಸಂಬಂಧಿಸಿದ ಅಧಿಕಾರಿ ಅಥವಾ ಸಿಬ್ಬಂದಿ ವಿರುದ್ಧ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು ಎಂದ ಅವರು, ತಮ್ಮೊಂದಿಗೆ ಪಾಲಿಕೆ ಆಯುಕ್ತರು, ವಲಯ ಕಚೇರಿಗಳ ಸಹಾಯಕ ಆಯುಕ್ತರು, ಹೆಲ್ತ್​ ಇನ್‌ಸ್ಪೆಕ್ಟರ್​, ತೆರಿಗೆ ಅಧಿಕಾರಿಗಳು ಸೇರಿದಂತೆ ವಿವಿಧ ವಿಭಾಗಗಳ ಅಧಿಕಾರಿಗಳು ಹಾಜರಿರುತ್ತಾರೆ ಎಂದು ತಿಳಿಸಿದರು. ₹ 26 ಕೋಟಿ ಪ್ರಾಪರ್ಟಿ ಟ್ಯಾಕ್ಸ್​ ಬಾಕಿ ಇದೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದ ಬಡಿಗೇರ, ಪ್ರತಿ ಮನೆಯಿಂದ ತೆರಿಗೆ ಸಂಗ್ರಹಕ್ಕಾಗಿ ಪಾಲಿಕೆ ಸಿಬ್ಬಂದಿಗೆ 78 ಮಷಿನ್​ ನೀಡಲಾಗಿದೆ. ಅವರು ಪ್ರತಿ ಮನೆಗೆ ಭೇಟಿ ನೀಡಿ ತೆರಿಗೆ ಸಂಗ್ರಹಿಸುತ್ತಾರೆ ಎಂದರು. ಬಾಕಿ ತೆರಿಗೆ ಹಾಗೂ ನೀರಿನ ಕರವನ್ನು ಒನ್​ ಟೈಮ್​ ಸೆಟ್ಲ್‌ಮೆಂಟ್​ ಮಾಡುವಂತೆ ಆಗ್ರಹಿಸಿ ಮುಖ್ಯಮಂತ್ರಿ ಬಳಿ ಪಾಲಿಕೆ ಸರ್ವಪಕ್ಷ ಸದಸ್ಯರ ನಿಯೋಗದೊಂದಿಗೆ ಭೇಟಿ ನೀಡಲಾಗುವುದು. ಇದರೊಂದಿಗೆ ಬಾಕಿ ಪಿಂಚಣಿ ₹ 58 ಕೋಟಿ ಸೇರಿದಂತೆ ಪಾಲಿಕೆಗೆ ಸರ್ಕಾರದಿಂದ ವಿವಿಧ ಮೂಲಗಳಿಂದ ಬರಬೇಕಿರುವ ₹ 300 ಕೋಟಿ ಬಿಡುಗಡೆಗೊಳಿಸುವಂತೆಯೂ ಮನವಿ ಮಾಡಲಾಗುವುದು ಎಂದು ಹೇಳಿದರು. ಪಾಲಿಕೆ ಸಭಾನಾಯಕ ವೀರಣ್ಣ ಸವಡಿ ಮಾತನಾಡಿ, ಪಾಲಿಕೆ ವ್ಯಾಪ್ತಿಯ ಆಸ್ತಿಗಳನ್ನು ಜಿಐಎಸ್​ ಸರ್ವೇ ನಡೆಸಲು ಟೆಂಡರ್​ ಕರೆಯಲಾಗಿದೆ. ಪ್ರತಿ ವರ್ಷ ಪಾಲಿಕೆಗೆ ಅಂದಾಜು ₹ 120 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗುತ್ತಿದ್ದು, ಜಿಐಎಸ್​ ಸರ್ವೇಯಿಂದ ₹ 350ರಿಂದ ₹ 400 ಕೋಟಿ ಆಸ್ತಿ ತೆರಿಗೆ ಸಂಗ್ರಹವಾಗುವ ನಿರೀಕ್ಷೆ ಇದೆ ಎಂದು ತಿಳಿಸಿದರು. ಪಾಲಿಕೆ ಆಯುಕ್ತ ಈಶ್ವರ ಉಳ್ಳಾಗಡ್ಡಿ ಮಾತನಾಡಿ, ನವೀಕೃತ ಜನತಾ ಬಜಾರ್‌ ಕಟ್ಟಡದಲ್ಲಿ 122 ಕಟ್ಟಾಗಳನ್ನು ನಿರ್ಮಿಸಲಾಗಿದೆ. ಈ ಮೊದಲು 177 ಕಟ್ಟಾಗಳಿದ್ದವು. ಇದೀಗ, 122 ಕಟ್ಟಾಗಳನ್ನು ಹಸ್ತಾಂತರ ಮಾಡಿ, ಬಾಕಿ ಉಳಿದ ಕಟ್ಟಾಗಳನ್ನು ನಿರ್ಮಿಸಲಾಗುವುದು. ಅಂಗಡಿಗಳನ್ನು ಹರಾಜಿನ ಮೂಲಕ ಹಸ್ತಾಂತರಿಸಲಾಗುವುದು ಎಂದರು.ಉಪ ಮೇಯರ್‌ ದುರ್ಗಮ್ಮ ಬಿಜವಾಡ ಹಾಜರಿದ್ದರು.

Share this article