ಕೊಪ್ಪಳ: ಸಹಕಾರಿ ಕ್ಷೇತ್ರ ಅತ್ಯಂತ ಪವಿತ್ರವಾಗಿರುವ ಕ್ಷೇತ್ರವಾಗಿದೆ. ಅದೊಂದು ಸಮಾಜಮುಖಿ ಕಾರ್ಯಕ್ಕಾಗಿ ಇರುವ ಬಹುದೊಡ್ಡ ಸೇವಾ ಸಂಸ್ಥೆಯಾಗಿದ್ದು, ಇಲ್ಲಿ ರಾಜಕಾರಣ ಸಲ್ಲದು ಎಂದು ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.
ಈಗಾಗಲೇ ಸಹಕಾರಿ ಕ್ಷೇತ್ರಕ್ಕೆ ಜಾತಿ ಮತ್ತು ರಾಜಕೀಯ ನುಗ್ಗಿ ಮಾರಕವಾಗಿದ್ದು, ರಾಜಕೀಯ ಚುನಾವಣೆ ಮೀರಿಸುವಂತೆ ಚುನಾವಣೆ ನಡೆಯುತ್ತಿರುವುದು, ಹಣದ ಹರಿದಾಟವಾಗುತ್ತಿರುವುದು ವಿಷಾಧದ ಸಂಗತಿಯಾಗಿದೆ ಎಂದರು.
ಸಹಕಾರಿ ಕ್ಷೇತ್ರದಲ್ಲಿ ರಾಜಕಾರಣ ಬರಬಾರದು. ಆದರೆ ನಾವು ಅದಕ್ಕೆ ದಾರಿ ಬಿಡುತ್ತಿದ್ದೇವೆ. ಸಹಕಾರಿ ಕ್ಷೇತ್ರದ ಪ್ರತಿಷ್ಟಿತ ಚುನಾವಣೆಯಲ್ಲಿ ವೋಟಿಗೆ ಲಕ್ಷ, ಸಾವಿರದಂತೆ ಹರಿಯುತ್ತದೆ. ಸಹಕಾರಿ ಕ್ಷೇತ್ರಕ್ಕೆ ರಾಜಕೀಯ ಪ್ರವೇಶ ಎನ್ನುವುದು ಕ್ಯಾನ್ಸರ್ ಬಂದಂತೆ. ಸಹಕಾರಿ ಕ್ಷೇತ್ರ ಕೊಪ್ಪಳ ಜಿಲ್ಲೆಗೆ ಬಹಳ ವಿಳಂಬವಾಗಿ ಬಂದಿದೆ. ಆದರೂ ಬಹಳ ವೇಗದಲ್ಲಿ ಬೆಳೆಯುತ್ತಿರುವುದು ಸಂತೋಷದ ಸಂಗತಿಯಾಗಿದೆ. ದುಡ್ಡಿನ ವ್ಯವಹಾರ ಇದ್ದರೇ ಅಲ್ಲಿ ಸಹಕಾರ ಚಳವಳಿ ಉಳಿಯಲ್ಲ. ಸಾಲ ತಗೊಳ್ಳೊದು, ಕೊಡುವುದರಲ್ಲಿ ಬಾರಿ ಅವ್ಯವಹಾರ ಆಗುತ್ತಿದೆ. ಇದು ಸತ್ಯಕೂಡ. ಸಾಲ ಸಹಕಾರಿಗಳಿಗೆ ಕೊಡುವುದಿಲ್ಲ. ಖಾಸಗಿ ಇಂಡಸ್ಟ್ರೀಸ್ ಗೆ ನೀಡಲಾಗುತ್ತದೆ. ಇದು ಸರಿಯಾದ ಕ್ರಮವಲ್ಲ. ನೂರಿನ್ನಿರು ಕೊಟ್ಟು ಅದನ್ನು ವಸೂಲಿ ಮಾಡಲು ಆಗದಂತಾಗುತ್ತದೆ ಎಂದರು.ಸಹಕಾರಿ ಕ್ಷೇತ್ರ ಕಾಲಿಡದ ಕ್ಷೇತ್ರವೇ ಇಲ್ಲ. ಅದು ಈಗ ಎಲ್ಲ ಕ್ಷೇತ್ರಕ್ಕೂ ಕಾಲಿಡುತ್ತದೆ. ಸರ್ಕಾರ ಸಾಲಮನ್ನಾ ಮಾಡಿದಾಗ ಅದನ್ನು ಸರಿಯಾಗಿ ಕೊಡದೇ ಇದ್ದಾಗ ಸಹಕಾರಿ ಪತ್ತಿನ ಸಂಘಗಳು ಸಂಕಷ್ಟಕ್ಕಿಡಾಗುತ್ತವೆ. ಸಾಲ ವಸೂಲಿಗೆ ಸುತ್ತಾಡಿದರೆ ಆತನ ಮೇಲೆ ಒತ್ತಡ ಹಾಕಲಾಗುತ್ತದೆ. ಯಾರ ಬೇಕಾದರೂ ಎಂಎಲ್ ಎ ಆಗಬಹುದು ಆದರೆ ಸಹಕಾರಿ ಚೇರಮನ್ ಆಗಲು ಸಾಧ್ಯವಿಲ್ಲ. ಸಹಕಾರಿ ಕ್ಷೇತ್ರ ಅಧ್ಯಕ್ಷರಾದವರು ಪ್ರತಿ ತಿಂಗಳು ಲೆಕ್ಕ ಕೊಡಬೇಕು. ಸಾಮಾನ್ಯ ಸಭೆಯಲ್ಲಿ ಅವರನ್ನು ಪ್ರಶ್ನೆ ಮಾಡುತ್ತಾರೆ ಗ್ರಾಹಕರು ಕೇಳುತ್ತಾರೆ. ಸಹಕಾರಿ ಕ್ಷೇತ್ರದಲ್ಲಿ ಸಂಸ್ಥೆ ಕಟ್ಟಿ ನಾಯಕರಾಗಿ ಅನೇಕರು ಬೆಳೆದಿದ್ದಾರೆ. ಆದರೆ ಈಗ ಆ ರೀತಿಯಾಗುತ್ತಿಲ್ಲ. ಸಹಕಾರಿ ಕ್ಷೇತ್ರಕ್ಕೆ ರಾಜಕೀಯದಿಂದ ಪರಿಹಾರ ಸಿಗಲ್ಲ. ಆದರೆ ಸಹಕಾರಿ ಕ್ಷೇತ್ರದಿಂದ ನಾಯಕತ್ವ ಬೆಳಸಿಕೊಂಡು ರಾಜಕಾರಣ ಸ್ವಚ್ಛ ಮಾಡಲು ಸಾಧ್ಯ ಎಂದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಸಹಕಾರಿ ಕ್ಷೇತ್ರದಿಂದ ಬಹುದೊಡ್ಡ ಬೆಳವಣಿಗೆಗೆ ಕಾರಣವಾಗುತ್ತದೆ. ಅಸಹಾಯಕರಿಗೂ ಸಹಾಯ ನೀಡುವ ಮತ್ತು ಶಕ್ತಿ ಕೊಡುವ ಸಂಸ್ಥೆಯೇ ಸಹಕಾರಿ ಕ್ಷೇತ್ರವಾಗಿದೆ ಎಂದರು.
ಅಮರೇಗೌಡ ಬಯ್ಯಾಪುರ, ಕೆ.ಬಸವರಾಜ ಹಿಟ್ನಾಳ, ಹೇಮಲತಾ ನಾಯಕ, ಸಂಗಣ್ಣ ಕರಡಿ, ಕೆ.ಬಸವರಾಜ ಹಿಟ್ನಾಳ, ಹಸನಸಾಬ ದೋಟಿಹಾಳ, ಅಮ್ಜದ್ ಪಟೇಲ, ವಿಜಯಕುಮಾರ ಪಾಟೀಲ, ಅಮರೇಶ ಪಾಟೀಲ್, ವಿಶ್ವನಾಥ ಪಾಟೀಲ, ಶಂಕರಗೌಡ, ಬಸವರಾಜ, ಎನ್.ಸತ್ಯನಾರಾಯಣ ಮೊದಲಾದವರು ಇದ್ದರು.