ಪ್ರಧಾನಿ ಮೋದಿಯಿಂದ ದೇಶಕ್ಕೆ ಗಂಡಾಂತರ

KannadaprabhaNewsNetwork |  
Published : Mar 07, 2024, 01:46 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಮೋದಿಯಿಂದಾಗಿ ದೇಶ ಗಂಭೀರವಾದ ಗಂಡಾಂತರಗಳನ್ನು ಎದುರಿಸುವಂತಾಗಿದೆ. ರೈತರು, ಕಾರ್ಮಿಕರು, ಶ್ರಮಿಕ ವರ್ಗದವರು ಪರಿತಪಿಸುತ್ತಿದ್ದಾರೆ.

ಚಿತ್ರದುರ್ಗ: ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ದೇಶದಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಸಾಮಾಜಿಕ ಪರಿವರ್ತನಾ ಸಂಸ್ಥೆ ಅಧ್ಯಕ್ಷ ಎಸ್.ಆರ್.ಹಿರೇಮಠ ಹೇಳಿದರು.

ರೈತ ಸಂಘ ಸೇರಿದಂತೆ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬುಧವಾರ ಚಿತ್ರದುರ್ಗದಲ್ಲಿ ನಡೆದ ರಾಜ್ಯಮಟ್ಟದ ರೈತ ಕಾರ್ಮಿಕ ಪಂಚಾಯಿತಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮೋದಿಯಿಂದಾಗಿ ದೇಶ ಗಂಭೀರವಾದ ಗಂಡಾಂತರಗಳನ್ನು ಎದುರಿಸುವಂತಾಗಿದೆ. ರೈತರು, ಕಾರ್ಮಿಕರು, ಶ್ರಮಿಕ ವರ್ಗದವರು ಪರಿತಪಿಸುತ್ತಿದ್ದಾರೆ. ದುಡಿಯುವ ಕೈಗಳಿಗೆ ಕನಿಷ್ಠ ವೇತನ ಸಿಗುತ್ತಿಲ್ಲ. ಮಾ.14 ದೆಹಲಿಯ ರಾಮಲೀಲಾ ಮೈದಾನದಲ್ಲಿ ನಡೆಯುವ ಮಹತ್ವದ ಸಭೆಯಲ್ಲಿ ಅನೇಕ ತೀರ್ಮಾನಗಳನ್ನು ಕೈಗೊಳ್ಳಲಾಗುವುದು. ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಿ ಎಂದು ತಿಳಿಸಿದರು.

ನರೇಂದ್ರ ಮೋದಿ ತಮ್ಮ ಪ್ರಭಾವ ಬಳಸಿ ಎಲೆಕ್ಟ್ರಾನಿಕ್ ವೋಟಿಂಗ್ ಮೆಷಿನ್ ತಂದಿರುವುದು ದೊಡ್ಡ ಹಗರಣ. ರೈತರು, ಕಾರ್ಮಿಕರು, ಜನಸಾಮಾನ್ಯರು ಹಾಗೂ ದುಡಿಯುವ ವರ್ಗದ ಭವಿಷ್ಯ, ಅಸ್ತಿತ್ವ, ಸಂವಿಧಾನದ ಮೇಲೆ ನಿಂತಿದೆ. ಹಾಗಾಗಿ ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಬೇಕಿದೆ ಎಂದು ಹೇಳಿದರು.

ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕಾರ್ಪೊರೇಟ್, ಬಂಡವಾಳಶಾಹಿಗಳ ಪರವಾಗಿರುವ ಕೇಂದ್ರ ಬಿಜೆಪಿ ಸರ್ಕಾರವನ್ನು ಈ ಬಾರಿಯ ಪಾರ್ಲಿಮೆಂಟ್ ಚುನಾವಣೆಯಲ್ಲಿ ಕಿತ್ತೊಗೆಯಬೇಕು. ದೆಹಲಿಯಲ್ಲಿ 13 ತಿಂಗಳುಗಳ ಕಾಲ ರೈತರು ನಡೆಸಿದ ಚಳುವಳಿಯಲ್ಲಿ ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ನೀಡುವುದಾಗಿ ಭರವಸೆ ಕೊಟ್ಟ ಪ್ರಧಾನಿ ಮೋದಿ ಇನ್ನು ಬೆಲೆ ನಿಗದಿಪಡಿಸಿಲ್ಲ. ನರೇಗಾ ಯೋಜನೆಯಡಿ ನೂರು ದಿನಗಳ ಕಾಲ ಉದ್ಯೋಗ ಕೊಡಬೇಕು. ಮನುಷ್ಯತ್ವವಿಲ್ಲದ ಕೇಂದ್ರ ಸರ್ಕಾರದಿಂದ ಯುವಕರಿಗೆ, ರೈತರಿಗೆ, ಕಾರ್ಮಿಕರಿಗೆ, ಮೋಸವಾಗುತ್ತಿದೆ. ಜನಸಾಮಾನ್ಯರ ಬದುಕನ್ನೆ ಕಿತ್ತುಕೊಳ್ಳುತ್ತಿರುವ ಕೇಂದ್ರ ಸರ್ಕಾರದಿಂದ ಭಾರತ ಉಳಿಯಲ್ಲ ಎಂದರು.

ಸರ್ವೋದಯ ಕರ್ನಾಟಕ ಪಕ್ಷದ ಜಿಲ್ಲಾಧ್ಯಕ್ಷ ಜೆ.ಯಾದವರೆಡ್ಡಿ ಮಾತನಾಡಿ, ಭದ್ರಾ ಮೇಲ್ದಂಡೆಗೆ 1998ರಲ್ಲಿ ಆಡಳಿತಾತ್ಮಕ ಮಂಜೂರಾತಿ ಸಿಕ್ಕರೂ ಕಾಮಗಾರಿ ಆಮೆಗತಿಯಲ್ಲಿ ಸಾಗುತ್ತಿದೆ. 6000 ಕೋಟಿ ರು.ಗಳ ಯೋಜನೆ ಈಗ 22 ಸಾವಿರ ಕೋಟಿ ರು.ಗೆ ಮುಟ್ಟಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತಿವೆ. ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳು ಚಿತ್ರದುರ್ಗ ಜಿಲ್ಲೆಗೆ ಪರಮ ಅನ್ಯಾಯವೆಸಗಿವೆ. ಅನೇಕ ಹೋರಾಟ, ಚಳುವಳಿ, ಧರಣಿ, ಪ್ರತಿಭಟನೆಗಳಾಗಿವೆ. ರಾಜಕಾರಣಿಗಳಿಗೆ ಇಚ್ಛಾಶಕ್ತಿಯಿಲ್ಲದ ಕಾರಣ ಭದ್ರಾ ಮೇಲ್ದಂಡೆ ಪೂರ್ಣ ಪ್ರಮಾಣದಲ್ಲಿ ಜಾರಿಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜಿಲ್ಲೆಯ ಎಲ್ಲಾ ಶಾಸಕರುಗಳ ಮನೆಗಳಿಗೆ ಮುತ್ತಿಗೆ ಹಾಕುವುದಾಗಿ ಎಚ್ಚರಿಸಿದರು.

ಕಾರ್ಮಿಕ ಮುಖಂಡ ಅಪ್ಪಣ್ಣ ಮಾತನಾಡಿ ಕೇಂದ್ರ ಸರ್ಕಾರದ ಜನ ವಿರೋಧಿ ನೀತಿಯಿಂದ ರೈತರು, ಕಾರ್ಮಿಕರು ದಲಿತರು ಪರಿತಪಿಸುತ್ತಿದ್ದಾರೆ. ಕಾರ್ಮಿಕರ ಪರವಾಗಿರುವ ಕಾನೂನುಗಳು ತಿದ್ದುಪಡಿಯಾಗುತ್ತಿವೆ. ಹೊಸ ಹೊಸ ಹೆಸರುಗಳು ಹುಟ್ಟಿಕೊಳ್ಳುತ್ತಿರುವುದರ ಹಿಂದೆ ದೊಡ್ಡ ಗೂಡಾಲೋಚನೆಯಿದೆ. ಸಾರ್ವಜನಿಕ ಉದ್ದಿಮೆಗಳು ಮಾರಾಟವಾಗುತ್ತಿವೆ. ವಿದ್ಯುತ್ ಖಾಸಗಿಕರಣಗೊಳಿಸಿ ರೈತರು ಕಾರ್ಮಿಕರನ್ನು ಕಟ್ಟಿ ಹಾಕಲಾಗುತ್ತಿದೆ. ಇದರ ವಿರುದ್ಧ ಎಚ್ಚೆತ್ತುಕೊಳ್ಳಬೇಕೆಂದರು.

ದೆಹಲಿಯಲ್ಲಿ ಚಳುವಳಿ ನಡೆಸುತ್ತಿರುವ ರೈತರನ್ನು ಕೇಂದ್ರ ಸರ್ಕಾರ ತೀವ್ರವಾದಿಗಳಂತೆ ಕಾಣುತ್ತಿರುವುದು ದುರಂತ. ನ್ಯಾಯಾಂಗ ಕೂಡ ರೈತರ ಪರವಾಗಿಲ್ಲ. ಕಾರ್ಮಿಕರು, ರೈತರ ಆಲೋಚನೆಗಳನ್ನು ದಿಕ್ಕುತಪ್ಪಿಸುತ್ತಿದೆ. ರೈತ ಉಳಿದರೆ ಕಾರ್ಮಿಕ ಉಳಿಯಲು ಸಾಧ್ಯ ಎಂದರು.

ಯಶವಂತ್ ಮಾತನಾಡಿ, ರೈತರನ್ನು ಸರ್ವನಾಶಗೊಳಿಸುವ ಸುಗ್ರಿವಾಜ್ಞೆ ತರಲು ಕೇಂದ್ರ ಮುಂದಾಗಿದೆ. ಪಂಜಾಬ್ ಹರಿಯಾಣ ರೈತರು ಹೋರಾಟಕ್ಕೆ ಇಳಿದಿದ್ದಾರೆ. ವಚನದ್ರೋಹಿ ಪ್ರಧಾನಿ ನರೇಂದ್ರ ಮೋದಿ ರೈತರು ಕಾರ್ಮಿಕರ ಯಾವ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ. ಋಣಮುಕ್ತ ತನ್ನಿ ಎಂದು ರೈತರು ಕೇಳುತ್ತಿದ್ದಾರೆ. ಮತ್ತಿನ್ನೇನು ಅಲ್ಲ. 554 ಸಂಘಟನೆಗಳು ರೈತರ ಚಳುವಳಿಗೆ ಬೆಂಬಲ ಸೂಚಿಸಿವೆ. ಒಂದು ಸಾವಿರ ರೈತರು ಕರ್ನಾಟಕದಿಂದ ಹೋಗುತ್ತೇವೆಂದು ತಿಳಿಸಿದರು.

ಸತ್ಯಪ್ಪ ಮಲ್ಲಾಪುರ, ಮಲಿಯಪ್ಪ, ಸಿ.ಕೆ.ಗೌಸ್‍ಪೀರ್, ಕಾರ್ಮಿಕ ಮುಖಂಡ ಜಿ.ಸಿ.ಸುರೇಶ್‍ ಬಾಬು, ವೈ.ಕುಮಾರ್, ತಿಪ್ಪೇಸ್ವಾಮಿ, ರೈತ ನಾಯಕ ಎಚ್.ಆರ್.ಬಸವರಾಜಪ್ಪ, ಮಂಜುಳ ಅಕ್ಕಿ, ಕುಮಾರ್ ಸಮತಳ, ನೂರ್ ಶ್ರೀಧರ್, ಚಿಕ್ಕಪ್ಪನಹಳ್ಳಿ ರುದ್ರಸ್ವಾಮಿ, ಹಂಪಯ್ಯನಮಾಳಿಗೆ ಧನಂಜಯ ವೇದಿಕೆಯಲ್ಲಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕ್ಲಾಸಲ್ಲೇ ವಿದ್ಯಾರ್ಥಿನಿಗೆ ಲವ್‌ ಯು ಎಂದ ಶಿಕ್ಷಕಗೆ ಗೂಸಾ
ಎಸ್ಸೆಸ್ಸೆಲ್ಸಿ ತೃತೀಯ ಭಾಷಾ ಪರೀಕ್ಷೆ ಮಾ.31ಕ್ಕೆ ಮುಂದೂಡಿಕೆ