ಸಮಾಜದ ಶೋಷಿತ, ವಂಚಿತ ಹಾಗೂ ದುಡಿಯುವ ವರ್ಗದ ಧ್ವನಿಯಾಗಿ ಸಾಹಿತ್ಯ, ಕಲೆ ಮತ್ತು ಸಾಮಾಜಿಕ ಚಳವಳಿಗಳ ಮೂಲಕ ಜಗತ್ತಿನಾದ್ಯಂತ ಜಾಗೃತಿ ಮೂಡಿಸಿದವರು ಲೋಕಶಾಹಿರ್ ಅಣ್ಣಾಭಾವು ಸಾಠೆ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಸಮಾಜದ ಶೋಷಿತ, ವಂಚಿತ ಹಾಗೂ ದುಡಿಯುವ ವರ್ಗದ ಧ್ವನಿಯಾಗಿ ಸಾಹಿತ್ಯ, ಕಲೆ ಮತ್ತು ಸಾಮಾಜಿಕ ಚಳವಳಿಗಳ ಮೂಲಕ ಜಗತ್ತಿನಾದ್ಯಂತ ಜಾಗೃತಿ ಮೂಡಿಸಿದವರು ಲೋಕಶಾಹಿರ್ ಅಣ್ಣಾಭಾವು ಸಾಠೆ ಎಂದು ನಾರಂಜಾ ಸಹಕಾರ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಸೂರ್ಯಕಾಂತ ನಾಗಮಾರಪಳ್ಳಿ ಹೇಳಿದರು.

ನಗರದ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ನಡೆದ ಅಣ್ಣಾಭಾವು ಸಾಠೆ ಅವರ 106ನೇ ಜಯಂತ್ಯುತ್ಸವ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಅಣ್ಣಾಭಾವು ಸಾಠೆ ಅವರು ತಮ್ಮ ಶ್ರೇಷ್ಠ ಸಾಹಿತ್ಯ ಹಾಗೂ ಕ್ರಾಂತಿಕಾರಿ ವಿಚಾರಗಳ ಮೂಲಕ ದೇಶ-ವಿದೇಶಗಳಲ್ಲಿ ಅಪಾರ ಕೀರ್ತಿ ಗಳಿಸಿದ್ದಾರೆ. ಅವರ ಸ್ವಾಭಿಮಾನ, ಹೋರಾಟ ಮತ್ತು ಬದುಕಿನ ಸಂಘರ್ಷ ಇಂದಿನ ಸಮಾಜಕ್ಕೂ ಆದರ್ಶವಾಗಿದೆ ಎಂದು ನಾಗಮಾರಪಳ್ಳಿ ಹೇಳಿದರು.

ಹಿರಿಯ ಸಾಹಿತಿ ರಜೀಯಾ ಬಳಬಟ್ಟಿ ಉಪನ್ಯಾಸ ನೀಡಿ, ಸಮಾಜದಲ್ಲಿ ಜಾತೀಯತೆ ಇರುವವರೆಗೆ ಶೋಷಣೆಯೂ ಮುಂದುವರಿಯುತ್ತದೆ. ಜಾತಿ, ವರ್ಗ, ಬಡತನ ಮತ್ತು ಅಸಮಾನತೆಯ ಕಾರಣದಿಂದ ಯಾವುದೇ ವ್ಯಕ್ತಿಯ ಗೌರವಕ್ಕೆ ಧಕ್ಕೆಯಾಗಬಾರದು ಎಂಬುದು ಅಣ್ಣಾಭಾವು ಸಾಠೆಯವರ ಆಶಯವಾಗಿತ್ತು ಎಂದರು.

ಪ್ರಾಚಾರ್ಯ ಡಾ.ಜೈಯಕುಮಾರ ಸಿಂಧೆ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಎಷ್ಟೇ ಮುಂದುವರಿದರೂ ಸಮಾಜದಲ್ಲಿನ ಜಾತಿ-ವರ್ಗ ಅಸಮಾನತೆ, ಬಡತನ, ನಿರುದ್ಯೋಗ ಹಾಗೂ ಅನ್ಯಾಯಗಳು ನಿವಾರಣೆಯಾಗದಿದ್ದರೆ ನಿಜವಾದ ಅಭಿವೃದ್ಧಿ ಸಾಧ್ಯವಿಲ್ಲ ಎಂದರು.

ಬೀದರ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಕಾಂತ ಹಿಪ್ಪಳಗಾಂವ ಮಾತನಾಡಿದರು. ಸಾಹಿತ್ಯ ರತ್ನ ಅಣ್ಣಾಭಾವು ಸಾಠೆ ಸಾಂಸ್ಕೃತಿಕ ಮತ್ತು ಸಾಹಿತಿಕ ಲೋಕಮಂಚ್ ಟ್ರಸ್ಟ್ ಅಧ್ಯಕ್ಷ ಎಂ.ಎಸ್. ಮನೋಹರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಲೆ, ಸಾಹಿತ್ಯ, ಸಮಾಜ ಸೇವೆ, ಶಿಕ್ಷಣ, ಮಾಧ್ಯಮ ಹಾಗೂ ವೈಜ್ಞಾನಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು.

ಪೂಜ್ಯ ದಾದಾ ಮಹಾರಾಜ ನಗರಕರ್, ನಾರಾಯಣ ಗಣೇಶ ವಕೀಲರು, ಶಿವಶರಣಪ್ಪ ಹುಗ್ಗೆ ಪಾಟೀಲ, ಮಾಣಿಕ ನೇಳಗಿ, ಡಾ. ದೇವಿದಾಸ ತುಮಕುಂಟೆ, ಸುಮಂತ್ ಕಟ್ಟಿಮನಿ, ಡಾ. ಜೈಭಾರತ್ ಮಂಗೇಶಕರ್, ಪ್ರವೀಣ ಮಿರಾಗಂಜಕರ್, ಡಾ. ಮನೋಹರ ಮೇತ್ರೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.