ಕನ್ನಡಪ್ರಭ ವಾರ್ತೆ ಆಲೂರು
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಮಲೆನಾಡು ಛಾಯಾಗ್ರಾಹಕರ ಸಂಘದ ವತಿಯಿಂದ ಆಯೋಜಿಸಿದ್ದ ಸಹ ಕುಟುಂಬ ಸಮ್ಮಿಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯಾವುದೇ ಕ್ಷೇತ್ರದಲ್ಲಿ ಸಂಘಟಿತರಾಗಿ ಮುನ್ನಡೆದಾಗ ಮಾತ್ರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಾಗೂ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಸಾಧ್ಯ. ಛಾಯಾಗ್ರಾಹಕರು ಕೂಡ ಸಂಘಟನೆಯ ಶಕ್ತಿಯನ್ನು ಬಳಸಿಕೊಂಡು ವೃತ್ತಿಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಸಲಹೆ ನೀಡಿದರು. ಹಿಂದಿನ ಕಾಲದ ಛಾಯಾಗ್ರಹಣಕ್ಕೂ ಇಂದಿನ ಛಾಯಾಗ್ರಹಣಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಹಿಂದೆ ಒಂದು ಊರಿಗೆ ಒಂದೆರಡು ಸ್ಟುಡಿಯೋಗಳಿರುತ್ತಿದ್ದವು. ಮದುವೆ, ಶುಭ ಸಮಾರಂಭ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ಮಾತ್ರ ಕ್ಯಾಮೆರಾ ಬಳಕೆಯಾಗುತ್ತಿತ್ತು. ಆದರೆ ಇಂದು ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಕ್ಯಾಮೆರಾ ಲಭ್ಯವಿದ್ದು, ಸಾಮಾನ್ಯ ವ್ಯಕ್ತಿಯೂ ಉತ್ತಮ ಗುಣಮಟ್ಟದ ಚಿತ್ರಗಳನ್ನು ಸೆರೆಹಿಡಿಯುವ ಹಾಗೂ ವಿವಿಧ ವಿನ್ಯಾಸಗಳನ್ನು ರೂಪಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು. ಡಿಜಿಟಲ್ ಕ್ಯಾಮೆರಾ, ಆಧುನಿಕ ಎಡಿಟಿಂಗ್ ತಂತ್ರಜ್ಞಾನ, ಗ್ರಾಫಿಕ್ ವಿನ್ಯಾಸ ಹಾಗೂ ಕೃತಕ ಬುದ್ಧಿಮತ್ತೆ (ಎಐ) ಸೇರಿದಂತೆ ಹಲವು ಹೊಸ ತಂತ್ರಜ್ಞಾನಗಳು ಛಾಯಾಗ್ರಹಣ ಕ್ಷೇತ್ರದಲ್ಲಿ ಮಹತ್ವದ ಬದಲಾವಣೆ ತಂದಿವೆ. ಈ ಬದಲಾವಣೆಗಳಿಗೆ ಹೊಂದಿಕೊಳ್ಳುವ ಮೂಲಕ ಛಾಯಾಗ್ರಾಹಕರು ತಮ್ಮ ವೃತ್ತಿಪರ ಕೌಶಲವನ್ನು ನಿರಂತರವಾಗಿ ಹೆಚ್ಚಿಸಿಕೊಳ್ಳಬೇಕು. ಆಗ ಮಾತ್ರ ಹೊಸ ತಲೆಮಾರಿನ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಗುಣಮಟ್ಟದ ಸೇವೆ ನೀಡಲು ಸಾಧ್ಯ ಎಂದರು.ಹಳೆಯ ಸ್ಟುಡಿಯೋಗಳು ಕಣ್ಮರೆಸಕಲೇಶಪುರ ಭಾಗದಲ್ಲಿ ಹಿಂದೆ ಹಲವು ಸ್ಟುಡಿಯೋಗಳು ಜನಪ್ರಿಯವಾಗಿದ್ದವು. ಆದರೆ ಕಾಲಕ್ರಮೇಣ ಅವುಗಳಲ್ಲಿ ಹಲವು ಕಣ್ಮರೆಯಾಗಿವೆ. ತಂತ್ರಜ್ಞಾನದಲ್ಲಿನ ಬದಲಾವಣೆ ಹಾಗೂ ಗ್ರಾಹಕರ ನಿರೀಕ್ಷೆಗೆ ತಕ್ಕಂತೆ ಹೊಂದಿಕೊಳ್ಳದಿರುವುದು ಇದಕ್ಕೆ ಪ್ರಮುಖ ಕಾರಣವಾಗಿರಬಹುದು. ಹೀಗಾಗಿ ಛಾಯಾಗ್ರಾಹಕರು ಬದಲಾವಣೆಯನ್ನು ಸವಾಲಾಗಿ ಸ್ವೀಕರಿಸಿ ಹೊಸ ತಂತ್ರಜ್ಞಾನ ಕಲಿಯಬೇಕು. ವೃತ್ತಿಯಲ್ಲಿ ಹೊಸತನ ಅಳವಡಿಸಿಕೊಂಡು ಮುಂದಿನ ಪೀಳಿಗೆಗೂ ಈ ಕ್ಷೇತ್ರವನ್ನು ಕೊಂಡೊಯ್ಯಬೇಕು ಎಂದು ಹೇಳಿದರು. ಆಧುನಿಕ ತಂತ್ರಜ್ಞಾನದ ಯುಗದಲ್ಲಿಯೂ ಛಾಯಾಗ್ರಾಹಕರ ವೃತ್ತಿಗೆ ತನ್ನದೇ ಆದ ಮಹತ್ವವಿದೆ. ಛಾಯಾಚಿತ್ರವೆಂದರೆ ಕೇವಲ ಒಂದು ಚಿತ್ರವಲ್ಲ. ಅದು ಮನುಷ್ಯನ ಜೀವನದ ಅಮೂಲ್ಯ ಕ್ಷಣಗಳನ್ನು ಶಾಶ್ವತವಾಗಿ ಉಳಿಸುವ ನೆನಪು. ಹಣ ಕೊಟ್ಟರೂ ಮರಳಿ ಪಡೆಯಲಾಗದ ಕ್ಷಣಗಳನ್ನು ಛಾಯಾಗ್ರಾಹಕರು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದು ಮುಂದಿನ ಪೀಳಿಗೆಗೆ ಉಳಿಸುತ್ತಾರೆ ಎಂದರು. ಮನೆಯಲ್ಲಿರುವ ಹಳೆಯ ಆಲ್ಬಂಗಳಲ್ಲಿನ ಛಾಯಾಚಿತ್ರಗಳು ಇಂದು ಅತ್ಯಂತ ಅಮೂಲ್ಯವಾಗಿವೆ. ಅವು ಕಳೆದುಹೋದರೆ ಎಷ್ಟೇ ಹಣ ಖರ್ಚು ಮಾಡಿದರೂ ಅದೇ ಕ್ಷಣವನ್ನು ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ನೂರು ವರ್ಷಗಳ ಹಿಂದೆ ನಮ್ಮ ಊರು ಹೇಗಿತ್ತು ಎಂಬುದನ್ನು ತಿಳಿದುಕೊಳ್ಳಲು ಹಳೆಯ ಛಾಯಾಚಿತ್ರಗಳೇ ಪ್ರಮುಖ ಸಾಕ್ಷಿಯಾಗಿವೆ. ಅದೇ ರೀತಿ ೨೦-೨೫ ವರ್ಷಗಳ ಹಿಂದೆ ನಾವು ಹೇಗಿದ್ದೆವು ಎಂಬುದನ್ನು ನೆನಪಿಸಿಕೊಳ್ಳಲು ಕೂಡ ಛಾಯಾಚಿತ್ರಗಳು ನೆರವಾಗುತ್ತವೆ ಎಂದರು.ಇದೇ ವೇಳೆ ಛಾಯಾಗ್ರಾಹಕರ ಸಂಘದ ವತಿಯಿಂದ ಸಂಘದ ಕಟ್ಟಡ ನಿರ್ಮಾಣಕ್ಕಾಗಿ ನಿವೇಶನ ಒದಗಿಸುವಂತೆ ಶಾಸಕ ಸಿಮೆಂಟ್ ಮಂಜು ಅವರಿಗೆ ಮನವಿ ಸಲ್ಲಿಸಲಾಯಿತು. ಶಾಸಕರು ಛಾಯಾಗ್ರಾಹಕರಿಗೆ ನೂತನ ಗುರುತಿನ ಚೀಟಿ ವಿತರಿಸಿದರು. ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಅಂಕ ಗಳಿಸಿದ ಛಾಯಾಗ್ರಾಹಕರ ಮಕ್ಕಳನ್ನು ಅಭಿನಂದಿಸಲಾಯಿತು.ಇದೇ ವೇಳೆ ಜಿಲ್ಲಾ ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನಿಂಗರಾಜು, ಕೆಪಿಎ ನಿರ್ದೇಶಕ ಕೊನೆರಿ ಸೂರಿ, ಜಿಲ್ಲಾ ಛಾಯಾಗ್ರಾಹಕರ ಸಂಘದ ನಿರ್ದೇಶಕ ಹೇಮಚಂದ್ರ, ಆಲೂರು ತಾಲೂಕು ಮಲೆನಾಡು ಛಾಯಾಗ್ರಾಹಕರ ಸಂಘದ ಅಧ್ಯಕ್ಷ ನೀಲೇಶ್, ಕಾರ್ಯದರ್ಶಿ ವಸಂತರಾಜು, ಖಜಾಂಚಿ ಮನುಕುಮಾರ್ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳ ಛಾಯಾಗ್ರಾಹಕರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಛಾಯಾಗ್ರಾಹಕರು ಉಪಸ್ಥಿತರಿದ್ದರು.