ಬಿ. ಶೇಖರ್ ಗೋಪಿನಾಥಂಕನ್ನಡಪ್ರಭ ವಾರ್ತೆ ಮೈಸೂರುಆಷಾಢ ಮಾಸದ ಪ್ರಯುಕ್ತ ಚಾಮುಂಡಿಬೆಟ್ಟದಲ್ಲಿರುವ ಶ್ರೀ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಲಕ್ಷಾಂತರ ಭಕ್ತರು ಭೇಟಿ ನೀಡಿ, ದೇವಿಯ ದರ್ಶನ ಪಡೆದು ಭಕ್ತಿ ಭಾವ ಮೆರೆದರು. ಇದಕ್ಕೆ ಸಾಕ್ಷಿ ಎಂಬಂತೆ ಭಕ್ತರು ತೆರಳಿದ ರಸ್ತೆಗಳ ಬದಿಯಲ್ಲಿ ಕಸದ ರಾಶಿ ಬಿದ್ದಿದೆ.ಚಾಮುಂಡಿಬೆಟ್ಟದ 1001 ಮೆಟ್ಟಿಲುಗಳ ಅರಿಶಿನ, ಕುಂಕುಮದಿಂದ ಬಣ್ಣ ಬದಲಿಸಿಕೊಂಡಿದೆ. ತುಂತುರು ಮಳೆ ಬಂದ ಸಮಯದಲ್ಲಿ ಮೆಟ್ಟಿಲುಗಳ ಮೇಲೆ ಹತ್ತಿದರೇ ಜಾರಿ ಬೀಳುವಷ್ಟರ ಮಟ್ಚಿಗೆ ಕುಂಕುಮ, ಅರಿಶಿನವನ್ನು ಭಕ್ತರು ಮೆಟ್ಟಿಲುಗಳಿಗೆ ಹಚ್ಚಿ ತಮ್ಮ ಹರಕೆ ತೀರಿಸಿಕೊಂಡು ಕೈ ತೊಳೆದುಕೊಂಡಿದ್ದಾರೆ. ಈಗ ಅದನ್ನು ತೊಳೆಯುವವರು ಯಾರು ಎಂಬ ಪ್ರಶ್ನೆ ಸಹ ಮೂಡಿದೆ.ಹಾಗೆಯೇ, ಆಷಾಢ ಶುಕ್ರವಾರ ಪ್ರಯುಕ್ತ ಭಕ್ತರಿಗೆ ನೆರವಾಗುವ ಉದ್ದೇಶದಿಂದ ಹಲವರು ಬಾತ್, ಕೇಸರಿ ಬಾತ್ ಸೇರಿದಂತೆ ವಿವಿಧ ಪ್ರಸಾದಗಳನ್ನು ತಂದು ಚಾಮುಂಡಿಬೆಟ್ಟದ ಪಾದದ ಬಳಿ ವಿತರಿಸಿದ್ದಾರೆ. ಪ್ರಸಾದವನ್ನು ಸ್ವೀಕರಿಸಿ ಜನ, ಅರ್ಧ ತಿಂದು ಉಳಿದದನ್ನು ಮರದ ಬುಡಕ್ಕೆ, ರಸ್ತೆಗಳ ಬದಿಗೆ ಎಸೆದಿದ್ದಾರೆ.ಪ್ರಸಾದ ತಿಂದ ತಟ್ಟೆಗಳು ಬೆಟ್ಟದ ಪಾದ, ಮೆಟ್ಟಿಲುಗಳ ಬಳಿ ಅರಣ್ಯ ಪ್ರದೇಶದಲ್ಲಿ ಬಿದ್ದಿವೆ. ಪ್ರಸಾದ ತಿಂದ ತಟ್ಟೆಗಳು, ನೀರು ಕುಡಿದ ಪ್ಲಾಸ್ಟಿಕ್ ಬಾಟಲಿಗಳು ಎಲ್ಲೆಡೆ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಕೆಲವೆಡೆ ಕಸದ ಬುಟ್ಟಿಗಳನ್ನು ಇರಿಸಲಾಗಿದ್ದು, ಕೆಲವು ಬುಟ್ಟಿಗಳು ತುಂಬಿವೆ, ಇನ್ನುಳಿದವು ಖಾಲಿ ಇದ್ದು, ಅದರ ಸುತ್ತಮುತ್ತ ಕಸದ ರಾಶಿ ಬಿದ್ದಿದೆ. ಜಾಗೃತಿ ಮೂಡಿಲ್ಲಚಾಮುಂಡಿಬೆಟ್ಟಕ್ಕೆ ಮೆಟ್ಟಿಲುಗಳ ಮೂಲಕ ತೆರಳುವ ಭಕ್ತರು ಏನು ಮಾಡಬೇಕು, ಏನು ಮಾಡಬಾರದು ಎಂಬುದರ ಕುರಿತು ಎಷ್ಟೇ ಅರಿವು ಮೂಡಿಸಿದರು ಸಹ ಜನರಲ್ಲಿ ಮಾತ್ರ ಜಾಗೃತಿ ಇನ್ನೂ ಮೂಡಿಲ್ಲ. ಮೆಟ್ಟಿಲುಗಳಿಗೆ ಹಚ್ಚಿರುವ ಅರಿಶಿನ, ಕುಂಕುಮದಲ್ಲಿ ರಾಸಾಯನಿಕಗಳಿದ್ದು, ಮಳೆ ಬಿದ್ದರೂ ಕಲ್ಲುಗಳ ಮೇಲೆ ಅವು ಅಂಟಿಕೊಂಡಿವೆ. ಮೆಟ್ಟಿಲುಗಳ ಪೂರ್ಣ ಸ್ವಚ್ಛಗೊಳ್ಳಲು ಇನ್ನಷ್ಟು ದಿನಗಳು ಕಾಯಬೇಕಿದೆ.ಆಷಾಢ ಮಾಸದ ಪ್ರಯುಕ್ತ ಪ್ರಸಾದ ವಿತರಣೆ ಮೂಲಕ ಚಾಮುಂಡೇಶ್ವರಿ ದೇವಿಗೆ ಭಕ್ತಿ ಭಾವ ಮೆರೆದ ಭಕ್ತರು, ಈಗ ಪಾದದಿಂದ ಬೆಟ್ಟದವರೆಗೆ ಮೆಟ್ಟಿಲುಗಳನ್ನು ಸ್ವಚ್ಛಗೊಳಿಸುವ ಮೂಲಕ ಹರಕೆ ತೀರಿಸಿಬೇಕಿದೆ. ಹಾಗೆಯೇ, ಚಾಮುಂಡಿಬೆಟ್ಟದ ಅರಣ್ಯ ಪ್ರದೇಶದಲ್ಲಿ ಎಸೆಯಾಗಿರುವ ಕಸವನ್ನು ಸಹ ತೆಗೆಯಬೇಕಿದೆ.ಕೆಲವು ಸಂಘಟನೆಗಳು, ಕಾಲೇಜಿನ ವಿದ್ಯಾರ್ಥಿಗಳು ಪ್ರತಿ ವರ್ಷ ಸ್ವಚ್ಛಗೊಳಿಸುವ ಕಾಯಕದಲ್ಲಿ ತೊಡಗಿಸಿಕೊಂಡಿದ್ದಾರೆ. ಅವರೊಂದಿಗೆ ಮತ್ತಷ್ಟು ಜನ ಕೈಜೋಡಿಸುವ ಮೂಲಕ ಚಾಮುಂಡಿಬೆಟ್ಟದ ಪರಿಸರವನ್ನು ಕಸಮಯದಿಂದ ಸ್ವಚ್ಛಮಯ ಮಾಡಬೇಕಿದೆ.