ಕನ್ನಡಪ್ರಭ ವಾರ್ತೆ ಬೆಂಗಳೂರು
ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನಾರ್ತ್ ಟೌನ್ ಲೇಔಟ್ ನಿವಾಸಿ ಬಿ.ಪ್ರಕಾಶ್ ಅಲಿಯಾಸ್ ಜಂಗ್ಲಿ ಬಂಧಿತನಾಗಿದ್ದು, ಆರೋಪಿಯಿಂದ 1.15 ಕೋಟಿ ರು ಮೌಲ್ಯದ 855 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ.
ಕೆಲ ದಿನಗಳ ಹಿಂದೆ ಬಿ.ಎಂ.ಕಾವಲ್ನಲ್ಲಿ ಮನೆಯೊಂದರಲ್ಲಿ ಚಿನ್ನಾಭರಣ ಕಳ್ಳತನವಾಗಿತ್ತು. ಈ ಕೃತ್ಯದ ಖದೀಮನ ಬೇಟೆಗಿಳಿದ ಪೊಲೀಸರು, ಸಾದಂರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿದಾಗ ಜಂಗ್ಲಿ ಪ್ರಕಾಶ್ ಕೈವಾಡವಿರುವುದು ಗೊತ್ತಾಗಿದೆ. ಕೊನೆಗೆ 140 ಕಿ.ಮೀ ಬೆನ್ನತ್ತಿ ಆರೋಪಿಯನ್ನು ಹಲಸೂರು ಉಪ ವಿಭಾಗದ ಎಸಿಪಿ ರಂಗಪ್ಪ ಹಾಗೂ ಇಂದಿರಾನಗರ ಇನ್ಸ್ಪೆಕ್ಟರ್ ಸುದರ್ಶನ್ ನೇತೃತ್ವದ ತಂಡ ಬಂಧಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.66 ಕೃತ್ಯಗಳಲ್ಲಿ ಪ್ರಕಾಶ್ ಪಾತ್ರ:
ಕೆಲ ದಿನಗಳ ಹಿಂದೆ ತಮ್ಮ ಕುಟುಂಬ ಸಮೀತ ಕೇರಳಕ್ಕೆ ತೆರಳಿದ್ದಾಗ ಬಿ.ಎಂ.ಕಾವಲ್ ನಿವಾಸಿ ಖಾಸಗಿ ಕಂಪನಿ ಉದ್ಯೋಗಿ ಗೋವಿಂದನ್ ಮನೆಯಲ್ಲಿ ಆತ ಚಿನ್ನಾಭರಣ ದೋಚಿದ್ದ. ಈ ಕೃತ್ಯ ಸಂಬಂಧ 300ಕ್ಕೂ ಹೆಚ್ಚಿನ ಸಿಸಿಟಿವಿ ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿತು. ಆದರೆ, ನಗರ ತೊರೆದು ಪೊಲೀಸರಿಗೆ ಸಿಗದೆ ಆತ ತಪ್ಪಿಸಿಕೊಳ್ಳುತ್ತಿದ್ದ. ಬೆಂಬಿಡದೆ ಸುಮಾರು 140 ಕಿ.ಮೀ ಬೆನ್ನಹಟ್ಟಿದಾಗ ಜಂಗ್ಲಿ ಕೊನೆಗೆ ಖಾಕಿ ಬಲೆಗೆ ಬಿದ್ದಿದ್ದಾನೆ.
ಇನ್ನು ಪ್ರಕಾಶ್ನಿಂದ ಕದ್ದ ಚಿನ್ನಾಭರಣ ಸ್ವೀಕರಿಸಿದ ಆರೋಪದ ಮೇರೆಗೆ ಇಬ್ಬರು ಚಿನ್ನಾಭರಣ ವ್ಯಾಪಾರಿಗಳನ್ನು ಇಂದಿರಾನಗರ ಪೊಲೀಸರು ಬಂಧಿಸಿದ್ದಾರೆ. ಚಿಕ್ಕಪೇಟೆಯ ಸುಶಾಂತ್ ದೇಶಮುಖ್ ಹಾಗೂ ಭಾಗಿರಥ್ ದೇವಾಸಿ ಬಂಧಿತರಾಗಿದ್ದು, ಕಳ್ಳತನ ಕೃತ್ಯದಲ್ಲಿ ಪ್ರಕಾಶ್ ದೋಚಿದ್ದ ಚಿನ್ನಾಭರಣ ವಿಲೇವಾರಿಗೆ ಇಬ್ಬರು ನೆರವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.