- ಹಿರೇಮಗಳೂರಿನಲ್ಲಿ ಪಂಚವಟಿ ಯಾತ್ರಿ ನಿವಾಸ ಲೋಕಾರ್ಪಣೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಹಿರೇಮಗಳೂರಿನ ಶ್ರೀ ಕೋದಂಡ ರಾಮಚಂದ್ರಸ್ವಾಮಿ ದೇವಸ್ಥಾನ ಸಮೀಪ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ನೂತನವಾಗಿ ನಿರ್ಮಿಸಿರುವ ಪಂಚವಟಿ ಯಾತ್ರಿ ನಿವಾಸ ಕಟ್ಟಡವನ್ನು ಭಾನುವಾರ ಧಾರ್ಮಿಕ ಪೂಜಾ ಕೈಂಕರ್ಯಗಳ ನಡುವೆ ಗ್ರಾಮಸ್ಥರ ಸಮ್ಮುಖದಲ್ಲಿ ಶಾಸಕ ಎಚ್.ಡಿ.ತಮ್ಮಯ್ಯ ಲೋಕಾರ್ಪಣೆಗೊಳಿಸಿದರು.ಶ್ರೀ ಕೋದಂಡರಾಮಚಂದ್ರ ವಿಗ್ರಹವನ್ನು ದೇವಾಲಯದ ಪ್ರಧಾನ ಅರ್ಚಕರ ನೇತೃತ್ವದಲ್ಲಿ ಸಮಿತಿ ಸದಸ್ಯರು, ಗ್ರಾಮಸ್ಥರು ಸಂಪ್ರದಾಯಿಕ ಪಂಚೆ, ಶಲ್ಯ ಧರಿಸಿ ನೂತನ ಕಟ್ಟಡದ ಒಳಾಂಗಣಕ್ಕೆ ಕರೆ ತಂದರು. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಶ್ಲೋಕ, ಮಂತ್ರಗಳ ಮುಖೇನಾ ಶ್ರೀರಾಮನಲ್ಲಿ ಪ್ರಾರ್ಥನೆ ಸಲ್ಲಿಸಿ ಕಟ್ಟಡದ ಒಳಿತಿಗೆ ಶುಭ ಹಾರೈಸಿದರು.ಬಳಿಕ ಶ್ರೀರಾಮನ ವಿಗ್ರಹ ಮೂರ್ತಿಯನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ದೇವಾಲಯ ಸುತ್ತಲು ಮೆರವಣಿಗೆ ನಡೆಸಿದರು. ಗ್ರಾಮದ ಹಳೇ ವಿದ್ಯಾರ್ಥಿಗಳು ಭಕ್ತರಿಗೆ ಪಾನಕ ಹಂಚಿದರು. ಮನೆಗಳ ಸಮೀಪ ವಿಗ್ರಹ ಮೂರ್ತಿ ಬರುತ್ತಿದ್ದಂತೆ ಸ್ಥಳೀಯ ನಿವಾಸಿಗಳು, ಅಂಗಡಿ ಮುಂಗಟ್ಟುದಾರರು ರಸ್ತೆ ಶುಚಿಗೊಳಿಸಿ ಶ್ರೀ ಕೋದಂಡರಾಮನಿಗೆ ವಿಶೇಷ ಪೂಜೆ ಸಲ್ಲಿಸಿದರು.ಈ ವೇಳೆ ಮಾತನಾಡಿದ ಶಾಸಕ ಎಚ್.ಡಿ.ತಮ್ಮಯ್ಯ , ಶ್ರೀಕೋದಂಡರಾಮನ ಸನ್ನಿಧಾನಕ್ಕೆ ಆಗಮಿಸುವಂತಹ ಭಕ್ತಾಧಿ ಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು ₹2 ಕೋಟಿ ವೆಚ್ಚದಲ್ಲಿ ಪಂಚವಟಿ ಕುಟೀರ ಯಾತ್ರಿ ನಿವಾಸ ನಿರ್ಮಿಸಿ ದೂರ ದೂರಿನಿಂದ ಬರುವಂತಹ ಭಕ್ತಾಧಿಗಳಿಗೆ ರಿಯಾಯಿತಿ ದರದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು. ಸುಮಾರು 144 ವರ್ಷಗಳಿಗೊಮ್ಮೆ ಬರುವಂಥ ನಕ್ಷತ್ರದಲ್ಲಿ ಬ್ರಹ್ಮರಥೋತ್ಸವ ಆಚರಿಸುತ್ತಿರುವ ಕಾರಣ ಯಾತ್ರಿ ನಿವಾಸ ವನ್ನು ಇಂದೇ ಲೋಕಾರ್ಪಣೆ ಮಾಡಲಾಗಿದೆ. ಕ್ಷೇತ್ರದ ಮಾಜಿ ಶಾಸಕರು ಪ್ರವಾಸೋದ್ಯಮ ಸಚಿವರಾದ ಸಂದರ್ಭದಲ್ಲಿ ₹2 ಕೋಟಿ ರು. ಅನುದಾನ ಮಂಜೂರಾಗಿತ್ತು. ಇದೀಗ ಯಾತ್ರಿಕರ ನಿವಾಸ ಪೂರ್ಣಗೊಂಡು ಭಕ್ತಾಧಿಗಳಿಗೆ ಸಮರ್ಪಿಸಲಾಗಿದೆ ಎಂದು ಹೇಳಿದರು.ಪ್ರಸ್ತುತ ರಾಜ್ಯ ಸರ್ಕಾರದಿಂದ ಯಾತ್ರಿ ನಿವಾಸದ ಕಾಂಪೌಂಡ್ ನಿರ್ಮಾಣಕ್ಕೆ ₹50 ಲಕ್ಷ ಮಂಜೂರಾಗಿದ್ದು, ಈ ಪೈಕಿ ₹25 ಲಕ್ಷ ಬಿಡುಗಡೆಗೊಂಡಿದೆ. ಒಟ್ಟಾರೆ ಈ ಪಂಚ ಕುಟೀರಕ್ಕೆ ₹2.50 ಕೋಟಿ ವ್ಯಯಿಸಲಾಗಿದೆ. ಇದೀಗ ಪ್ರಸಿದ್ಧ ದೇವಾಲಯಕ್ಕೆ ಯಾತ್ರಿ ನಿವಾಸದ ಕೊರತೆ ನೀಗಿಸಿ ಭಕ್ತಾಧಿಗಳಿಗೆ ತಂಗಲು ವ್ಯವಸ್ಥೆ ಕಲ್ಪಿಸಲಾಗಿದೆ ಎಂದರು.ಯಾತ್ರಿ ನಿವಾಸಕ್ಕೆ ಭೇಟಿ ಕೊಡುವ ಭಕ್ತಾಧಿಗಳು ಹೋಂಸ್ಟೇ ಅಥವಾ ರೆಸಾರ್ಟ್ ನಂತೆ ತಿಳಿಯದೇ ದೇವಾಲಯ ಆಶ್ರಯ ತಾಣವೆಂದು ಭಾವಿಸಿ, ಶಾಂತಿಯಿಂದ ತಂಗುವ ಮೂಲಕ ಸ್ವಚ್ಛತೆ ಕಾಪಾಡಬೇಕು. ಅಲ್ಲದೇ ಈ ಕಟ್ಟಡಕ್ಕೆ ಅಡುಗೆ ಮನೆಯ ಅವಶ್ಯಕವಿರುವ ಹಿನ್ನೆಲೆ ಸದ್ಯದಲ್ಲೇ ಅಡುಗೆ ಕೋಣೆಗೆ ಅನುದಾನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ದೇವಾಲಯ ಪ್ರಧಾನ ಅರ್ಚಕ ಹಿರೇಮಗಳೂರು ಕಣ್ಣನ್ ಮಾತನಾಡಿ, ಭಾರ್ಗರಿಪುರಿ ಶ್ರೀ ಕೋದಂಡರಾಮಚಂದ್ರಸ್ವಾಮಿ ದೇವಾಲಯಕ್ಕೆ ದೇಶ-ವಿದೇಶಗಳಲ್ಲಿ ಭಕ್ತಗಣವಿದೆ. ವಿಶೇಷವಾಗಿ ಈ ಬ್ರಹ್ಮ ರಥೋತ್ಸವಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು, ದೇವಾಲಯ ಒಕ್ಕಲಿನವರು ಸಂತೋಷದಿಂದ ಪಾಲ್ಗೊಂಡು ಜಾತ್ರಾ ಮಹೋತ್ಸವ ಸಂಭ್ರಮದಿಂದ ಆಚರಿಸುತ್ತಾರೆ ಎಂದರು.ಕಾರ್ಯಕ್ರಮದಲ್ಲಿ ನಗರಸಭಾ ಅಧ್ಯಕ್ಷೆ ಸುಜಾತಾ ಶಿವಕುಮಾರ್, ಗ್ಯಾರಂಟಿ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಎಂ.ಸಿ . ಶಿವಾನಂದಸ್ವಾಮಿ, ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ನಗರಸಭೆ ಸದಸ್ಯೆ ವಿದ್ಯಾ ಬಸವರಾಜ್, ಹಿರೇಮಗಳೂರು ಗ್ರಾಮಸ್ಥರಾದ ಎಚ್.ಕೆ.ಕೇಶವಮೂರ್ತಿ, ಆಶಾ ರಂಗನಾಥ್, ಕುಲಕರ್ಣಿ, ರಮಾ ಪ್ರಸಾದ್, ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಲೋಹಿತ್, ನಿರ್ಮಿತಿ ಕೇಂದ್ರದ ಗಂಗಾಧರ್, ದೇವಾಲಯ ಟ್ರಸ್ಟಿ ಎಂ.ಎನ್.ರಂಗನಾಥ್ ಉಪಸ್ಥಿತರಿದ್ದರು. 9 ಕೆಸಿಕೆಎಂ 1ಹಿರೇಮಗಳೂರಿನಲ್ಲಿ ನೂತನವಾಗಿ ನಿರ್ಮಿಸಿರುವ ಯಾತ್ರಿ ನಿವಾಸವನ್ನು ಶಾಸಕ ಎಚ್.ಡಿ. ತಮ್ಮಯ್ಯ ಭಾನುವಾರ ಲೋಕಾರ್ಪಣೆ ಮಾಡಿದರು. ಎಂ.ಸಿ. ಶಿವಾನಂದಸ್ವಾಮಿ, ಸುಜಾತ ಶಿವಕುಮಾರ್, ಹಿರೇಮಗಳೂರು ಕಣ್ಣನ್ ಇದ್ದರು.