ಕನ್ನಡಪ್ರಭ ವಾರ್ತೆ ಬಂಟ್ವಾಳ
ಕಳೆದ ಶನಿವಾರದಿಂದಲೇ ಬ್ರಹ್ಮಶ್ರೀ ವೇ.ಮೂ.ಪೊಳಲಿ ಶ್ರೀಕೃಷ್ಣ ತಂತ್ರಿ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕರಾದ ಮಾಧವಭಟ್, ನಾರಾಯಣ ಭಟ್, ಪರಮೇಶ್ವರ ಭಟ್ ಮತ್ತು ರಾಮ್ ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿ ವಿಧಾನಗಳು ಆರಂಭಗೊಂಡಿವೆ.
ಬುಧವಾರ ಬೆಳಗ್ಗೆ 6 ರಿಂದ ಚಂಡಿಕಾಯಾಗ ಆರಂಭವಾಗಲಿದ್ದು, ಮಧ್ಯಾಹ್ನ 12 ಗಂಟೆಗೆ ಪೂರ್ಣಾಹುತಿಯಾಗಲಿದೆ. ಬಳಿಕ ಶ್ರೀದೇವರಿಗೆ ಮಹಾಪೂಜೆ, ಅನ್ನಸಂತರ್ಪಣೆ ಜರಗಲಿದೆ. ಸುಮಾರು 25 ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಸಂಘಟಕರು ಹೊಂದಿದ್ದಾರೆ.ಗುರುವಾರ ಸೇವಾ ರೂಪದ ದೊಡ್ಡ ರಂಗಪೂಜೆ ಉತ್ಸವ ನಡೆಯಲಿದೆ. ಅಂದು ರಾತ್ರಿ ವಿಶೇಷವಾಗಿ ದೇವರ ಬಲಿ ಉತ್ಸವ, ಬೆಳ್ಳಿರಥೋತ್ಸವ, ಚಂದ್ರಮಂಡಲ ರಥ, ಸಣ್ಣರಥೋತ್ಸವ, ಪಲ್ಲಕಿ ಉತ್ಸವ ನಡೆಯಲಿದೆ. ಈಗಾಗಲೇ ಪ್ರತಿದಿನ ನೂರಾರು ಸಂಖ್ಯೆಯಲ್ಲಿ ಭಗವದ್ದಕ್ತರು ಕ್ಷೇತ್ರಕ್ಕಾಗಮಿಸಿ ಹೋಮ ಹವನಾದಿ,
ಅನ್ನದಾನ ಸೇವೆ ಕೂಡ ಆರಂಭವಾಗಿದ್ದು, ಭಕ್ತರು ಸೆಕೆಯಿಂದ ಮುಕ್ತಿ ಕಾಣಲು ಮತ್ತು ಸಾವಕಾಶವಾಗಿ ದೇವರ ಅನ್ನಪ್ರಸಾದ ಸ್ವೀಕರಿಬೇಕು ಎಂಬ ನಿಟ್ಟಿನಲ್ಲಿ ಈ ಸ್ಥಳವನ್ನು ಜರ್ಮನ್ ಟೆಂಟ್ ಅಳವಡಿಸಿ ತಂಪಾದ ಗಾಳಿಗಾಗಿ ಏರೋಪ್ಲಾನ್ ಪ್ಯಾನ್ ಅಳವಡಿಸಲಾಗಿದೆ.
ವಿಶಾಲ ಪಾರ್ಕಿಂಗ್:ಶತಚಂಡಿಕಾಯಾಗದ ಹಿನ್ನಲೆಯಲ್ಲಿ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ವಾಹನಗಳ ಪಾರ್ಕಿಂಗಾಗಿ ವಿಶಾಲವಾದ ಜಾಗದ ವ್ಯವಸ್ಥೆ ಕಲ್ಪಿಸಲಾಗಿದೆ.ಇಲ್ಲಿನ ವ್ಯವಸ್ಥೆ ನೋಡಿಕೊಳ್ಳಲು ಸ್ವಯಂಸೇವಕರ ತಂಡ ಕಾರ್ಯನಿರ್ವಹಿಸುತ್ತಿದೆ,.