ಸಂಚಾರ ನಿಯಮ ಉಲ್ಲಂಘನೆ ಪತ್ತೆಗೆ ಪೊಲೀಸ್‌ ಇಲಾಖೆ ಹದ್ದಿನಕಣ್ಣು

KannadaprabhaNewsNetwork |  
Published : Jul 23, 2026, 02:00 AM IST
22ಎಚ್‌ವಿಆರ್‌1 | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಐ ಆಧಾರಿತ ವ್ಯವಸ್ಥೆಯಲ್ಲಿ ಸಂಚಾರಿ ನಿಯಮ ಪರಿಚಯಿಸಲಾಗುತ್ತಿದೆ

ಹಾವೇರಿ: ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಕಡಿವಾಣ ಹಾಕಲು ಜಿಲ್ಲಾ ಪೊಲೀಸರು ಹದ್ದಿನ ಕಣ್ಣು ಹೆಸರಿನಡಿ "ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಂ " ಜಾರಿಗೆ ತಂದಿದ್ದಾರೆ. ಕೃತಕ ಬುದ್ಧಿಮತ್ತೆ (ಎಐ) ಆಧಾರಿತ ಕ್ಯಾಮೆರಾಗಳ ಮೂಲಕ ಸಂಚಾರ ನಿಯಮ ಉಲ್ಲಂಘನೆಗಳನ್ನು ಸ್ವಯಂಚಾಲಿತವಾಗಿ ಪತ್ತೆಹಚ್ಚಿ, ಎನ್‌ಐಸಿ ಇ-ಚಲನ್ ವ್ಯವಸ್ಥೆ ಮೂಲಕ ಇನ್ನು ಮುಂದೆ ವಾಹನ ಮಾಲೀಕರಿಗೆ ದಂಡ ವಿಧಿಸಲಾಗುತ್ತದೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಎಸ್ಪಿ ಯಶೋದಾ ವಂಟಗೋಡಿ ಈ ಕುರಿತು ಮಾಹಿತಿ ನೀಡಿದರು. ಜಿಲ್ಲೆಯಲ್ಲಿ ಮೊದಲ ಬಾರಿಗೆ ಎಐ ಆಧಾರಿತ ವ್ಯವಸ್ಥೆಯಲ್ಲಿ ಸಂಚಾರಿ ನಿಯಮ ಪರಿಚಯಿಸಲಾಗುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಸುರಕ್ಷಿತ ಸಂಚಾರ ವ್ಯವಸ್ಥೆಯನ್ನು ನಿರ್ಮಿಸುವ ಉದ್ದೇಶದಿಂದ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. 2025-26ನೇ ಸಾಲಿನ ಪೊಲೀಸ್ ಇಲಾಖೆಯ ರಸ್ತೆ ಸುರಕ್ಷತಾ ಯೋಜನೆಯಡಿ ಮಂಜೂರಾದ ₹52.63 ಲಕ್ಷ ಅನುದಾನದಲ್ಲಿ ಮೊದಲ ಹಂತವಾಗಿ ₹41 ಲಕ್ಷ ವೆಚ್ಚದಲ್ಲಿ ಸಿದ್ದಪ್ಪ ವೃತ್ತ, ಗುತ್ತಲ ವೃತ್ತ ಹಾಗೂ ಕಾಗಿನೆಲೆ ಕ್ರಾಸ್ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ 6 ಎಐ ಆಧಾರಿತ ಎಎನ್‌ಪಿಆರ್ ಕ್ಯಾಮೆರಾಗಳು ಹಾಗೂ 10 ಸರ್ವೆಲೆನ್ಸ್ ಕ್ಯಾಮೆರಾಗಳು ಅಳವಡಿಸಲಾಗಿದೆ. ಎರಡನೇ ಹಂತದಲ್ಲಿ ₹11.63 ಲಕ್ಷ ವೆಚ್ಚದಲ್ಲಿ ಕಿತ್ತೂರು ರಾಣಿ ಚನ್ನಮ್ಮ ವೃತ್ತ ಸೇರಿದಂತೆ ಇತರ ಸ್ಥಳಗಳಲ್ಲಿ 2 ಎಎನ್‌ಪಿಆರ್ ಕ್ಯಾಮೆರಾ ಹಾಗೂ 9 ಸರ್ವೆಲೆನ್ಸ್ ಕ್ಯಾಮೆರಾಗಳನ್ನು ಅಳವಡಿಸುವ ಕಾಮಗಾರಿ ಪ್ರಗತಿಯಲ್ಲಿದೆ ಎಂದರು.

ಆಪ್ಟಿಕಲ್ ಫೈಬರ್ ಮೂಲಕ ಕ್ಯಾಮೆರಾಗಳನ್ನು ಜಿಲ್ಲಾ ಪೊಲೀಸ್ ಕಚೇರಿಯ ಕಮಾಂಡ್ ಮತ್ತು ಕಂಟ್ರೋಲ್ ಕೇಂದ್ರಕ್ಕೆ ಸಂಪರ್ಕಿಸಲಾಗಿದ್ದು, ನಗರ ಸಂಚಾರದ ಮೇಲೆ 24×7 ನಿಗಾ ವಹಿಸಲಾಗುತ್ತದೆ. ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸುವುದು, ಸೀಟ್ ಬೆಲ್ಟ್ ಬಳಸದೇ ಚಾಲನೆ, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುವುದು ಹಾಗೂ ವಾಹನ ಚಾಲನೆ ವೇಳೆ ಮೊಬೈಲ್ ಬಳಕೆ ಸೇರಿದಂತೆ ಪ್ರಮುಖ ಉಲ್ಲಂಘನೆಗಳನ್ನು ವ್ಯವಸ್ಥೆ ಸ್ವಯಂಚಾಲಿತವಾಗಿ ಗುರುತಿಸಲಿದೆ ಎಂದು ಹೇಳಿದರು.

ಕ್ಯಾಮೆರಾದಲ್ಲಿ ದಾಖಲಾಗುವ ಪ್ರತಿಯೊಂದು ಉಲ್ಲಂಘನೆಯನ್ನು ಪೊಲೀಸ್ ಸಿಬ್ಬಂದಿ ಪರಿಶೀಲಿಸಿದ ಬಳಿಕವೇ ಎನ್‌ಐಸಿ ಇ-ಚಲನ್ ಮೂಲಕ ದಂಡ ವಿಧಿಸಲಾಗುತ್ತದೆ. ಇದರಿಂದ ದಂಡ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಖರತೆ ಕಾಪಾಡಲಾಗುತ್ತದೆ. ದಂಡವನ್ನು ಸಂಬಂಧಿತ ಪೊಲೀಸ್ ಠಾಣೆಗಳಲ್ಲಿ ಅಥವಾ ಎನ್‌ಐಸಿ ಇ-ಚಲನ್ ಆನ್‌ಲೈನ್ ವ್ಯವಸ್ಥೆಯ ಮೂಲಕ ಪಾವತಿಸಬಹುದಾಗಿದೆ. ಆರಂಭದಲ್ಲಿ ಸಾರ್ವಜನಿಕರಲ್ಲಿ ಸಂಚಾರ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಿ, ಬಳಿಕ ನಿಯಮ ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಡಿವೈಎಸ್‌ಪಿ ಗಿರಿಮಲ್ಲ ತಲಕಟ್ಟಿ, ಕೆ.ವಿ. ಗುರುಶಾಂತಪ್ಪ, ಸಮೀರ ಮುಲ್ಲಾ ಸೇರಿದಂತೆ ಅಧಿಕಾರಿಗಳು ಉಪಸ್ಥಿತರಿದ್ದರು.

ಸಾರ್ವಜನಿಕರಿಂದಲೂ ಮಾಹಿತಿ ನೀಡಲು ಅವಕಾಶ

ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮ ಉಲ್ಲಂಘನೆ ಕಂಡುಬಂದರೆ ಸಾರ್ವಜನಿಕರು ಗೂಗಲ್ ಜಿಪಿಎಸ್‌ ಮ್ಯಾಪ್ ಕ್ಯಾಮರಾ ವಿತ್‌ ಜಿಐ ಟ್ಯಾಗ್ಡ್‌ ಆ್ಯಪ್‌ನಲ್ಲಿ ಫೋಟೋ ತೆಗೆದು 8277984094 ವಾಟ್ಸ್‌ಆ್ಯಪ್ ಸಂಖ್ಯೆಗೆ ಫೋಟೊ ಕಳುಹಿಸಿ ಮಾಹಿತಿ ನೀಡಬಹುದು. ಪರಿಶೀಲನೆಯ ಬಳಿಕ ಉಲ್ಲಂಘನೆ ದೃಢಪಟ್ಟರೆ ಸಂಬಂಧಿತ ವಾಹನದ ವಿರುದ್ಧ ಇ-ಚಲನ್ ಮೂಲಕ ದಂಡ ವಿಧಿಸಲಾಗುವುದು ಎಂದು ಎಸ್ಪಿ ಯಶೋದಾ ವಂಟಗೋಡಿ ತಿಳಿಸಿದರು.

ಐಎಸ್‌ಐ ಪ್ರಮಾಣೀಕೃತ ಹೆಲ್ಮೆಟ್ ಧರಿಸುವುದು, ಸೀಟ್ ಬೆಲ್ಟ್ ಕಡ್ಡಾಯವಾಗಿ ಬಳಸುವುದು, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸದಿರುವುದು, ವಾಹನ ಚಾಲನೆ ವೇಳೆ ಮೊಬೈಲ್ ಬಳಸದಿರುವುದು ಹಾಗೂ ಸಂಚಾರ ನಿಮಯಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹಾವೇರಿ ಎಸ್ಪಿ ಯಶೋದಾ ವಂಟಗೋಡಿ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೃಹಜ್ಯೋತಿ ಫಲಾನುಭವಿಗಳ ಪರಿಷ್ಕರಣೆಗೆ ಸರ್ವರ್‌ ಕಿರಿಕಿರಿ!
ಬರ ಎದುರಿಸಲು ಜಿಲ್ಲಾಡಳಿತ ಸದಾ ಸಿದ್ಧ: ಕೆ. ನಾಗೇಂದ್ರ ಪ್ರಸಾದ್