ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವ । ಇದು ಕೇವಲ ಕಟ್ಟಡ ಉದ್ಘಾಟನೆಯಲ್ಲ, ಕನಸು ನನಸಾದ ಕ್ಷಣ
ಜಿಲ್ಲೆಯಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸೂಚನೆಯನ್ನು ಯಾರೂ ಪಾಲಿಸುತ್ತಿಲ್ಲ ಎಂದು ಸಂಸದ ಡಾ.ಕೆ. ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕಿನ ಅರೂರು ಗ್ರಾಮದ ಬಳಿಯ ಸರ್ಕಾರಿ ನಂದಿ ಮೆಡಿಕಲ್ ಕಾಲೇಜಿನ ಹೊರರೋಗಿ ವಿಭಾಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ಸಾಮಾನ್ಯ ವಿಷಯವಾಗಿದೆ. ನಾನು ಈ ಬಗ್ಗೆ ಮಾತಾಡಿದರೆ ಹುಚ್ಚು ಹಿಡಿದಿದೆ ಎಂಬಂತೆ ನೋಡುತ್ತಾರೆ. ಅಕ್ರಮ ಮಾಡುವುದನ್ನು ತಮ್ಮ ಹಕ್ಕು ಎಂದು ಕಾಂಗ್ರೆಸ್ ಶಾಸಕರು ಹಾಗೂ ಸಚಿವರು ಭಾವಿಸಿದ್ದಾರೆ. ಕರ್ನಾಟಕವನ್ನು ಗುತ್ತಿಗೆ ಪಡೆದಿದ್ದು, ಅವಧಿ ಮುಗಿಯುವುದರೊಳಗೆ ಸಾಧ್ಯವಾದಷ್ಟು ಹಣ ಸಂಪಾದಿಸಬೇಕೆಂಬ ಗುರಿ ಕಾಂಗ್ರೆಸ್ ನಾಯಕರಿಗಿದೆ ಎಂದರು.ಪೊಲೀಸ್ ಠಾಣೆಗಳು ವಸೂಲಿ ಕೇಂದ್ರಗಳಾಗಿವೆ. ಪೊಲೀಸರನ್ನು ಕೇಳಿದರೆ ಡಿವೈಎಸ್ಪಿಗೆ ಇಷ್ಟು ಫಿಕ್ಸ್ ಮಾಡಿದ್ದಾರೆ, ಅದಕ್ಕಾಗಿ ರೈತರ ಬಳಿ ವಸೂಲಿ ಮಾಡುತ್ತಿದ್ದೇವೆ ಎನ್ನುತ್ತಾರೆ. ಮೂಲಭೂತ ಸಮಸ್ಯೆ ಸರ್ಕಾರದಲ್ಲೇ ಇದೆ. ಒಂದು ರೂಪಾಯಿ ಭ್ರಷ್ಟಾಚಾರ ನಡೆಯಬಾರದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದರು. ಆದರೆ ಆ ಮಾತಿನಂತೆ ಅಧಿಕಾರಿಗಳು ಹಾಗೂ ಶಾಸಕರು ನಡೆದುಕೊಳ್ಳುತ್ತಿಲ್ಲ. ಒಕ್ಕಲಿಗ ಸಮುದಾಯದ ಕಟ್ಟಡ ನಿರ್ಮಿಸಲು ಮುಂದಾದರೆ ನಗರಸಭೆ ಆಯುಕ್ತ 2 ಲಕ್ಷ ರು. ಲಂಚ ಪಡೆದಿದ್ದಾನೆ. ನಾನು ಅಧಿಕಾರದಲ್ಲಿದ್ದರೆ ಆ ಅಯೋಗ್ಯನನ್ನು ಅಮಾನತು ಮಾಡುತ್ತಿದ್ದೆ. ಲೋಕಾಯುಕ್ತದಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದ್ದರೂ ಆಯುಕ್ತನಾಗಿ ನೇಮಕ ಮಾಡಲಾಗಿದೆ. ಆತ ಚಿಕ್ಕಬಳ್ಳಾಪುರಕ್ಕೆ ಬಂದಾಗಲೇ ಅತಿ ದೊಡ್ಡ ಭ್ರಷ್ಟ ಎಂದು ಹೇಳಿದ್ದೆ. ಯಾವ ಅಧಿಕಾರ ಕಳ್ಳ, ಯಾರು ಪ್ರಾಮಾಣಿಕರು ಎಂದು ನನಗೂ ತಿಳಿದಿದೆ. ಜಿಲ್ಲಾ ಉಸ್ತುವಾರಿ ಸಚಿವರು ಆತನ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ನೀಡಿದ್ದಾರೆ. ಇಲ್ಲವಾದರೆ ನಾನೇ ತೀವ್ರ ಪ್ರತಿಭಟನೆ ಆರಂಭಿಸುತ್ತೇನೆ ಎಂದು ಹೇಳಿದರು.
ನಂದಿ ಮೆಡಿಕಲ್ ಕಾಲೇಜಿನ ಹೊರರೋಗಿ ವಿಭಾಗ ಜನರ ಸೇವೆಗೆ ಸಮರ್ಪಣೆಯಾದ ಈ ದಿನ ನನ್ನ ಪಾಲಿಗೆ ಕೇವಲ ಒಂದು ಉದ್ಘಾಟನಾ ಕಾರ್ಯಕ್ರಮವಲ್ಲ, ಹಲವು ವರ್ಷಗಳ ಒಂದು ಕನಸು ನನಸಾದ ಭಾವನಾತ್ಮಕ ಕ್ಷಣ ಎಂದು ಸಂಸದ ಡಾ.ಕೆ.ಸುಧಾಕರ್ ಸಂತಸ ಹಂಚಿಕೊಂಡಿದ್ದಾರೆ.
ಈ ಮಹತ್ವದ ಯೋಜನೆಗೆ ಬೆಂಬಲ ಮತ್ತು ಮಾರ್ಗದರ್ಶನ ನೀಡಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್.ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರಿಗೆ ಈ ಸಂದರ್ಭದಲ್ಲಿ ಹೃತ್ಪೂರ್ವಕ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಹೊರರೋಗಿ ಘಟಕಕ್ಕೆ ನನ್ನ ತಾಯಿಯ ಹೆಸರು ಇಡಬೇಕೆಂದು ನಾನು ಅಪೇಕ್ಷಿಸಲಿಲ್ಲ. ಆದರೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಶಾಸಕರು ತಾಯಿಯ ಹೆಸರು ಇಡುವ ಬಗ್ಗೆ ಹೇಳಿದ್ದಾರೆ. ಅದನ್ನು ಸ್ವಾಗತಿಸುತ್ತೇನೆ ಎಂದರು.
ಸಚಿವ ಕೃಷ್ಣ ಬೈರೇಗೌಡರಿಗೆ ಅರ್ಥಶಾಸ್ತ್ರದ ಬಗ್ಗೆಯೂ ತಿಳಿದಿಲ್ಲ, ದೇಶ ಹೇಗೆ ನಡೆಯುತ್ತಿದೆ ಎಂಬ ಬಗ್ಗೆಯೂ ತಿಳಿದಿಲ್ಲ. 100 ರು. ಕೊಟ್ಟರೆ 50 ರು. ವಾಪಸ್ ಬರಬೇಕೆಂದು ನಿರೀಕ್ಷೆ ಮಾಡಬಾರದು. ರಾಜ್ಯಕ್ಕೆ ರಕ್ಷಣೆ ಯಾರು ನೀಡುತ್ತಾರೆ? ರಕ್ಷಣಾ ವಲಯಕ್ಕೆ 5 ಲಕ್ಷ ಕೋಟಿ ರು. ನೀಡಲಾಗಿದೆ. ಪಾಕಿಸ್ತಾನದಿಂದ ಮೊದಲು ಪಂಜಾಬ್ ಬಾಧಿತವಾಗುತ್ತದೆಯೇ ಹೊರತು ಕರ್ನಾಟಕ ಆಗುವುದಿಲ್ಲ ಎಂದರು.