ಬೇಲೂರು : ಈ ಬಾರಿಯ ಕೆಂಪೇಗೌಡ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲು ಸಮಾಜದ ಮುಖಂಡರು ಸಹಕಾರ ನೀಡಬೇಕೆಂದು ಶಾಸಕ ಎಚ್ ಕೆ ಸುರೇಶ್ ಮನವಿ ಮಾಡಿದರು.
ಪಟ್ಟಣದ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 15 ವರ್ಷಗಳಿಂದ ಒಕ್ಕಲಿಗರ ಯುವ ವೇದಿಕೆ ಮುಂದಾಳತ್ವದಲ್ಲಿ ಸಮುದಾಯದ ಎಲ್ಲ ಹಿರಿಯರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ಉತ್ತಮವಾಗಿ ನಡೆದುಕೊಂಡು ಬರುತ್ತಿದೆ.
ಈ ಬಾರಿ ಜಯಂತಿಯನ್ನು ಮನೆಯ ಹಬ್ಬದ ರೀತಿಯಲ್ಲಿ ಪ್ರತಿಯೊಬ್ಬ ಒಕ್ಕಲಿಗ ಕುಲಬಾಂಧವರು ಯಾವುದೇ ರಾಜಕೀಯ ಭಾವನೆ ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಜಯಂತಿಯನ್ನು ಆಚರಿಸಲು ನಿಮ್ಮೆಲ್ಲರ ಸಹಕಾರ ಮುಖ್ಯ. ಸಭೆಯಲ್ಲಿ ಹಿರಿಯರ ಮಾರ್ಗದರ್ಶನದಂತೆ ಏನು ತೀರ್ಮಾನ ಆಗುತ್ತದೆ ಅದಕ್ಕೆ ಸಂಪೂರ್ಣ ಸಹಕಾರ ಇದ್ದು ಒಬ್ಬ ಸೇವಕನಾಗಿ ನನಗೆ ಸೂಚನೆ ನೀಡಿದರೆ ಅದನ್ನು ನಿಭಾಯಿಸಲು ಬದ್ಧ ಎಂದರು.
ಕೆಂಪೇಗೌಡ ಸೇವಾ ಸಮಿತಿ ಅದ್ಯಕ್ಷ ಎಂ ಎ ನಾಗರಾಜ್ ಹಾಗೂ ಜಿಪಂ ಮಾಜಿ ಅಧ್ಯಕ್ಷ ಬಿ ಡಿ ಚಂದ್ರೇಗೌಡ ಮಾತನಾಡಿ, ಇದೇ ೩೦ರ ಸೋಮವಾರ ನಾಡಪ್ರಭು ಕೆಂಪೇಗೌಡ ಜಯಂತಿ ಆಚರಿಸಲು ತೀರ್ಮಾನಿಸಿದ್ದು, ಅದಕ್ಕೆ ತಾಲೂಕಿನ ಎಲ್ಲಾ ಕುಲಭಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಮನವಿ ಮಾಡಿದಲ್ಲದೆ ಅಂದು ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ನಾವೆಲ್ಲರು ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದರು. ಸಮಾಜದ ಮುಖಂಡರಾದ ಗಿರೀಶ್, ಸ್ವಾಮಿ ಗೌಡ, ರಾಜೇಗೌಡ, ನಿಶಾಂತ್, ಸೇರಿದಂತೆ ಇತರರು ಸಲಹೆ ಸೂಚನೆಯನ್ನು ನೀಡಿದರು.
ಇದೇ ವೇಳೆ ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಗಿರೀಶ್, ಕೆಂಪೇಗೌಡ ಸೇವಾ ಸಮಿತಿ ಅಧ್ಯಕ್ಷ ಬಸವರಾಜು, ಮಾಜಿ ಮುಖ್ಯಾಧಿಕಾರಿ ಎಸ್ ಡಿ ಮಂಜುನಾಥ್, ಮಹಿಳಾ ಅದ್ಯಕ್ಷೆ ಭಾರತಿಗೌಡ, ಗೌರವ ಅಧ್ಯಕ್ಷ ಪೃಥ್ವಿ, ಉಪಾಧ್ಯಕ್ಷ ಎಂ ಡಿ ದಿನೇಶ್, ಅಭಿಗೌಡ, ಗಣೇಶ್, ದೀಪು, ಡಾ. ರಘುಚರಣ್, ಕಸಾಪ ಅಧ್ಯಕ್ಷ ಮಾನ ಮಂಜೇಗೌಡ, ಲೋಹಿತ್, ಖಜಾಂಚಿ ನಾರಾಯಣ್, ಪ್ರಧಾನ ಕಾರ್ಯದರ್ಶಿ ಗಣೇಶ್, ಸತೀಶ್ ಇತರರು ಇದ್ದರು.