ಕನ್ನಡಪ್ರಭ ವಾರ್ತೆ ಮುದ್ದೇಬಿಹಾಳ
ಯಾವುದೇ ಶಾಸಕರಾಗಲಿ ಕ್ಷೇತ್ರದ ಅಭಿವೃದ್ಧಿ ಪೂರಕ ಯೋಜನೆಗಳನ್ನು ಮತ್ತು ಜನರ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವ ಮೂಲಕ ಅಭಿವೃದ್ಧಿಗೆ ಶ್ರಮಿಸಬೇಕು. ಈ ರೀತಿ ಕೆಲಸ ಮಾಡುವುದು ಪ್ರತಿಯೊಬ್ಬ ಜನಪ್ರತಿನಿಧಿಯ ಕರ್ತವ್ಯ. ಇದನ್ನು ಅರಿತು ಮುನ್ನಡೆದಾಗಲೇ ಯಶಸ್ಸು ಸಾಧಿಸಲು ಸಾಧ್ಯ ಎಂದು ಶಾಸಕ ಹಾಗೂ ಕೆಎಸ್ಡಿಎಲ್ ಅಧ್ಯಕ್ಷ ಸಿ.ಎಸ್.ನಾಡಗೌಡ(ಅಪ್ಪಾಜಿ) ಹೇಳಿದರು.ಪಟ್ಟಣದ ಮುಖ್ಯ ಬಜಾರದಲ್ಲಿ ನಗರಾಭಿವೃದ್ಧಿ ಇಲಾಖೆ ಪೌರಾಡಳಿತ ಇಲಾಖೆ ಹಾಗೂ ಪುರಸಭೆ ಸಂಯಕ್ತಾಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ₹ 15 ಕೋಟಿ ವೆಚ್ಚದ ನೂತನ ಮೆಗಾ ಮಾರ್ಕೆಟ್ ಕಟ್ಟಡ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಇಂದು ರಾಜಕೀಯ ಕಲುಷಿತಗೊಂಡಿದ್ದು, ಒಬ್ಬರಿಗೊಬ್ಬರು ಬೈದಾಡಿಕೊಂಡು ಕಾಲ ಕಳೆಯಲು ದುರ್ಬಳಕೆಯಾಗುತ್ತಿದೆ ಎಂದು ದೂರಿದರು.
ಈ ಹಿಂದೆ ಎಸ್.ಎಂ.ಗುರಡ್ಡಿ, ಎಂ.ಎಂ.ಸಜ್ಜನ, ಜೆ.ಎಸ್.ದೇಶಮುಖ ಹಾಗೂ ವಿಮಲಾಬಾಯಿ ದೇಶಮುಖ ಸೇರಿದಂತೆ ಅನೇಕರು ಶಾಸಕರಾಗಿ ಮತಕ್ಷೇತ್ರದ ಅಭಿವೃದ್ಧಿಗಾಗಿ ಉತ್ತಮ ಆಡಳಿತ ನೀಡುವ ಮೂಲಕ ಶ್ರಮಿಸಿದ್ದಾರೆ. ಯಾರು ಕೂಡ ನಾನೇ ಮಾಡಿದ್ದೆ, ನನ್ನ ಕಾಲದಲ್ಲಿ ಕೆಲಸ ಆಗಿದೆ ಎನ್ನುವ ಅಹಂ ಮಾತುಗಳನ್ನಾಡಿಲ್ಲ. ಯಾರೇ ಶಾಸಕರಾಗಿರಲಿ ಜನರ ಬೆವರಿನಿಂದ ಸಂಗ್ರಹಿಸಿದ ತೆರಿಗೆ ಹಣವನ್ನು ಮತಕ್ಷೇತ್ರದ ಅಭಿವೃದ್ಧಿಗೆ ಬಳಸಿದ್ದೇವೆ. ವಿನಃ ನಾನಾಗಲಿ ಅಥವಾ ಇನ್ನಾರದ್ದೋ ಸ್ವಂತ ಹಣವನ್ನು ಖರ್ಚು ಮಾಡೋದಿಲ್ಲ ಎಂಬುವುದನ್ನು ತಿಳಿದುಕೊಳ್ಳಬೇಕು ಎಂದರು.ಈ ಮೊದಲು 1983ರಲ್ಲಿ ನನ್ನ ರಾಜಕೀಯ ಜೀವನ ಪ್ರಾರಂಭವಾದಾಗ ಕೇವಲ ₹25 ಸಾವಿರ ರಾಜ್ಯದ ಒಂದು ವರ್ಷದ ಬಜೆಟ್ ಇತ್ತು. ಇಂದು ಔದ್ಯೋಗಿಕವಾಗಿ, ಆರ್ಥಿಕವಾಗಿ ತುಂಬ ಬದಲಾವಣೆಯಾಗಿದೆ. ಈ ಹಿನ್ನೆಲೆಯಲ್ಲಿ ಸದ್ಯ ನಮ್ಮ ಸಿಎಂ ಸಿದ್ದರಾಮಯ್ಯನವರು ₹4 ಲಕ್ಷ ಕೋಟಿಗೂ ಅಧಿಕ ಅಂದಾಜು ಬಜೆಟ್ ಮಂಡಿಸಲು ಸಿದ್ಧತೆ ಕೈಗೊಂಡಿದ್ದಾರೆ ಎಂದರು.ಮುದ್ದೇಬಿಹಾಳ ಪಟ್ಟಣ ಸೇರಿದಂತೆ ಇಡೀ ಕ್ಷೇತ್ರ ವೇಗವಾಗಿ ಬೆಳೆಯುತ್ತಿದೆ. ಆಯಾ ವರ್ಷಕ್ಕೆ ತಕ್ಕಂತೆ ಸರ್ಕಾರದ ಅನುದಾನ ಬಿಡುಗಡೆ ಮಾಡುತ್ತದೆ, ಅಭಿವೃದ್ಧಿ ಮಾಡಲಾಗುತ್ತದೆ. ಅದರಂತೆ ಮುಂಬರುವ ದಿನಗಳಲ್ಲಿ ರಸ್ತೆ, ಚರಂಡಿ, ಪಟ್ಟಣ ಹಾಗೂ ಗ್ರಾಮೀಣ ಜನರಿಗೆ ಕುಡಿಯುವ ನೀರು, ಬೀದಿ ವಿದ್ಯುದೀಪ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಶಾಲಾ ಕಟ್ಟಡಗಳು, ಸ್ಮಾರ್ಟ್ಕ್ಲಾಸ್ ರೂಮ್ಗಳು, ರೈತರ ಅನುಕೂಲಕ್ಕಾಗಿ ಸಮಗ್ರ ನೀರಾವರಿ ಯೋಜನೆ, ಕೆರೆ ತುಂಬಿಸುವುದು ಹೀಗೆ ಅನೇಕ ಅಭಿವೃದ್ಧಿ ಪೂರಕ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸರ್ಕಾರ ಸಿದ್ಧವಿದೆ ಎಂದು ಭರವಸೆ ನೀಡಿದರು.
ಪುರಸಭೆ ಮುಖ್ಯಾಧಿಕಾರಿ ಮಲ್ಲನಗೌಡ ಬಿರಾದಾರ ಹಾಗೂ ಅಧ್ಯಕ್ಷ ಮೈಬೂಬ್ ಗೊಳಸಂಗಿ, ಉಪಾಧ್ಯಕ್ಷೆ ಪ್ರೀತಿ ದೇಗಿನಾಳ, ಸ್ಥಾಯಿ ಸಮಿತಿ ಅಧ್ಯಕ್ಷ ಯಲ್ಲಪ್ಪ ನಾಯಕಮಕ್ಕಳ ಸೇರಿದಂತೆ ಬಿಜೆಪಿ, ಕಾಂಗ್ರೆಸ್, ಪಕ್ಷೇತರರು ಸೇರಿದಂತೆ ಎಲ್ಲ ಸದಸ್ಯರು ಪಕ್ಷಾತೀತವಾಗಿ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಇದನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ ಎಂದು ತಿಳಿಸಿದರು.ಪಂಚ ಗ್ಯಾರಂಟಿ ಯೋಜನೆಯ ತಾಲೂಕಾಧ್ಯಕ್ಷ ಶಿವಶಂಕರಗೌಡ ಹಿರೇಗೌಡರ ಮಾತನಾಡಿ, ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ಗ್ಯಾರಂಟಿಗಳನ್ನು ನೀಡುವುದರ ಮೂಲಕ ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಆದರೆ, ವಿರೋಧ ಪಕ್ಷದವರಿಗೆ ಸಹಿಸಿಕೊಳ್ಳು ಆಗುತ್ತಿಲ್ಲ. ಗ್ಯಾರಂಟಿ ಯೋಜನೆಯ ಬಗ್ಗೆ ಹಗುರವಾಗಿ ಮಾತನಾಡುತ್ತಲೇ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ವೇಳೆ ಉದ್ಯಮಿ ಬಸವರಾಜ ಮೋಟಗಿ, ಬಸನಗೌಡ ಪಾಟೀಲ, ಹಿರಿಯ ಸಾಹಿತಿ ಬಿ.ಎಂ.ಹಿರೇಮಠ, ನಿಕಟಪೂರ್ವ ಕಸಾಪ ಅಧ್ಯಕ್ಷ ಎಂ.ಬಿ.ನಾವದಗಿ, ಗಣ್ಯರಾದ ಅಬ್ಧೂಲಗಫುರಸಾಬ್ ಮಕಾಂದಾರ, ಸದಸ್ಯರಾದ ಸಹನಾ ಬಡಿಗೇರ, ಭಾರತಿ ಪಾಟೀಲ, ಶಾಹಾಜದಬಿ ಹುಣಸಗಿ, ಚನ್ನಪ್ಪ ಕಂಠಿ ಪ್ರತಿಭಾ ಅಂಗಡಗೇರಿ ಸೇರಿದಂತೆ ಹಲವರು ಇದ್ದರು.ಕಳೆದೆರಡು ವರ್ಷಗಳಲ್ಲಿ ಮತಕ್ಷೇತ್ರದ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದೇನೆ. ಏನೆಲ್ಲ ಅಭಿವೃದ್ಧಿ ಮಾಡಲಾಗಿದೆ ಎಂಬುವುದನ್ನು ಮಾರ್ಚ್ನಲ್ಲಿ ನಡೆಯವ ಅಧಿವೇಶನ ನಂತರ ದಾಖಲೆಯ ಸಮೇತ ಶ್ವೇತಪತ್ರ ಹೊರಡಿಸುತ್ತೇನೆ. ಅದನ್ನು ಬಿಟ್ಟು ಸುಳ್ಳು ಹೇಳಿಕೊಂಡು ಜೀವನ ಮಾಡುವ ಅವಶ್ಯಕತೆ ನನಗಿಲ್ಲ. ನಾನೂ ಕೂಡ ಮಾದರಿ ಮತಕ್ಷೇತ್ರ ಮಾಡುವ ಗುರಿ ಹೊಂದಿದ್ದೇನೆ.
-ಸಿ.ಎಸ್.ನಾಡಗೌಡ, ಶಾಸಕ, ಕೆಎಸ್ಡಿಎಲ್ ಅಧ್ಯಕ್ಷ