- ಸೇವಾ ಕವಾಯತು ಕಾರ್ಯಕ್ರಮದಲ್ಲಿ ಐಜಿಪಿ ಡಾ. ಬಿ.ಆರ್.ರವಿಕಾಂತೇಗೌಡ ಸಲಹೆ - - -
ಕಾನೂನು, ಸುವ್ಯವಸ್ಥೆ ಕಾಪಾಡುವ, ಭದ್ರತೆ, ಬಂದೋಬಸ್ತ್, ಅಪರಾಧ ತಡೆ, ಅಪರಾಧ ಪತ್ತೆಯಂತಹ ಕರ್ತವ್ಯಕ್ಕಷ್ಟೇ ಪೊಲೀಸ್ ಅಧಿಕಾರಿ, ಸಿಬ್ಬಂದಿ ಗಮನಹರಿಸದೇ, ಕಲೆ, ಸಾಹಿತ್ಯ, ಸಂಗೀತ ಕಲೆಗಳಲ್ಲಿ ಆಸಕ್ತಿ ಬೆಳೆಸಿಕೊಳ್ಳಬೇಕು. ಇದರಿಂದ ಕಾರ್ಯದೊತ್ತಡ, ಮಾನಸಿಕ ಒತ್ತಡ ನಿಭಾಯಿಸಲು, ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳಲು ನೆರವಾಗಲಿದೆ ಎಂದು ಪೂರ್ವ ವಲಯದ ಪೊಲೀಸ್ ಮಹಾನಿರೀಕ್ಷಕ ಡಾ. ಬಿ.ಆರ್. ರವಿಕಾಂತೇಗೌಡ ಹೇಳಿದರು.
ನಗರದ ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್ ಪಡೆ (ಡಿಎಆರ್) ಮೈದಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸೇವಾ ಕವಾಯತು ಕಾರ್ಯಕ್ರಮದಲ್ಲಿ ಗೌರವ ವಂದನೆ ಸ್ವೀಕರಿಸಿ ಅವರು ಮಾತನಾಡಿದರು. ಮೂರು ದಶಕಗಳ ತಮ್ಮ ಸೇವಾವಧಿಯಲ್ಲಿ ಸಾಹಿತ್ಯ ಮತ್ತು ಸಂಗೀತದ ನಿಕಟ ಬಾಂಧವ್ಯ ತಾವು ಎಂದಿಗೂ ಬಿಡಲಿಲ್ಲ. ಸಾಹಿತ್ಯ, ಸಾಂಸ್ಕೃತಿಕ, ಸಂಗೀತ ಚಟುವಟಿಕೆಗಳು ಮನಸ್ಸಿಗೆ ಮುದ ನೀಡಿ, ಕಾರ್ಯಕ್ಷಮತೆ ದ್ವಿಗುಣಗೊಳಿಸುತ್ತವೆ ಎಂದು ತಿಳಿಸಿದರು.ಹಿಂದೆಲ್ಲಾ ಕೋಮು ಗಲಭೆಗಳಷ್ಟೇ ಪೊಲೀಸ್ ಇಲಾಖೆಗೆ ಸವಾಲುಗಳಾಗಿದ್ದವು. ಆದರೆ, ಇಂದಿನ ಆಧುನಿಕ ದಿನಗಳಲ್ಲಿ ಪೊಲೀಸ್ ಇಲಾಖೆಗೆ ಡಿಜಿಟಲ್ ಅಪರಾಧಗಳು, ಭಯೋತ್ಪಾದನೆಯಂತಹ ಆಧುನಿಕ ಸವಾಲುಗಳು ಎದುರಾಗಿವೆ. ಇಂತಹವುಗಳನ್ನು ಎದುರಿಸಲು ನಿರಂತರ ಅಧ್ಯಯನದ ಜೊತೆಗೆ ತಂತ್ರಜ್ಞಾನದ ಜ್ಞಾನವೂ ಅತ್ಯಗತ್ಯ. ಹಾಗಾಗಿ, ತಂತ್ರಜ್ಞಾನದ ಬಗ್ಗೆಯೂ ಪೊಲೀಸ್ ಅಧಿಕಾರಿ, ಸಿಬ್ಬಂದಿ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದೇ ವೇಳೆ ಐಜಿಪಿ ಡಾ.ಬಿ.ಆರ್. ರವಿಕಾಂತೇಗೌಡ ಗೌರವ ವಂದನೆ ಸ್ವೀಕರಿಸಿ, ಕವಾಯತು ಪರಿವೀಕ್ಷಣೆ ಮಾಡಿದರು. ನಂತರ ಕವಾಯತು ಮೈದಾನದಲ್ಲಿ ನವೀಕೃತ ಕಾಮಗಾರಿಗಳ ಉದ್ಘಾಟನೆ ನೆರವೇರಿಸಿದರು.
-31ಕೆಡಿವಿಜಿ15: ದಾವಣಗೆರೆ ಡಿಎಆರ್ ಮೈದಾನದಲ್ಲಿ ಸೇವಾ ಕವಾಯತು ಕಾರ್ಯಕ್ರಮದಲ್ಲಿ ಪೂರ್ವ ವಲಯ ಐಜಿಪಿ ಡಾ. ಬಿ.ಆರ್.ರವಿ ಕಾಂತೇಗೌಡ ಗೌರವ ವಂದನೆ ಸ್ವೀಕರಿಸಿ ಮಾತನಾಡಿದರು.