ಕನ್ನಡಪ್ರಭ ವಾರ್ತೆ ಸುತ್ತೂರುಸುತ್ತೂರಿನ ಐಸಿಎಆರ್, ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರ, ಮೈಸೂರಿನ ಆತ್ಮ ಯೋಜನೆ ಕೃಷಿ ಇಲಾಖೆ ಹಾಗೂ ಮಂಡ್ಯದ ವಿ.ಸಿ. ಫಾರಂ ಅವರ ಸಹಯೋಗದೊಂದಿಗೆ , ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಐದು ದಿನಗಳ ಕೃಷಿ ತಂತ್ರಜ್ಞ ಹಾಗೂ ಕೃಷಿ ಯಂತ್ರೋಪಕರಣಗಳ ಕೌಶಲ್ಯ ತರಬೇತಿಯನ್ನು ಮಂಡ್ಯದ ಕೃಷಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ ಡಾ. ಶ್ರೀದೇವಿ ಉದ್ಘಾಟಿಸಿದರು.ನಂತರ ಅವರು ಮಾತನಾಡಿ, ರೈತರು ತಮ್ಮ ಕೃಷಿ ಯಂತ್ರೋಪಕರಣಗಳನ್ನು ತಾವೇ ದುರಸ್ತಿ ಮಾಡಿಕೊಳ್ಳುವ ಹಂತಕ್ಕೆ ಬರಬೇಕು. ರೈತರಿಗೆ ಕೃಷಿ ಯಂತ್ರೋಪಕರಣ ದುರಸ್ತಿ ತರಬೇತಿ ನೀಡುವ ನಿಟ್ಟಿನಲ್ಲಿ ಜೆಎಸ್ಎಸ್ ಕೆವಿಕೆ, ಕೃಷಿ ಇಲಾಖೆ ಹಾಗೂ ಮಂಡ್ಯದ ಕೃಷಿ ವಿಶ್ವವಿದ್ಯಾನಿಲಯದ ಪ್ರಥಮ ಹೆಜ್ಜೆಯಾಗಿದೆ. ಎಲ್ಲ ಶಿಬಿರಾರ್ಥಿಗಳನ್ನು ಮಂಡ್ಯದ ವಿಸಿ ಫಾರಂಗೆ ಭೇಟಿ ಮಾಡಿಸಿ ಪ್ರಾಯೋಗಿಕ ತರಬೇತಿಯನ್ನು ಸಹ ನೀಡಲಾಗುವುದು ಎಂದು ತಿಳಿಸಿದರು. ತರಬೇತಿಯಲ್ಲಿ ಮುಖ್ಯಅತಿಥಿಗಳಾಗಿ ನಂಜನಗೂಡು ತಾಲೂಕಿನ ಕೃಷಿ ಅಧಿಕಾರಿ ರಘುವೀರ್ ಮಾತನಾಡಿ, ಈ ಕೌಶಲ್ಯ ತರಬೇತಿ ಪಡೆದ ರೈತರು ತಮ್ಮ ಸ್ವಂತ ಸ್ಥಳ, ಹಳ್ಳಿಗಳಲ್ಲಿ ಇತರೆ ರೈತರಿಗೆ ಕೃಷಿ ಯಂತ್ರೋಪಕರಣಗಳ ರಿಪೇರಿ ಕೌಶಲ್ಯವನ್ನು ತಿಳಿಸಿಕೊಡಬೇಕೆಂದು ಕರೆ ನೀಡಿದರು.ಕೃಷಿ ಇಲಾಖೆಯ ವತಿಯಿಂದ ರೈತರಿಗೆ ಕೃಷಿ ಯಂತ್ರೋಪಕರಣಗಳಿಗೆ ಸಿಗುವ ಸಬ್ಸಿಡಿ ಕುರಿತು ಮಾಹಿತಿ ನೀಡಿದರು. ಅಧ್ಯಕ್ಷತೆ ವಹಿಸಿದ್ದ ಐಸಿಎಆರ್ ಜೆಎಸ್ಎಸ್ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥ ಡಾ. ಬಿ.ಎನ್. ಜ್ಞಾನೇಶ್ ಮಾತನಾಡಿ, ಪ್ರಸ್ತುತ ಪರಿಸ್ಥಿತಿಯಲ್ಲಿ ರೈತರು ತಮ್ಮ ಕೃಷಿ ಯಂತ್ರೋಪಕರಣಗಳನ್ನು ದುರಸ್ತಿ ಮಾಡಿಸಲು ಸಮೀಪದ ತಾಲೂಕು ಕೇಂದ್ರಕ್ಕೆ ಭೇಟಿ ನೀಡಬೇಕು. ಇದರಿಂದ ರೈತರಿಗೆ ಸಮಯ ಹಾಗೂ ವೆಚ್ಚ ಹೆಚ್ಚಾಗುತ್ತದೆ. ಸಕಾಲದಲ್ಲಿ ಸೀಮಿತ ಕೃಷಿ ಯಂತ್ರೋಪಕರಣಗಳ ರಿಪೇರಿಗಳನ್ನು ತಮ್ಮ ಸ್ವಂತ ಸ್ಥಳದಲ್ಲಿಯೇ ದುರಸ್ತಿ ಮಾಡಿಕೊಳ್ಳುವ ಸಲುವಾಗಿ ಈ ತರಬೇತಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಸಮಯ ಹಾಗೂ ವೆಚ್ಚವನ್ನು ರೈತರು ಉಳಿಸಬಹುದಾಗಿದೆ ಎಂದು ತಿಳಿಸಿದರು. ರೈತರು ಈ ಕೌಶಲ್ಯ ತರಬೇತಿಯನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳಲು ರೈತರಿಗೆ ತಿಳಿಸಿದರು. ಐದುದಿನದ ಈ ಕಾರ್ಯಕ್ರಮದಲ್ಲಿ ಮೈಸೂರು ಜಿಲ್ಲೆಯ ತಾಲೂಕುಗಳಿಂದ 42 ರೈತರು ತರಬೇತಿಯಲ್ಲಿ ಪಾಲ್ಗೊಂಡು ಕೃಷಿ ಯಂತ್ರೋಪಕರಣಗಳ ತಾಂತ್ರಿಕ ಮಾಹಿತಿ ಹಾಗೂ ದುರಸ್ತಿ ಕೌಶಲ್ಯವನ್ನು ಪಡೆದುಕೊಳ್ಳುತ್ತಿದ್ದಾರೆ.ಕೃಷಿ ವಿಜ್ಞಾನ ಕೇಂದ್ರದ ವಿಷಯ ತಜ್ಞರರಾದ ಎಚ್.ವಿ. ದಿವ್ಯಾ, ಫಾರಂ ವ್ಯವಸ್ಥಾಪಕ ಗಂಗಪ್ಪ ಹಿಪ್ಪರಿಗಿ ಇತರರು ಇದ್ದರು.