ಪಿಎಂ ಕಿಸಾನ್ ನಿಧಿ-ರೈತರ ಇ-ಕೆವೈಸಿ ಇನ್ನೂ ಬಾಕಿ

KannadaprabhaNewsNetwork |  
Published : Aug 27, 2026, 01:15 AM IST
26ಗದ್ವದ್ವದ್ದ್ | Kannada Prabha

ಸಾರಾಂಶ

ರಾಮನಗರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಗೆ ಅರ್ಹ 97,965 ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು

ರಾಮನಗರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ ಕಿಸಾನ್) ಯೋಜನೆಗೆ ಅರ್ಹ 97,965 ರೈತರು ಕಡ್ಡಾಯವಾಗಿ ಇ-ಕೆವೈಸಿ ಮಾಡಿಸಬೇಕು. ಇಲ್ಲದಿದ್ದರೆ ಮುಂದಿನ ಕಂತಿನ ಹಣ ಪಡೆಯಲಾಗದು. ಯೋಜನೆಯ ಅಡಿ ಜಿಲ್ಲೆಯಲ್ಲಿ ಸುಮಾರು 1.5 ಲಕ್ಷಕ್ಕೂ ಹೆಚ್ಚು ಅರ್ಹ ಫಲಾನುಭವಿಗಳಿದ್ದು, ಅವರಲ್ಲಿ ಇಲ್ಲಿಯವರೆಗೂ 97,965 ಜನ ಅರ್ಹ ಫಲಾನುಭವಿಗಳು ಇ-ಕೆವೈಸಿ ಮಾಡಿಸಿಲ್ಲ.

ರೈತರಿಗೆ ಆರ್ಥಿಕ ನೆರವು ನೀಡುವ ಕೇಂದ್ರ ಸರ್ಕಾರದ ಪಿಎಂ ಕಿಸಾನ್‌ ಯೋಜನೆ 2019ರಿಂದ ಜಾರಿಗೆ ಬಂದಿದೆ. ಪ್ರತಿ ನಾಲ್ಕು ತಿಂಗಳಿಗೊಮ್ಮೆ ರೈತರ ಖಾತೆಗೆ ತಲಾ 2 ಸಾವಿರ ರು.ನಂತೆ ವರ್ಷಕ್ಕೆ 6 ಸಾವಿರ ರು., ಸಹಾಯಧನ ನೀಡಲಾಗುತ್ತದೆ. ಪಿಎಂ ಕಿಸಾನ್‌ ಯೋಜನೆಯಡಿ ರೈತರ ಬ್ಯಾಂಕ್‌ ಖಾತೆಗೆ ಹಣ ಸಂದಾಯ ಮಾಡಲಾಗುತ್ತದೆ. ಈ ವರ್ಷ ಬಾಕಿ ಇರುವ ಅರ್ಹ ಫಲಾನುಭವಿ ರೈತರು ಕಿಸಾನ್ ಸಮ್ಮಾನ್ ನಿಧಿಯ 24ನೇ ಕಂತಿನ ಹಣ ಪಡೆಯಲು ಇ-ಕೆವೈಸಿ ಮಾಡಿಸುವುದು ಕಡ್ಡಾಯ.

ಇ-ಕೆವೈಸಿ ಏಕೆ ?:

ಆದಾಯ ಕರ ಪಾವತಿಸುವವರು, ಸರ್ಕಾರಿ, ಅರೆ ಸರ್ಕಾರಿ ನೌಕರಿಯಲ್ಲಿರುವ ಸದಸ್ಯರನ್ನು ಹೊಂದಿದ ರೈತ ಕುಟುಂಬದರು ಪಿಎಂ ಕಿಸಾನ್‌ ಯೋಜನೆ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಯೋಜನೆಯ ಪ್ರಾರಂಭದಲ್ಲಿ ಕೆಲವರು ವ್ಯಾಪ್ತಿಗೆ ಬರದಿದ್ದರೂ ಹಣ ಪಡೆದು ನಂತರ ಹಿಂದಿರುಗಿಸಿದ್ದರು. ಪ್ರಸ್ತುತ ಯೋಜನೆ ಪ್ರಾರಂಭವಾಗಿ 7 ವರ್ಷ ಕಳೆದಿರುವುದರಿಂದ ಮೃತಪಟ್ಟವರು, ಜಮೀನು ಮಾರಾಟ ಮಾಡಿದವರು ಮೊದಲಾಗಿ ನಿಖರವಾದ ಸಮೀಕ್ಷೆಗೆ ಸರ್ಕಾರ ನಿರ್ಧರಿಸಿದೆ.

ನಕಲಿ ಫಲಾನುಭವಿಗಳ ತಡೆಗೆ ಪಿಎಂ ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಪಡೆಯಲು ಕೇಂದ್ರ ಸರ್ಕಾರ ರೈತರಿಗೆ ಬಯೋಮೆಟ್ರಿಕ್, ಫೇಸ್ ಆಧಾರಿತ ಇ-ಕೆವೈಸಿ ಕಡ್ಡಾಯಗೊಳಿಸಿದೆ.

ಇ-ಕೆವೈಸಿ ಮಾಡಿಸುವುದು ಎಲ್ಲಿ?:

ರೈತರು ಇ-ಕೆವೈಸಿಯನ್ನು ಸಾಮಾನ್ಯ ಸೇವಾ ಕೇಂದ್ರಗಳು ಮತ್ತು ರಾಜ್ಯ ಸೇವಾ ಕೇಂದ್ರಗಳಾದ ಗ್ರಾಮ ಓನ್, ಕರ್ನಾಟಕ ಓನ್ ಮತ್ತು ರೈತ ಸಂಪರ್ಕ ಕೇಂದ್ರಗಳಲ್ಲಿ ಮಾಡಿಸಬಹುದು. ಚಹರೆ ದೃಢೀಕರಣ ಇ-ಕೆವೈಸಿ ಮಾಡಿಕೊಳ್ಳಲು ಪಿಎಂ ಕಿನಾನ್ ಮೊಬೈಲ್ ಅಪ್ಲಿಕೇಶನ್ ಆ್ಯಪ್‌ನಲ್ಲಿ ಲಭ್ಯವಿದೆ. ಬೆರಳಚ್ಚು ಸಾಧ್ಯವಿಲ್ಲದವರಿಗೆ ಚಹರೆ ದೃಢೀಕರಣ ಮಾಡಿಸುವುದರ ಮೂಲಕ ಇ-ಕೆವೈಸಿ ಮಾಡಬಹುದಾಗಿದೆ.

ಈ ಯೋಜನೆಯಡಿ ರೈತ ಕುಟುಂಬ ಎಂದರೆ ಪತಿ, ಪತ್ನಿ ಮತ್ತು ಅಪ್ರಾಪ್ತ ಮಕ್ಕಳನ್ನು ಒಳಗೊಂಡಿದೆ. ಒಂದು ಕುಟುಂಬದಿಂದ ಅರ್ಹ ಕೃಷಿ ಭೂಮಿ ಹೊಂದಿರುವ ಪತಿ ಅಥವಾ ಪತ್ನಿ ಯೋಜನೆಯ ಫಲಾನುಭವಿಯಾಗಲು ಅವಕಾಶವಿದೆ.

ಕ್ಷೇತ್ರ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಿ:

ಪಿಡಿಎಸ್ ರೇಷನ್ ಕಾರ್ಡ್ ಡಾಟಾಬೇಸ್‌ನ ಫಲಾನುಭವಿಗಳ ಮಾಹಿತಿಯನ್ನು ಪಿಎಂಕೆಐಎಸ್‌ಎಎನ್ ಯೋಜನೆಯ ಫಲಾನುಭವಿಗಳ ಮಾಹಿತಿಯೊಂದಿಗೆ ಪರಿಶೀಲಿಸಿ ಒಂದೇ ರೇಷನ್ ಕಾರ್ಡ್‌ನಲ್ಲಿರುವ ಫಲಾನುಭವಿಗಳ ಪಟ್ಟಿಯನ್ನು ನೀಡಲಾಗಿದ್ದು ಇದನ್ನು ಪರಿಶೀಲಿಸಿ ಅಂಗೀಕರಿಸಿದ ನಂತರವೇ ಅರ್ಹ ಫಲಾನುಭವಿಗಳು ಯೋಜನೆಯಡಿ ಆರ್ಥಿಕ ಸೌಲಭ್ಯಕ್ಕೆ ಅರ್ಹರಾಗುತ್ತಾರೆ. ಇಲ್ಲವಾದಲ್ಲಿ ರೈತ ಕುಟುಂಬದ ಎಲ್ಲಾ ಸದಸ್ಯರು ಮುಂದಿನ ಕಂತುಗಳಿಗೆ ಅನರ್ಹರಾಗುವ ಸಾಧ್ಯತೆಗಳಿರುತ್ತದೆ. ಆದ್ದರಿಂದ, ಒಂದೇ ಕುಟುಂಬದ ಇಬ್ಬರು ಸದಸ್ಯರು ಯೋಜನೆಯಡಿ ಪ್ರಯೋಜನಗಳನ್ನು ಪಡೆಯುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಲು ಫಲಾನುಭವಿಗಳು ಕ್ಷೇತ್ರ ಮಟ್ಟದಲ್ಲಿ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಕೃಷಿ ಇಲಾಖೆ ಅಧಿಕಾರಿ ಪ್ರತಿಕ್ರಿಯೆ ನೀಡಿದ್ದಾರೆ.

ಬಾಕ್ಸ್ ...............

ಇ-ಕೆವೈಸಿ ಮಾಡಿಸದ ರೈತರ ವಿವರ

ತಾಲೂಕುಇ ಕೆವೈಸಿ ಮಾಡಿಸದ ರೈತರು

ರಾಮನಗರ19,110

ಚನ್ನಪಟ್ಟಣ21,389

ಕನಕಪುರ21,932

ಹಾರೋಹಳ್ಳಿ10,161

ಮಾಗಡಿ25,025

ಒಟ್ಟು7,965

ಬಾಕ್ಸ್ .......................ಮುಂದಿನ ಕಂತಿಗೆ ಬಯೋಮೆಟ್ರಿಕ್ ಇ-ಕೆವೈಸಿ ಕಡ್ಡಾತ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ರೈತರಿಗೆ ಕೇಂದ್ರ ಸರ್ಕಾರದಿಂದ ಪ್ರತಿ ನಾಲ್ಕು ತಿಂಗಳಿಗೊಮ್ಮೆ (ಏಪ್ರಿಲ್ - ಜುಲೈ, ಆಗಸ್ಟ್ - ನವೆಂಬರ್ , ಡಿಸೆಂಬರ್ - ಮಾರ್ಚ್ ) ಹಣ ಬಿಡುಗಡೆ ಮಾಡುತ್ತದೆ. ತಲಾ 2,000 ರು.ರಂತೆ ವರ್ಷಕ್ಕೆ ಮೂರು ಕಂತುಗಳಲ್ಲಿ ಒಟ್ಟು 6,000 ರು.ಗಳ ಸಹಾಯಧನವನ್ನು ರೈತರ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತದೆ. 2026ರ ಜೂನ್ 20ರಂದು ಸರ್ಕಾರ 23ನೇ ಕಂತಿನ ಹಣವನ್ನು ಬಿಡುಗಡೆ ಮಾಡಿದೆ. 24ನೇ ಕಂತಿನ ಹಣ ಸೆಪ್ಟೆಂಬರ್ ತಿಂಗಳಿನಲ್ಲಿ ಬಿಡುಗಡೆ ಆಗಲಿದೆ.

ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಮುಂದಿನ ಕಂತನ್ನು ರೈತರ ಆಧಾರ್ ಸಂಯೋಜಿತ ಬ್ಯಾಂಕ್ ಖಾತೆಗಳಿಗೆ ಪಡೆಯಲು ಅರ್ಹ ಫಲಾನುಭವಿಗಳಿಗೆ ವಾರ್ಷಿಕವಾಗಿ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸುವುದು ಅನಿವಾರ್ಯ ಮತ್ತು ಕಡ್ಡಾಯವಾಗಿದೆ. ರೈತರು ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.

ಕೋಟ್ ................

ಪಿಎಂ ಕಿಸಾನ್‌ ಯೋಜನೆಯ ಮುಂದಿನ ಕಂತಿನ ಲಾಭ ಪಡೆಯಲು ಬಾಕಿ ಉಳಿದಿರುವ 97,965 ರೈತರು ಇ-ಕೆವೈಸಿ ಮಾಡುವುದು ಕಡ್ಡಾಯವಾಗಿದೆ. ರೈತರು ಆದಷ್ಟು ಶೀಘ್ರದಲ್ಲಿ ಇ-ಕೆವೈಸಿ ಮಾಡಿಸಿ ಯೋಜನೆಯ ಪ್ರಯೋಜನ ಪಡೆದುಕೊಳ್ಳಬೇಕು.

-ಅಂಬಿಕಾ, ಜಂಟಿ ಕೃಷಿ ನಿರ್ದೇಶಕರು, ಕೃಷಿ ಇಲಾಖೆ, ಬೆಂಗಳೂರು ದಕ್ಷಿಣ ಜಿಲ್ಲೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿರಾದಲ್ಲಿ ಸಂಭ್ರಮದ ಈದ್ ಮಿಲಾದ್ ಮೆರವಣಿಗೆ
ಸಂಕಷ್ಟದಲ್ಲಿದ್ದ ಕುಟುಂಬಕ್ಕೆ ಸಹಾಯ ಹಸ್ತ