140 ಕಿ.ಮೀ ಬೆನ್ನತ್ತಿ ಕಳ್ಳನನ್ನುಹಿಡಿದು ಬಂಧಿಸಿದ ಪೊಲೀಸರು

KannadaprabhaNewsNetwork |  
Published : May 06, 2026, 04:00 AM IST
ಪ್ರಕಾಶ್ | Kannada Prabha

ಸಾರಾಂಶ

ರಾಜಧಾನಿಯಲ್ಲಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು 140 ಕಿ.ಮೀ. ಬೆನ್ನು ಹತ್ತಿ ಇಂದಿರಾ ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿಯಲ್ಲಿ ಬೀಗ ಹಾಕಿದ ಮನೆಗಳಿಗೆ ಕನ್ನ ಹಾಕುತ್ತಿದ್ದ ಕುಖ್ಯಾತ ಕಳ್ಳನೊಬ್ಬನನ್ನು 140 ಕಿ.ಮೀ. ಬೆನ್ನು ಹತ್ತಿ ಇಂದಿರಾ ನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನಾರ್ತ್‌ ಟೌನ್ ಲೇಔಟ್‌ ನಿವಾಸಿ ಬಿ.ಪ್ರಕಾಶ್ ಅಲಿಯಾಸ್‌ ಜಂಗ್ಲಿ ಬಂಧಿತನಾಗಿದ್ದು, ಆರೋಪಿಯಿಂದ 1.15 ಕೋಟಿ ರು ಮೌಲ್ಯದ 855 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.

ಕೆಲ ದಿನಗಳ ಹಿಂದೆ ಬಿ.ಎಂ.ಕಾವಲ್‌ನಲ್ಲಿ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಕೃತ್ಯದ ಖದೀಮನ ಬೇಟೆಗಿಳಿದ ಪೊಲೀಸರು, ಸಾದಂರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಜಂಗ್ಲಿ ಪ್ರಕಾಶ್ ಕೈವಾಡವಿರುವುದು ಗೊತ್ತಾಗಿದೆ. ಕೊನೆಗೆ 140 ಕಿ.ಮೀ ಬೆನ್ನತ್ತಿ ಆರೋಪಿಯನ್ನು ಹಲಸೂರು ಉಪ ವಿಭಾಗದ ಎಸಿಪಿ ರಂಗಪ್ಪ ಹಾಗೂ ಇಂದಿರಾನಗರ ಇನ್ಸ್‌ಪೆಕ್ಟರ್‌ ಸುದರ್ಶನ್ ನೇತೃತ್ವದ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

66 ಕೃತ್ಯಗಳಲ್ಲಿ ಪ್ರಕಾಶ್ ಪಾತ್ರ:

ಕೃಷಿಕ ಎಂದು ಹೇಳಿಕೊಳ್ಳುವ ಪ್ರಕಾಶ್ ವೃತ್ತಿಪರ ಮನೆಗಳ್ಳನಾಗಿದ್ದು, ಆತನ ವಿರುದ್ಧ ಬೆಂಗಳೂರು ನಗರ, ಗ್ರಾಮಾಂತರ, ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಸುಮಾರು 66 ಪ್ರಕರಣಗಳು ದಾಖಲಾಗಿವೆ. ಹಲವು ವರ್ಷಗಳಿಂದ ಮನೆಗಳ್ಳತನ ಕೃತ್ಯದಲ್ಲಿ ಪ್ರಕಾಶ್ ನಿರಂತನಾಗಿದ್ದಾನೆ. ಹಾಗೆ ಹಲವು ಬಾರಿ ಬಂಧಿತನಾಗಿ ಆತ ಜೈಲೂಟ ಸವಿದಿದ್ದಾನೆ. ಆದರೆ ಪ್ರಕಾಶ್ ಚಾಳಿ ಬಿಟ್ಟಿರಲಿಲ್ಲ.

ಕೆಲ ದಿನಗಳ ಹಿಂದೆ ತಮ್ಮ ಕುಟುಂಬ ಸಮೀತ ಕೇರಳಕ್ಕೆ ತೆರಳಿದ್ದಾಗ ಬಿ.ಎಂ.ಕಾವಲ್ ನಿವಾಸಿ ಖಾಸಗಿ ಕಂಪನಿ ಉದ್ಯೋಗಿ ಗೋವಿಂದನ್ ಮನೆಯಲ್ಲಿ ಆತ ಚಿನ್ನಾಭರಣ ದೋಚಿದ್ದ. ಈ ಕೃತ್ಯ ಸಂಬಂಧ 300ಕ್ಕೂ ಹೆಚ್ಚಿನ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿತು. ಆದರೆ, ನಗರ ತೊರೆದು ಪೊಲೀಸರಿಗೆ ಸಿಗದೆ ಆತ ತಪ್ಪಿಸಿಕೊಳ್ಳುತ್ತಿದ್ದ. ಬೆಂಬಿಡದೆ ಸುಮಾರು 140 ಕಿ.ಮೀ ಬೆನ್ನಹಟ್ಟಿದಾಗ ಜಂಗ್ಲಿ ಕೊನೆಗೆ ಖಾಕಿ ಬಲೆಗೆ ಬಿದ್ದಿದ್ದಾನೆ.

ಕದ್ದ ಚಿನ್ನ ಸ್ವೀಕರಿಸಿದವರ ಬಂಧನ

ಇನ್ನು ಪ್ರಕಾಶ್‌ನಿಂದ ಕದ್ದ ಚಿನ್ನಾಭರಣ ಸ್ವೀಕರಿಸಿದ ಆರೋಪದ ಮೇರೆಗೆ ಇಬ್ಬರು ಚಿನ್ನಾಭರಣ ವ್ಯಾಪಾರಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಪೇಟೆಯ ಸುಶಾಂತ್‌ ದೇಶಮುಖ್‌ ಹಾಗೂ ಭಾಗಿರಥ್ ದೇವಾಸಿ ಬಂಧಿತರಾಗಿದ್ದು, ಕಳ್ಳತನ ಕೃತ್ಯದಲ್ಲಿ ಪ್ರಕಾಶ್ ದೋಚಿದ್ದ ಚಿನ್ನಾಭರಣ ವಿಲೇವಾರಿಗೆ ಇಬ್ಬರು ನೆರವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

1.7 ಕೋಟಿಯ ಮೊಬೈಲ್‌ಗಳುಮರಳಿ ಮಾಲಿಕರಿಗೆ ಹಸ್ತಾಂತರ
ಕೆಲಸಕ್ಕಿದ್ದ ಉದ್ಯಮಿ ಮನೆಯಲ್ಲಿ43 ಲಕ್ಷದ ಆಭರಣ ಕದ್ದ ದಂಪತಿ