ಮುಂಡಗೋಡ: ಸಹಕಾರಿ ಸಂಘಕ್ಕೆ ಯಾವತ್ತೂ ರಾಜಕಾರಣ ತರಬಾರದು. ಯಾವುದೇ ಜಾತಿ, ಪಕ್ಷ ನೋಡಿ ಕೆಲಸ ಮಾಡಬಾರದು ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ ಹಾಗೂ ಶಾಸಕ ಶಿವರಾಮ ಹೆಬ್ಬಾರ ಹೇಳಿದರು.
ಸೊಸೈಟಿಗಳ ಒತ್ತಡ ತಪ್ಪಿಸುವ ದೃಷ್ಟಿಯಿಂದ ತಾಲೂಕಿನ ಪಾಳಾ ಭಾಗದ ತಲಾ ೫ ಸೊಸೈಟಿಗಳ ಸಾಲ ವಿತರಣೆಯನ್ನು ಈ ಬ್ಯಾಂಕ್ ಮೂಲಕ ಮಾಡಲಾಗುತ್ತದೆ. ಅದೇ ರೀತಿ ಇಂದೂರ ಗ್ರಾಮದಲ್ಲಿ ತೆರೆಯಲಾಗುವ ಶಾಖೆಯಲ್ಲಿ ೫ ಸೊಸೈಟಿಗಳಿಗೆ ಸಾಲ ವಿತರಣೆ ಮಾಡಲಾಗುತ್ತದೆ. ಮುಂಡಗೋಡ ಕೆಡಿಸಿಸಿ ಬ್ಯಾಂಕ್ನಲ್ಲಿ ೬ ಸೊಸೈಟಿಗಳಿಗೆ ಸಾಲ ವಿತರಣೆ ಮಾಡಲಾಗುವುದು ಎಂದರು.
ರೈತರಿಗೆ ಅತ್ಯಂತ ವೇಗವಾಗಿ ಸಾಲ ಬಟವಡೆ ಮಾಡಬೇಕೆಂಬುದು ನಮ್ಮ ಮೂಲ ಉದ್ದೇಶವಾಗಿದ್ದು, ತಾಲೂಕಿನಲ್ಲಿ ₹೮೭ ಕೋಟಿ ಕೆಸಿಸಿ ಸಾಲ ಹಾಗೂ ₹೭೨ ಕೋಟಿ ಮಧ್ಯಮಾವಧಿ ಸಾಲ ನೀಡಲಾಗಿದೆ. ₹೧೭೫ ಕೋಟಿ ಸಾಲವನ್ನು ಸೊಸೈಟಿಗಳ ಮೂಲಕ ನೀಡಲಾಗಿದೆ. ಜಿಲ್ಲಾ ಮಧ್ಯವರ್ತಿ ಬ್ಯಾಂಕ್ನಲ್ಲಿ ಶೇ. ೯೯.೨೬ರಷ್ಟು ಗ್ರಾಹಕರು ರೈತರು. ಒಟ್ಟು ಬೆಳೆ ಸಾಲ ₹೧೧೪೭ ಕೋಟಿ ಹಾಗೂ ₹೪೩೮ ಕೋಟಿ ಮಧ್ಯಮಾವಧಿ ಸಾಲ ಸೇರಿದಂತೆ ಒಟ್ಟಾರೆ ₹೧೬೦೦ ಕೋಟಿ ಸಾಲ ನೀಡಿದೆ. ರೈತಾಪಿ ಸಮುದಾಯದ ಸಬಲತೆಗಾಗಿ ಆದ್ಯತೆ ಮೇರೆಗೆ ಸಾಲವನ್ನು ನೀಡಲಾಗುತ್ತಿದೆ ಎಂದು ಹೇಳಿದರು.ಕೇವಲ ರೈತರು ಮಾತ್ರವಲ್ಲ, ಶೇ. ೫೦ರಷ್ಟು ಕೃಷಿಯೇತರ ಸಾಲ ನೀಡಲಾಗುತ್ತದೆ. ಸ್ವ ಉದ್ಯೋಗ ಮಾಡುವವರು ಕೂಡ ಪ್ರಾಮಾಣಿಕ ವ್ಯವಹರಿಸುತ್ತಿದ್ದು, ಮರುಪಾವತಿ ಕೂಡ ಶೇ. ೯೯.೨೧ರಷ್ಟಿದೆ. ಇದರಿಂದಲೇ ನಮ್ಮ ಬ್ಯಾಂಕ್ ನಿರಂತರ ೬ ಬಾರಿ ರಿಸರ್ವ್ ಬ್ಯಾಂಕ್ನಿಂದ ಪ್ರಶಸ್ತಿ ಪಡೆದಿದೆ. ಅಲ್ಲದೇ ಅಪೆಕ್ಸ್ ಬ್ಯಾಂಕ್ ನಿಂದಲೂ ಕೂಡ ೩೬ ಬಾರಿ ಪ್ರಶಸ್ತಿ ಪಡೆದಿದೆ. ಹೀಗೆ ರಾಜ್ಯದಲ್ಲಿ ಪ್ರತಿಷ್ಠಿತ ಪ್ರಶಸ್ತಿ ಪಡೆದ ಹೆಗ್ಗಳಿಕೆ ನಮ್ಮದಾಗಿದೆ ಎಂದು ಹೆಬ್ಬಾರ್ ವಿವರಿಸಿದರು.
ಕಳೆದ ೩ ವರ್ಷದಲ್ಲಿ ರೈತರಿಗೆ ಮನೆ ಕಟ್ಟಲು ಸಾಲ, ಮಕ್ಕಳ ಶಿಕ್ಷಣಕ್ಕಾಗಿ ಹಾಗೂ ಜಮೀನು ಖರೀದಿಸಲು ಸಾಲ ಸೇರಿದಂತೆ ಹತ್ತು ಹಲವು ಯೋಜನೆಗಳನ್ನು ನಮ್ಮ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಮಾಡಿದೆ. ಈ ಯೋಜನೆಗಳು ರಾಜ್ಯದ ಯಾವ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ನಲ್ಲಿ ಕೂಡ ಇಲ್ಲ. ಇದು ನಮ್ಮ ಹೆಮ್ಮೆ ಎಂದು ಹೇಳಿದರು.