ನೋವು ಮರೆಸಿ ಹೃದಯ ಅರಳಿಸುವುದೇ ಕವಿತೆ

KannadaprabhaNewsNetwork |  
Published : Nov 18, 2025, 03:30 AM IST
ಕವಿಗೋಷ್ಠಿ | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಮುನವಳ್ಳಿ ನೋವುಗಳನ್ನು ಮರೆಸಿ ಹೃದಯವನ್ನು ಅರಳಿಸುವ ಚಿಕಿತ್ಸಕ ಗುಣ ಕವಿತೆಗಿದೆ. ಪ್ರತಿ ಬರಹಗಾರನ ಬರವಣಿಗೆ ಕಾವ್ಯದಿಂದಲೇ ಪ್ರಾರಂಭವಾಗುತ್ತದೆ. ಅನುಭವಗಳ ಅನಾವರಣವೇ ಕಾವ್ಯ ಪ್ರಸ್ತುತ ವಸ್ತು ಸ್ಥಿತಿಗೆ ಕಾವ್ಯ ಪ್ರತಿಸ್ಪಂದಿಸುವುದಲ್ಲದೆ, ಜನರ ನೋವಿಗೆ ಮದ್ದಾಗಬೇಕು ಎಂದು ಕವಿ ಡಾ.ಮಲ್ಲಿಕಾರ್ಜುನ ಛಬ್ಬಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುನವಳ್ಳಿ

ನೋವುಗಳನ್ನು ಮರೆಸಿ ಹೃದಯವನ್ನು ಅರಳಿಸುವ ಚಿಕಿತ್ಸಕ ಗುಣ ಕವಿತೆಗಿದೆ. ಪ್ರತಿ ಬರಹಗಾರನ ಬರವಣಿಗೆ ಕಾವ್ಯದಿಂದಲೇ ಪ್ರಾರಂಭವಾಗುತ್ತದೆ. ಅನುಭವಗಳ ಅನಾವರಣವೇ ಕಾವ್ಯ ಪ್ರಸ್ತುತ ವಸ್ತು ಸ್ಥಿತಿಗೆ ಕಾವ್ಯ ಪ್ರತಿಸ್ಪಂದಿಸುವುದಲ್ಲದೆ, ಜನರ ನೋವಿಗೆ ಮದ್ದಾಗಬೇಕು ಎಂದು ಕವಿ ಡಾ.ಮಲ್ಲಿಕಾರ್ಜುನ ಛಬ್ಬಿ ಹೇಳಿದರು.

ಪಟ್ಟಣದ ಡಿ.ದೇವರಾಜ ಅರಸು ಮೆಟ್ರಿಕ್ ಪೂರ್ವ ಬಾಲಕರ ನಿಲಯದ ಆವರಣದಲ್ಲಿ ರಾಜ್ಯಮಟ್ಟದ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡಿ, ಕವಿಯಾದವನು ಯಾವುದೇ ಪ್ರಶಸ್ತಿಗಳಿಗೆ ಸಿಲುಕದೆ. ಸೃಜನಶೀಲ ಬರವಣಿಗೆಗೆ ಗಮನ ಕೊಡಬೇಕು. ಇತ್ತೀಚೆಗೆ ಕೃತಿಚೌರ್ಯದಂತ ಕೃತ್ಯಗಳು ಹೆಚ್ಚಾಗುತ್ತಿವೆ. ಕದ್ದು ಬರೆದು ಹೆಸರು ಗಳಿಸುವ ಹಪಹಪಿ ಬೇಡ ಎಂದರು.

ತಾಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ರತ್ನಾ ಕದಂ ಮಾತನಾಡಿ, ವಸತಿ ನಿಲಯದ ವಿದ್ಯಾರ್ಥಿಗಳಿಗೆ ಕವಿಗಳನ್ನು ಹತ್ತಿರದಿಂದ ಕಾಣುವ ಅವರ ಕವಿತೆಗಳನ್ನು ಕೇಳುವ ಅವಕಾಶ ಸಿಕ್ಕಿದೆ ಎಂದು ಹೇಳಿದರು.

ಹಿರಿಯ ಕವಿ ಮಹಾಂತಪ್ಪ ನಂದೂರ ಮಾತನಾಡಿ, ಬುದ್ದಿ ಪ್ರಧಾನ ಬದುಕಿಗಿಂತ ಭಾವ ಪ್ರಧಾನ ಬದುಕನ್ನು ನಮ್ಮದಾಗಿಸಿಕೊಂಡು ಕಾವ್ಯದ ಎತ್ತರಕ್ಕೆ ಹೋಗುವ ಪ್ರಯತ್ನವನ್ನು ಕವಿಗಳು ಮಾಡಬೇಕಿದೆ. ಕವಿತೆ ಬರೆಯುವುದು ಮುಖ್ಯವಲ್ಲ, ಬರೆದಂತೆ ಬದುಕುವುದು ಮುಖ್ಯ. ಕಾವ್ಯವೆಂಬುದು ಹೃದಯದ ಭಾಷೆಯಾಗಿದ್ದು, ಆತ್ಮ ಶೋಧನೆ ಅನುಭವದ ಮೂಲಕ ಜನರ ಎದೆಗಳಿಗೆ ತಲುಪಿಸುವ ಕಾರ್ಯವನ್ನು ಕವಿಗಳು ಮಾಡಲಿ ಎಂದು ಆಶಯ ವ್ಯಕ್ತಪಡಿಸಿದರು.ಕಾವ್ಯಸ್ಪರ್ಧೆಯಲ್ಲಿ ದಾವಣಗೆರೆಯ ಮನು ಗುರುಸ್ವಾಮಿ ಪ್ರಥಮ, ರಾಣೆಬೆನ್ನೂರಿನ ಎಸ್.ಡಿ.ದೊಡ್ಡಚಿಕ್ಕಣ್ಣನವರ ದ್ವಿತೀಯ, ಉತ್ತರ ಕನ್ನಡ ಜಿಲ್ಲೆಯ ಪೂನಂ ಧಾರವಾಡಕರ ತೃತೀಯ ಸ್ಥಾನ ಪಡೆದರು. ನಗದು ಬಹುಮಾನ ನೀಡಿ ಗೌರವಿಸಲಾಯಿತು. ರಾಜ್ಯದ ನಾನಾ ಭಾಗಗಳಿಂದ ಆಗಮಿಸಿದ 28 ಕವಿಗಳು ಕಾವ್ಯ ವಾಚಿಸಿದರು. ಪ್ರತಿಷ್ಠಾನದ ಕಾರ್ಯ ಚಟುವಟಿಕೆ ಬಗ್ಗೆ ಪ್ರಾಸ್ತಾವಿಕವಾಗಿ ಅಧ್ಯಕ್ಷ ನಾಗೇಶ ನಾಯಕ ಮಾತನಾಡಿದರು. ಸಾನ್ವಿ ತುರಮಂದಿ ಭರತನಾಟ್ಯ ಪ್ರದರ್ಶಿಸಿದರು, ಕಾರ್ಯಪಾಲಕ ಅಭಿಯಂತರ ವಿಠ್ಠಲ ತಡಸಲೂರ, ಎಸ್.ಜಿ.ತುರಮಂದಿ, ಎ.ಎಸ್.ಮಕಾನದಾರ, ಪತ್ರಕರ್ತ ಟಿ.ಎನ್.ಮುರಂಕರ, ಹಾಶೀಮ್ ತಹಶೀಲದಾರ, ವಿಠ್ಠಲ ಕಂಬಾರ, ಮಲ್ಲಿಕಾರ್ಜುನ ಬೀಳಗಿ, ಬಿ.ಪಿ.ಪಟ್ಟಣಶೆಟ್ಟಿ, ಎಸ್.ಬಿ.ಮದ್ದಾನಿ ಇತರರು ಉಪಸ್ಥಿತರಿದ್ದರು. ಎಸ್.ಬಿ.ಗರಗದ ಸ್ವಾಗತಿಸಿದರು, ಬಿ.ವಿ.ಪತ್ತಾರ ನಿರೂಪಿಸಿದರು, ರಮೇಶ ತಳವಾರ ವಂದಿಸಿದರು.

PREV

Recommended Stories

ಕಸ ಬಳಿಯುವ ಮಷಿನ್‌ಗೆ 617 ಕೋಟಿಬಾಡಿಗೆ: ಸಾರ್ವಜನಿಕರ ತೀವ್ರ ಆಕ್ಷೇಪ
ಕೊಪ್ಪಳ ಎಪಿಎಂಸಿಯಲ್ಲಿ ಕಮಿಷನ್ ದಂಧೆ ಅವ್ಯಾಹತ