ಕನ್ನಡಪ್ರಭ ವಾರ್ತೆ ತುಮಕೂರು
ನಗರದ ಚಿಕ್ಕಪೇಟೆಯ ಇಂಟರ್ ನ್ಯಾಷನಲ್ ಸುಯೋಕು ಕನ್ ಕರಾಟೆ ಸಂಸ್ಥೆಯಿಂದ ಕರಾಟೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ವಿವಿಧ ಬೆಲ್ಟ್ ವಿತರಣೆಗಾಗಿ ಅರ್ಹತಾ ಪರೀಕ್ಷೆ ನಡೆಸಲಾಯಿತು.ನಗರದ ಜೆ.ಸಿ.ರಸ್ತೆಯ ಅಕ್ಕಮಹಾದೇವಿ ಸಭಾಂಗಣದಲ್ಲಿ ಭಾನುವಾರ ಕರಾಟೆ ವಿದ್ಯಾರ್ಥಿಗಳಿಗೆ ಅರ್ಹತಾ ಪರೀಕ್ಷೆ ನಡೆಸಿ ಕಲಿಕೆ, ಪ್ರದರ್ಶನದ ಅರ್ಹತೆ ಆಧಾರದಲ್ಲಿ ಬಣ್ಣದ ಬೆಲ್ಟ್ ವಿತರಿಸಲಾಯಿತು. ದೊಡ್ಡಬಳ್ಳಾಪುರ ಶಾಖೆಯ ಸುಮಾರು 200 ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಪಾಲ್ಗೊಂಡು ತಮ್ಮ ಕರಾಟೆ ಕಲಿಕಾ ಸಾಮರ್ಥ್ಯ ಪ್ರದರ್ಶಿಸಿದರು.
ಇಂಟರ್ ನ್ಯಾಷನಲ್ ಸುಯೋಕು ಕನ್ ಕರಾಟೆ ಸಂಸ್ಥೆಯ ಮುಖ್ಯ ಪರಿವೀಕ್ಷಕ ಕರಾಟೆ ಕೃಷ್ಣಮೂರ್ತಿ ಮಾತನಾಡಿ, ಕರಾಟೆ ಎಂಬುದು ಒಂದು ಸುಂದರ ಕಲೆ, ಕರಾಟೆ ಕಲಿಕೆಯಿಂದ ದೈಹಿಕ ಮತ್ತು ಮಾನಸಿಕ ಸದೃಢತೆ ಪಡೆಯಬಹುದು. ಜೊತೆಗೆ ಸ್ವಯಂ ರಕ್ಷಣೆಗೂ ಕರಾಟೆ ನೆರವಾಗುತ್ತದೆ ಎಂದು ಹೇಳಿದರು.ಕರಾಟೆಯಲ್ಲಿ ವಿವಿಧ ಹಂತದ ತರಬೇತಿ, ಪರಿಣಿತಿ ಪಡೆದು ಸೂಕ್ತ ಬಣ್ಣದ ಬೆಲ್ಟ್ ಪಡೆಯಬಹುದು. ಕೆಲವು ಕರಾಟೆ ಸಂಸ್ಥೆಗಳು ಸಮರ್ಪಕ ತರಬೇತಿ ನೀಡವೆ, ಅನರ್ಹರಿಗೂ ಬೆಲ್ಟ್ ವಿತರಿಸಿ ವಂಚನೆ ಮಾಡುತ್ತಿವೆ. ಇದು ಕರಾಟೆ ಕಲೆಗೆ ಮಾಡುವ ದ್ರೋಹ. ಪ್ರತಿ ಬೆಲ್ಟ್ ಅರ್ಹತೆಗೂ ನಿರ್ದಿಷ್ಟ ಅವಧಿಯ ತರಬೇತಿ ಪಡೆದು, ಕೌಶಲ್ಯತೆ, ಪ್ರಾವೀಣ್ಯತೆ ಸಾಧಿಸದ ಹೊರತು ಬೆಲ್ಟ್ ನೀಡಬಾರದು ಎಂದರು.
1980 ರಲ್ಲಿ ತಾವು ನಗರದಲ್ಲಿ ಕರಾಟೆ ಶಾಲೆ ಆರಂಭಿಸಿದ್ದು, ಈವರೆಗೂ ಸಾವಿರಾರು ಮಕ್ಕಳು ಕರಾಟೆ ತರಬೇತಿ ಪಡೆದಿದ್ದಾರೆ. ದೈಹಿಕ, ಮಾನಸಿಕ ಸಾಮರ್ಥ್ಯ ಹೆಚ್ಚಿಸಿಕೊಳ್ಳಲು ಕರಾಟೆ ಕಲೆ ಪರಿಣಾಮಕಾರಿಯಾಗಿದೆ. ಕರಾಟೆಯನ್ನು ಕಲೆ, ಕ್ರೀಡೆಯಾಗಿ ಕಲಿಯುವಂತೆ ಶಿಕ್ಷಕ ಕರಾಟೆ ಕೃಷ್ಣಮೂರ್ತಿ ಅವರು ಮಕ್ಕಳಿಗೆ ಸಲಹೆ ಮಾಡಿದರು.ಬ್ಲಾಕ್ ಬೆಲ್ಟ್ ಪಡೆದಿರುವ ಕರಾಟೆಪಟುಗಳಾದ ಟಿ.ಎಸ್.ಮಹಾಲಿಂಗಪ್ಪ, ಕೆ.ಸಾಗರ್, ಅರುಣ್, ಸುಬ್ರಹ್ಮಣ್ಯ, ಶ್ರೀನಿವಾಸ್, ವಿನಯ್, ಡಾ.ಸಂಧ್ಯಾ ಅವರು ಬೆಲ್ಟ್ ವಿತರಣೆಗಾಗಿ ನಡೆದ ಅರ್ಹತಾ ಪರೀಕ್ಷೆ ನಿರ್ವಹಣೆ ಕಾರ್ಯದಲ್ಲಿ ಕರಾಟೆ ಕೃಷ್ಣಮೂರ್ತಿಯವರಿಗೆ ಸಹಾಯಕರಾಗಿದ್ದರು.