ದೊಡ್ಡಬಳ್ಳಾಪುರ: ತಾಲೂಕಿನ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಾಳಿಂಬೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಬಿ.ಜಿ.ಹನುಮಂತರಾಯ ಮಾತನಾಡಿ, ರೈತರು ದಾಳಿಂಬೆ ಕೃಷಿಯನ್ನು ಮಾಡಿ, ಆರ್ಥಿಕವಾಗಿ ಲಾಭ ಗಳಿಸಬಹುದು. ಆದರೆ, ಇದಕ್ಕೆ ವೈಜ್ಞಾನಿಕವಾಗಿ, ತಜ್ಞರ ಸಲಹೆ ಪಡೆದು ಕೃಷಿ ಮಾಡಿದರೆ ಹೆಚ್ಚು ಲಾಭದಾಯಕ ಎಂದು ಹೇಳಿ, ದಾಳಿಂಬೆ ಕೃಷಿಯ ಪ್ರಾಮುಖ್ಯತೆ, ಪೋಷಕಾಂಶ, ನೀರು ನಿರ್ವಹಣೆ ಹಾಗೂ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ ಅಖಿಲ ಭಾರತ ಸುಸಂಘಟಿತ ಸಂಶೋಧನಾ ಪ್ರಾಯೋಜನೆ ಪ್ರಧಾನ ಸಂಶೋಧಕ ಡಾ.ಕೆ.ಟಿ.ವಿಜಯ ಕುಮಾರ್, ದಾಳಿಂಬೆ ಬೆಳೆಯಲ್ಲಿ ಜೇನು ನೊಣಗಳ ಪ್ರಾಮುಖ್ಯತೆ ಹೆಚ್ಚು. ನಾಲ್ಕು ತುಡುವೆ ಜೇನು ಕುಟುಂಬಗಳನ್ನು 2.5 ಎಕರೆ ಪ್ರದೇಶಕ್ಕೆ ಹೂ ಬಿಡುವ ಸಮಯದಲ್ಲಿಸಾಕಣೆ ಮಾಡುವುದರಿಂದ ದಾಳಿಂಬೆ ಹಣ್ಣುಗಳ ಇಳುವರಿ ಶೇ.20 ರಿಂದ 30ರಷ್ಟು ಹೆಚ್ಚಾಗುತ್ತದೆ ಎಂದು ತಿಳಿಸಿದರು.ದಾಳಿಂಬೆ ಬೆಳೆಯ ತಾಂತ್ರಿಕ ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿರುವ ಡಾ.ಸುನೀಲ್ ತಾಮಗಾಳೆ ಅವರು ದಾಳಿಂಬೆಯಲ್ಲಿ ಹೂವು ಮತ್ತು ಕಾಯಿ ಕಚ್ಚುವಿಕೆಯಲ್ಲಿ ಅನುಸರಿಸುವ ನಿರ್ವಹಣಾ ಕ್ರಮಗಳ ಬಗ್ಗೆ ವಿವರಿಸಿದರು.
ಬಾಗಲಕೋಟೆಯ ವಿಶ್ವವಿದ್ಯಾನಿಲಯದ ತೋಟಗಾರಿಕಾ ಪ್ರಾಧ್ಯಾಪಕ ಡಾ.ರಾಘವೇಂದ್ರ ಆಚಾರಿ, ದಾಳಿಂಬೆ ಬೆಳೆಯಲ್ಲಿ ಜೇನುನೊಣಗಳಿಗೆ ಹಾನಿಯಾಗದಂತೆ ಸುರಕ್ಷಿತ ಕೀಟನಾಶಕಗಳನ್ನು ಬಳಕೆ ಮಾಡುವ ಬಗ್ಗೆ ವಿವರಿಸಿದರು.ಕೃಷ್ಣ ಆಗೋ ಟೆಕ್ ವ್ಯಾಲಿಯ ನೀಲಕಾಂತ್ ವಾಲ್ಕಿ, ದಾಳಿಂಬೆ ಬೆಳೆಯಲ್ಲಿ ಗಿಡಮೂಲಿಕೆ ಸಾರಕಗಳ ಬಳಕೆಯ ಬಗ್ಗೆ ಹಾಗೂ ಕೃಷಿ ವಿಜ್ಞಾನ ಕೇಂದ್ರದ ಅಧ್ಯಾಪಕ ಡಾ.ಜಿ.ಈಶ್ವರಪ್ಪ, ದಾಳಿಂಬೆ ತೋಟದಲ್ಲಿ ಜೇನು ಕುಟುಂಬಗಳ ನಿರ್ವಹಣೆಯ ಬಗ್ಗೆ ವಿವರಿಸಿದರು.
ಪ್ರಗತಿಪರ ರೈತ ಬಿ. ನಂಜುಂಡಗೌಡ, ಡಾ.ಎಂ.ಆರ್.ದೇವರಾಜ ದಾಳಿಂಬೆ ಕೃಷಿಯಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಂಡರು. ಕೃಷ್ಣವ್ಯಾಲಿ ಆಕ್ರೋಟೆಕ್ನ ಓಂಕಾರ್ ಸಾವಂತ್ ಭಾಗವಹಿಸಿದ್ದರು.26ಕೆಡಿಬಿಪಿ4- ದೊಡ್ಡಬಳ್ಳಾಪುರದ ಹಾಡೋನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ದಾಳಿಂಬೆ ಬೆಳೆಯ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ ತರಬೇತಿ ಕಾರ್ಯಕ್ರಮ ನಡೆಯಿತು.