ಕವಿ, ಲೇಖಕರು ಎಂದಿಗೂ ಪ್ರಭುತ್ವವನ್ನು ಓಲೈಸಬೇಕಿಲ್ಲ

KannadaprabhaNewsNetwork |  
Published : Sep 29, 2025, 01:03 AM IST
ಕವಿಗಳು ಪ್ರಭುತ್ವವನ್ನು ಓಲೈಸಬೇಕಿಲ್ಲ: ಮಹದೇವ ಶಂಕನಪುರ | Kannada Prabha

ಸಾರಾಂಶ

ಜನರಿಂದಲೇ ರಚನೆಗೊಂಡ ಸರ್ಕಾರಗಳು ಆಯ್ಕೆ ಮಾಡಿದ ಜನರನ್ನೆ ವಂಚಿಸುತ್ತಿವೆ. ಕವಿ, ಲೇಖಕರು ಎಂದಿಗೂ ಪ್ರಭುತ್ವವನ್ನು ಓಲೈಸಬೇಕಾಗಿಲ್ಲ, ಅವಲಂಬಿಸಬೇಕಾಗಿಯೂ ಇಲ್ಲ. ಸ್ವತಂತ್ರವಾಗಿ ತಮ್ಮ ಬರಹವನ್ನು ಮುಂದುವರಿಸಬೇಕು ಎಂದು ಪ್ರೊ. ಮಹದೇವ ಶಂಕನಪುರ ತಿಳಿಸಿದರು.

ಕನ್ನಡಪ್ರಭ ವಾರ್ತೆ, ಚಾಮರಾಜನಗರ

ಜನರಿಂದಲೇ ರಚನೆಗೊಂಡ ಸರ್ಕಾರಗಳು ಆಯ್ಕೆ ಮಾಡಿದ ಜನರನ್ನೆ ವಂಚಿಸುತ್ತಿವೆ. ಕವಿ, ಲೇಖಕರು ಎಂದಿಗೂ ಪ್ರಭುತ್ವವನ್ನು ಓಲೈಸಬೇಕಾಗಿಲ್ಲ, ಅವಲಂಬಿಸಬೇಕಾಗಿಯೂ ಇಲ್ಲ. ಸ್ವತಂತ್ರವಾಗಿ ತಮ್ಮ ಬರಹವನ್ನು ಮುಂದುವರಿಸಬೇಕು ಎಂದು ಪ್ರೊ. ಮಹದೇವ ಶಂಕನಪುರ ತಿಳಿಸಿದರು.

ಚಾಮರಾಜನಗರ ಜಿಲ್ಲಾ ಲೇಖಕರ ಸಂಘವು ಇಲ್ಲಿನ ರೋಟರಿ ಭವನದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ಚಾಮರಾಜನಗರದ ಇತಿಹಾಸದ ಗೊತ್ತಿಲ್ಲದವರು ನಿರ್ಣಾಯಕ ಸ್ಥಾನದಲ್ಲಿ ಇದ್ದುದರಿಂದ ಚಾಮರಾಜನಗರದಲ್ಲಿ ದಸರಾ ಉತ್ಸವ ನಿಂತಿದೆ. ಯಾವ ಸರ್ಕಾರವು ದಸರಾ ಆರಂಭಿಸಿತ್ತೊ ಅವರದೆ ಸರ್ಕಾರ ದಸರಾ ನಿಲ್ಲಿಸಿ ಅಪಕೀರ್ತಿ ಹೊಂದಿದೆ. ಜನರ ತೆರಿಗೆ ಹಣದಿಂದ ಮೋಜು ಮಾಡುವ ಮಂತ್ರಿಗಳು, ಶಾಸಕರು, ಅಧಿಕಾರಿಗಳು ದಸರಾ ಉತ್ಸವವನ್ನು ಇಲ್ಲಿನ ಜನರಿಂದ ಬಲವಂತವಾಗಿ ಕಿತ್ತುಕೊಂಡಿದ್ದಾರೆ. ಒಡೆಯರ ಇತಿಹಾಸವೆ ಇಲ್ಲದ ತುಮಕೂರಿನಂತಹ ಜಿಲ್ಲೆಗಳಿಗೆ ದಸರಾ ಉತ್ಸವವನ್ನು ವರ್ಗಾಯಿಸಿದ್ದಾರೆ. ಇದು ಖಂಡನೀಯ. ಸರ್ಕಾರ ದಸರಾ ನಡೆಸದೆ ಹೊದರೂ ಚಾಮರಾಜನಗರ ಜಿಲ್ಲಾ ಲೇಖಕರ ಸಂಘದಿಂದ ದಸರಾ ಕವಿಗೋಷ್ಠಿ ನಡೆಯುತ್ತಿರುವುದು ಸ್ವಾಗತಾರ್ಹ. ಈ ಪರಂಪರೆ ಬೆಳೆಯಲಿ. ಸರ್ಕಾರಗಳು ಬರುತ್ತವೆ, ಹೋಗುತ್ತವೆ. ಇಲ್ಲಿನ ನಾಗರಿಕರು ಮಾತ್ರ ದೀರ್ಘಕಾಲ ಇಲ್ಲಿ ನೆಲೆಸಿರುತ್ತಾರೆ.

ಸಾಕಷ್ಟು ಸಂಖ್ಯೆಯಲ್ಲಿ ಕವಿಗಳು ಭಾಗವಹಿಸಿದ್ದೀರಿ. ಕಾವ್ಯ ಹರಿತವಾಗಲಿ, ನಮ್ಮನ್ನಾಳುವ ಜನರನ್ನು ಎಚ್ಚರಿಸಲಿ, ವೈಚಾರಿಕತೆ ಕವನದ ಕೇಂದ್ರವಾಗಲಿ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಮದ್ದೂರು ದೊರೆಸ್ವಾಮಿ ಅವರು ಮಾತನಾಡಿ ಇಲ್ಲಿ ನಡೆಯುತ್ತಿರುವ ದಸರಾ ಕವಿಗೋಷ್ಠಿಯು ಯಾರು ವಿರುದ್ಧವೂ ಅಲ್ಲ. ಯಾರು ಪರವೂ ಅಲ್ಲ. ಜಿಲ್ಲೆಯ ಕವಿಗಳನ್ನು ಒಗ್ಗೂಡಿಸಿ ದಸರಾ ಸಂಭ್ರಮದಲ್ಲಿ ಕವಿತೆ ವಾಚಿಸುವ ಸಂದರ್ಭವಷ್ಟೆ ಎಂದರು.

ಸಾಹಿತಿ ಸೋಮಶೇಖರ ಬಿಸಲ್ವಾಡಿ ಅವರು ಮಾತನಾಡಿ, ದಸರಾ ಕವಿಗೋಷ್ಠಿಯ ಪರಂಪರೆಯನ್ನು ಮುನ್ನೆಡೆಸುವ, ಪ್ರತಿಭಾವಂತ ಕವಿಗಳಿಗೆ ವೇದಿಕೆ ನೀಡುವ‌ ಕೆಲಸವನ್ನು ಜಿಲ್ಲಾ ಲೇಖಕರ ಸಂಘ ಮಾಡುತ್ತಿದೆ. ಕವಿಗಳು, ಸಾಹಿತಿಗಳು ಸರ್ಕಾರಗಳಿಗೆ ವಿರೋಧ ಪಕ್ಷಗಳಂತೆ ಕೆಲಸ ಮಾಡಬೇಕು. ಸರ್ಕಾರಗಳು ಜನಪ್ರತಿನಿಧಿಗಳ ಅಂಕು ಡೊಂಕುಗಳನ್ನು ತಿದ್ದಬೇಕು. ಮಹಲುಗಳಲ್ಲಿ ಐಷಾರಾಮಿಯಾಗಿ ಬದುಕು ಸಾಗಿಸುವವರಿಗೆ ಓದಲು ಮಾತ್ರ ನಿಮ್ಮ ಬರವಣಿಗೆ ಮೀಸಲಾಗದೆ ಬಡತನ, ಜನರ ನೋವು ಸಂಕಟಗಳಿಗೆ ಧ್ವನಿಯಾಗಲಿ ಎಂದರು.

ಅಧ್ಯಕ್ಷತೆ ವಹಿಸಿದ್ದ ರೇಚಂಬಳ್ಳಿ ದುಂಡಮಾದಯ್ಯ ಅವರು ಮಾತನಾಡಿ, ಎಲ್ಲರೂ ತುಂಬಾ ಸೊಗಸಾಗಿ ಪದ್ಯ ಬರೆದು ವಾಚಿಸಿದ್ದೀರಿ. ಲೇಖಕರ ಸಂಘದ ಜೊತೆ ನಿಮ್ಮ ಸಂಬಂಧ ಹೀಗೆ ಮುಂದುವರಿಯಲಿ ಎಂದರು. ಲೇಖಕಿ ಧನಲಕ್ಷ್ಮಿ ವೇದಿಕೆಯಲ್ಲಿದ್ದರು.

ಶೀಲಾ ಸತ್ಯೇಂದ್ರಸ್ವಾಮಿ, ಕಾತ್ಯಾಯಿನಿ, ಕೋಮಲ ಸುರೇಶ್, ಡಾ ಬಿ ಆರ್ ಕೃಷ್ಣಕುಮಾರ್, ಸುಂದರ ಕಲಿವೀರ, ಡಾ ಶಶಿಕಲಾ ಕೃಷ್ಣಕುಮಾರ್, ಡಾ ಪಿ ಪ್ರೇಮ, ಸಿದ್ದಲಿಂಗಸ್ವಾಮಿ ಹೊಂಗನೂರು, ಫೈರೋಜ್ ಖಾನ್, ಮಂಜುಳ‌ ಉಪಾಧ್ಯಾಯಿನಿ, ಕೆ ಎನ್ ಕಾವ್ಯ, ಪ್ರಸಾದ್ ಅರಳೀಪುರ, ಮಂಜುನಾಥ್ ಕೆಸ್ತೂರು ಸೇರಿದಂತೆ 32 ಕವಿಗಳು ಕವಿತೆ ವಾಚನ ಮಾಡಿದರು. ಕವಿಗೋಷ್ಠಿಗೂ ಮುನ್ನ ಇಂಚರ ಕಲಾ ಬಳಗ ಕಲಾವಿದರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.

PREV

Recommended Stories

ಸಿಲೋಗನಾ ಹೆಸರಿನಲ್ಲಿ ವಿಜಯ ದಶಮಿ ಆಚರಿಸುವ ದನಗರ ಗೌಳಿಗರು
ಭಟ್ಕಳದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ