ಪಿಎಂ ಸೂರ್ಯ ಘರ್ ಯೋಜನೆ ಜಿಲ್ಲೆಯಲ್ಲಿ ಪ್ರಗತಿಯಾಗಬೇಕು: ಸಂಸದ ಕೋಟ ಸೂಚನೆ

KannadaprabhaNewsNetwork | Published : Feb 6, 2025 11:45 PM

ಸಾರಾಂಶ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಉಡುಪಿ ಜಿಲ್ಲೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಬೇಕಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಣಿಪಾಲ

ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆ ಉಡುಪಿ ಜಿಲ್ಲೆಯಲ್ಲಿ ಗಮನಾರ್ಹ ಪ್ರಗತಿ ಸಾಧಿಸಬೇಕಿದೆ ಎಂದು ಉಡುಪಿ-ಚಿಕ್ಕಮಗಳೂರು ಲೋಕಸಭಾ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.

ಸಂಸದರ ಕಚೇರಿಯಲ್ಲಿ ನಡೆದ ಮೆಸ್ಕಾಂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.ಜಿಲ್ಲೆಯಲ್ಲಿ ೫,೩೭೮ ಕುಟುಂಬಗಳು ತಮ್ಮ ಮನೆಯ ಮೇಲ್ಛಾವಣಿಯ ಮೇಲೆ ಸೋಲಾರ್ ಅಳವಡಿಸಲು ನೊಂದಾಯಿಸಿಕೊಂಡಿದ್ದಾರೆ. ಅವರಲ್ಲಿ ಈಗಾಗಲೇ ೪೩೯ ಫಲಾನುಭವಿಗಳ ಮನೆಗಳ ಮೇಲೆ ಸೌರ ಫಲಕಗಳನ್ನು ಅಳವಡಿಕೆಯಾಗಿದೆ ಮತ್ತು ಮತ್ತು ೩೮೬ ಕುಟುಂಬಗಳಿಗೆ ಸಾಲ ಮತ್ತು ಸಬ್ಸಿಡಿ ಖಾತೆಗೆ ಜಮೆಯಾಗಿದೆ. ೯೩೬ ಮಂದಿ ಸೋಲಾರ್ ಫಲಕ ಅಡವಡಿಸಲು ಏಜೆನ್ಸಿಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಮೆಸ್ಕಾಂ ಅಧಿಕಾರಿ ದಿನೇಶ್ ಉಪಾಧ್ಯ ಸಭೆಗೆ ಮಾಹಿತಿ ಒದಗಿಸಿದರು.ಇತ್ತೀಚೆಗೆ ನಡೆದ ಸೂರ್ಯ ಘರ್ ಯೋಜನೆಯ ಕಾರ್ಯಾಗಾರದ ನಂತರ ಅರ್ಜಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ಒದಗಿಸಿದರು.

ಸೂರ್ಯ ಘರ್ ಯೋಜನೆಯಂತೆ, ಕೇಂದ್ರ ಸರ್ಕಾರ ಒಂದು ಕೋಟಿ ಕುಟುಂಬಗಳ ಮನೆಗಳಲ್ಲಿ ಸೋಲಾರ್ ಅಳವಡಿಕೆಗೆ ರಾಷ್ಟ್ರೀಕೃತ ಬ್ಯಾಂಕ್‌ಗಳ ಮೂಲಕ ೩೦೦ ಯೂನಿಟ್ ವಿದ್ಯುತ್ ಉತ್ಪಾದನೆಯ ಗುರಿಯೊಂದಿಗೆ ೨.೭೮ ಲಕ್ಷ ಒದಗಿಸುತ್ತಿದ್ದು, ಈ ಪೈಕಿ ೭೮,೦೦೦ ರುಪಾಯಿ ಸಬ್ಸಿಡಿ ನೀಡುತ್ತಿದೆ. ವಿದ್ಯುತ್ ಉತ್ಪಾದನೆ ಗೃಹಬಳಕೆಯಾಗಿ ಉಳಿದರೆ ಗೈಡರ್ ಮೂಲಕ ವಿದ್ಯುತ್ ಇಲಾಖೆ ವಿದ್ಯುತ್‌ ಖರೀದಿಸಲಿದೆ. ಉಡುಪಿ ಜಿಲ್ಲೆಯಲ್ಲಿ ಮಾನ್ಯತೆ ಪಡೆದ ೩೦ ವೆಂಡರ್‌ಗಳು ಸೂರ್ಯ ಘರ್ ಯೋಜನೆಗೆ ನೊಂದಾಯಿಸಿ ಕೊಂಡಿದ್ದಾರೆ ಎಂದರು.

ಈ ಯೋಜನೆಯ ಅನುಷ್ಠಾನಕ್ಕೆ ವಿದ್ಯುತ್ ಬಳಕೆದಾರರಿಗೆ ಮಾಹಿತಿ ಒದಗಿಸಲು ಕಾರ್ಕಳದ ನಿಟ್ಟೆ ಗ್ರಾಮ ಪಂಚಾಯಿತಿ ಸದಸ್ಯ ನಿತಿನ್ ಸಾಲಿಯಾನ್, ಕುಂದಾಪುರ ಪುರಸಭೆ ಸದಸ್ಯ ಶೇಖರ್, ಕಾಪು ಪುರಸಭೆ ಸದಸ್ಯ ಅನಿಲ್, ಶಂಕರನಾರಾಯಣ ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್ ಶೆಟ್ಟಿ ಅವರನ್ನು ಕೇಂದ್ರ ಸರ್ಕಾರ ನೇಮಕಾತಿ ಮಾಡಿದ್ದು, ಸೂರ್ಯಘರ್ ಯೋಜನೆಗೆ ನಾಮ ನಿರ್ದೇಶಿತ ಸದಸ್ಯರನ್ನು ಸಂಪರ್ಕಿಸಬಹುದೆಂದು ಸಂಸದರು ಸಭೆಗೆ ತಿಳಿಸಿದರು.ಸಭೆಯಲ್ಲಿ ಮೆಸ್ಕಾಂ ಅಧಿಕಾರಿಗಳೊಂದಿಗೆ ನಾಮನಿರ್ದೇಶಿತ ಸದಸ್ಯರ ಸಹಿತ ಲೀಡ್ ಬ್ಯಾಂಕ್‌ನ ಅಧಿಕಾರಿಗಳು ಹಾಜರಿದ್ದರು.

Share this article