ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಯುವ ಕಾಂಗ್ರೆಸ್‌ ಇದು ಕೇವಲ ಒಂದು ಸಂಘಟನೆಯ ಸಂಸ್ಥಾಪಕ ದಿನವಲ್ಲ. ಇದು ದೇಶದ ಯುವಕರ ಧ್ವನಿಗೆ ರಾಜಕೀಯ ವೇದಿಕೆ ದೊರೆತ ದಿನ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್ ಹೇಳಿದರು.

ನಗರದ ಜಿಲ್ಲಾ ಕಾಂಗ್ರೆಸ್‌ ಭವನದಲ್ಲಿ ಭಾನುವಾರ ಯುವ ಕಾಂಗ್ರೆಸ್‌ನ ಸಂಸ್ಥಾಪನ ದಿನದ ಅಂಗವಾಗಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿ, ಯುವ ಕಾಂಗ್ರೆಸ್‌ ಸಂಸ್ಥಾಪನೆ ದಿನ ಯುವಕರ ಕನಸು, ಹೋರಾಟ, ಶಕ್ತಿ ಮತ್ತು ನಾಯಕತ್ವಕ್ಕೆ ದಿಕ್ಕು ತೋರಿದ ದಿನ. ಯುವ ಕಾಂಗ್ರೆಸ್ ಎಂದರೆ ಕೇವಲ ಒಂದು ಸಂಘಟನೆಯ ಹೆಸರು ಅಲ್ಲ. ಯುವ ಕಾಂಗ್ರೆಸ್ ಎಂದರೆ ಹೋರಾಟ, ಯುವ ಕಾಂಗ್ರೆಸ್ ಎಂದರೆ ಸೇವೆ, ಯುವ ಕಾಂಗ್ರೆಸ್ ಎಂದರೆ ಸಾಮಾಜಿಕ ನ್ಯಾಯ, ಯುವ ಕಾಂಗ್ರೆಸ್ ಎಂದರೆ ದೇಶದ ಭವಿಷ್ಯವನ್ನು ಕಟ್ಟುವ ಯುವ ಶಕ್ತಿ ಎಂದು ತಿಳಿಸಿದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎನ್‌.ರಮೇಶ್ ಮಾತನಾಡಿ, ವಿದ್ಯಾರ್ಥಿಗಳು, ಯುವಕರು ಮತ್ತು ಸಾಮಾನ್ಯ ಕಾರ್ಯಕರ್ತರು ಬೀದಿಗಿಳಿದು ಹೋರಾಡಿದಾಗಲೇ ಅನೇಕ ಹಕ್ಕುಗಳು ಜನರಿಗೆ ದೊರೆತಿವೆ ಎಂದು ತಿಳಿಸಿದರು.

ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್‌.ಸಿ. ಯೋಗೇಶ್ ಮಾತನಾಡಿ, ಇಂದು ಯುವಕರು ಎದುರಿಸುತ್ತಿರುವ ಸಮಸ್ಯೆಗಳು ಹಲವಾರಿವೆ. ಉದ್ಯೋಗದ ಕೊರತೆ, ಶಿಕ್ಷಣದ ದುಬಾರಿ ವೆಚ್ಚ, ವಿದ್ಯಾರ್ಥಿಗಳ ಸಮಸ್ಯೆಗಳು, ರೈತರ ಸಂಕಷ್ಟ, ಬೆಲೆ ಏರಿಕೆ, ಸಾಮಾಜಿಕ ಅಸಮಾನತೆ ಇಂತಹ ಸಮಸ್ಯೆಗಳ ವಿರುದ್ಧ ಯುವ ಕಾಂಗ್ರೆಸ್ ಸದಾ ಜನರ ಪರವಾಗಿ ಧ್ವನಿ ಎತ್ತಬೇಕು. ನಾವು ಕೇವಲ ಚುನಾವಣೆಯ ವೇಳೆ ಕಾಣಿಸಿಕೊಳ್ಳುವ ಕಾರ್ಯಕರ್ತರಾಗಬಾರದು. ಜನರ ಕಷ್ಟದಲ್ಲಿ ಜೊತೆ ನಿಲ್ಲುವ ಕಾರ್ಯಕರ್ತರಾಗಬೇಕೆಂದು ಕರೆ ನೀಡಿದರು.


ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್‌.ರವಿಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ಮುಖಂಡರಾದ ವಿಜಯಕುಮಾರ್, ಯುವ ಮುಖಂಡರಾದ ಮಧುಸೂದನ್, ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಹರ್ಷಿತ್, ನಗರ ಅಧ್ಯಕ್ಷ ಚರಣ್, ಬ್ಲಾಕ್ ಅಧ್ಯಕ್ಷ ಪ್ರವೀಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮಲಗೊಪ್ಪ ಶಿವು, ಅಬ್ದುಲ್, ಧನರಾಜ್ ಪಾಲ್ಗೊಂಡಿದ್ದರು.