ಕನ್ನಡಪ್ರಭ ವಾರ್ತೆ ಪಾವಗಡಜಮೀನುಗಳಲ್ಲಿ ಮುಂಗಾರು ಬಿತ್ತನೆ ಹಿನ್ನಲೆಯಲ್ಲಿ ತಾಲೂಕು ಕೃಷಿ ಇಲಾಖೆ ವತಿಯಿಂದ ಗ್ರಾಮೀಣ ರೈತರಿಗೆ ಉಚಿತ ಶೇಂಗಾ ಬೀಜ ವಿತರಣೆಗೆ ಚಾಲನೆ ನೀಡಿದ್ದು ಪ್ರತಿಯೊಬ್ಬ ರೈತರಿಗೂ ಬಿತ್ತನೆ ಬೀಜ ವಿತರಿಸುವಂತೆ ಶಾಸಕ ಹಾಗೂ ತುಮುಲ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಅಧಿಕಾರಿಗಳಿಗೆ ತಾಕೀತು ಮಾಡಿದರು. ತಾಲೂಕು ಕೃಷಿ ಇಲಾಖೆಯ ವತಿಯಿಂದ ತಾಲೂಕಿನ ಬಿ.ಹೊಸಹಳ್ಳಿ ಹಾಗೂ ಮರಿದಾಸನಹಳ್ಳಿ ಗ್ರಾಮಗಳಲ್ಲಿ ಉಚಿತ ಶೇಂಗಾ ಬಿತ್ತನೆ ಬೀಜ ವಿತರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು. ಪಾವಗಡ ಬಯಲು ಸೀಮೆ ವ್ಯಾಪ್ತಿಗೆ ಒಳಪಟ್ಟ, ಕೃಷಿ ಪ್ರಧಾನ ತಾಲೂಕಾಗಿದೆ. ಬರದ ಹಿನ್ನೆಲೆಯಲ್ಲಿ ರೈತರು ಅನೇಕ ಸಂಕಷ್ಟಗಳಿಗಿಡಾಗಿದ್ದಾರೆ. ಚುನಾವಣೆಯಲ್ಲಿ ಮಾತ್ರ ರಾಜಕಾರಣ ಮಾಡಬೇಕು. ಬಳಿಕ ಎಲ್ಲರೂ ನಮ್ಮವರೆ ಎಂದು ಕಾಣಬೇಕು. ನನ್ನದು ಅಭಿವೃದ್ಧಿಯ ಮಂತ್ರ ಚುನಾವಣೆಯಲ್ಲಿ ಶಕ್ತಿ ಮೀರಿ ಹೋರಾಟ ಮಾಡುತ್ತೇನೆ. ಜನತೆಯ ಅಶೀರ್ವಾದ ಖಂಡಿತ ನನ್ನ ಮೇಲೆ ಇದ್ದೆ ಇರುವ ವಿಶ್ವಾಸ ವ್ಯಕ್ತಪಡಿಸಿದರು.
ಹುಟ್ಟು ಸಾವು ಸಹಜ, ದ್ವೇಷದ ರಾಜಕಾರಣ ಮಾಡಲ್ಲ. ಬಹುತೇಕ ಎಲ್ಲರ ಬಳಿಯು ಹಣವಿದೆ. ಚುನಾವಣೆಗಳಲ್ಲಿ ದುಡ್ಡು, ದರ್ಪದಿಂದ ಗೆಲ್ಲಲು ಸಾಧ್ಯವಿಲ್ಲ. ಅಭಿವೃದ್ಧಿ ಹಾಗೂ ಜನತೆಯ ಪ್ರೀತಿ ವಿಶ್ವಾಸದಿಂದ ಮಾತ್ರ ಜಯಸಾಧಿಸಲು ಸಾಧ್ಯ. ಪ್ರಗತಿಗೆ ಹೆಚ್ಚು ಒತ್ತು ನೀಡಿ ಕೆಲಸ ಮಾಡುತ್ತಿದ್ದೇನೆ. ಇದೇ ಗ್ರಾಮದಲ್ಲಿ ಬ್ಯಾಂಕಿಂಗ್ ವ್ಯವಸ್ಥೆ ಜಾರಿಗೆ ತರುವ ನಿಟ್ಟಿನಲ್ಲಿ 25ಲಕ್ಷ ವೆಚ್ಚದ ವಿಎಸ್ಎಸ್ ಎನ್ ನೂತನ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರೆವೇರಿಸಿದ್ದು, ಹೈನುಗಾರಿಕೆ ಉತ್ತೇಜನ ನೀಡುವ ಮೂಲಕ ಸೀಮೆ ಹಸು ಖರೀದಿಗೆ ಹಣ ಕಲ್ಪಿಸಿಕೊಡುವಂತೆ ಸೊಸೈಟಿ ಕಾರ್ಯದರ್ಶಿಗೆ ತಾಕೀತು ಮಾಡಿದರು.
ಈ ವೇಳೆ ಭೂಸೇನಾ ನಿಗಮದ ಎಇಇ ಸಿಂಧು, ತುಮುಲ್ ನಿರ್ದೇಶಕ ಚಂದ್ರಶೇಖರರೆಡ್ಡಿ, ರವಿ,ಈರಕ್ಯಾತಪ್ಪ,ಜಗನ್ನಾಥಪ್ಪ,ಹೆಂಜಾರಪ್ಪ,ಟಿಪಿಎಸ್ ಹನುಮಂತರಾಯಪ್ಪ, ಗುಡಿಪಲ್ಲಿ ರಂಗಪ್ಪ, ತಿಪ್ಪೇಸ್ವಾಮಿ, ಕೃಷಿ ಇಲಾಖೆ ಎಡಿ ಅಜಯ್ ಕುಮಾರ್,ಬಾಲಾಜಿ,ಮಲ್ಲಣ್ಣ, ವೆಂಕಟೇಶ್,ಆನಂದ್,ಕೇಶವರೆಡ್ಡಿ,ಮಂಜುನಾಥ ರೆಡ್ಡಿ,ವಸಂತರೆಡ್ಡಿ, ಭೀಮರೆಡ್ಡಿ ಮಾರಣ್ಣ ರವಿಕುಮಾರ್ ಇತರೆ ಅನೇಕ ಮುಖಂಡರು ಉಪಸ್ಥಿತರಿದ್ದರು.