ನೋಟುಗಳ ಅಮಾನ್ಯೀಕರಣ, ಜಿಎಸ್ಟಿ ಅವೈಜ್ಞಾನಿಕ ನಿರ್ಧಾರ । ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ ಬಡವರಿಗೆ ಯಾವುದೇ ಕಾರ್ಯಕ್ರಮವನ್ನು ಜಾರಿಗೆ ತಂದಿಲ್ಲ, ಜಿಎಸ್ಟಿ, ನೋಟುಗಳ ಅಮಾನ್ಯೀಕರಣ ವಿಷಯದಲ್ಲಿ ಎಡವಿದೆ ಎಂದು ರಾಜ್ಯದ ಕಾರ್ಮಿಕ ಸಚಿವ ಸಂತೋಷ್ ಎಸ್.ಲಾಡ್ ಹೇಳಿದರು.
ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಸಾಮಾಜಿಕ ಭದ್ರತಾ ಮಂಡಳಿ, ಸಾರಿಗೆ ಇಲಾಖೆ, ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿಯಿಂದ ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೋಟುಗಳ ಅಮಾನ್ಯೀಕರಣ ಸಂದರ್ಭದಲ್ಲಿ ಈ ದೇಶದ ಪ್ರಧಾನಮಂತ್ರಿ 50 ದಿನ ಕಾಲಾವಕಾಶ ಕೊಡಿ, ಸುಮಾರು ₹3 ಲಕ್ಷ ಕೋಟಿ ರು. ಕಪ್ಪು ಹಣವನ್ನು ಪತ್ತೆ ಹಚ್ಚುತ್ತೇವೆಂದು ರಾತ್ರೋ ರಾತ್ರಿ ₹500 ಹಾಗೂ ₹1000 ರು. ಮುಖ ಬೆಲೆಯ ₹15 ಲಕ್ಷದ 43 ಸಾವಿರ ಕೋಟಿ ನೋಟು ಚಲಾವಣೆ ಸ್ಥಗಿತೊಳಿಸಿದರು.ಹಳೆ ನೋಟು ಚಲಾವಣೆ ಸ್ಥಗಿತಗೊಂಡು, ಹೊಸ ನೋಟುಗಳು ಪಡೆಯುವ ಸಂದರ್ಭದಲ್ಲಿ ದೇಶದ ವಿವಿಧೆಡೆ ಕ್ಯೂನಲ್ಲಿ ನಿಂತಿದ್ದ 130 ಜನ ಬಡವರು ಮೃತಪಟ್ಟರು. ಆ ವೇಳೆಯಲ್ಲಿ ಯಾವೊಬ್ಬ ಕಾರ್ಪೋರೇಟ್ಗೂ ಏನೂ ತೊಂದರೆಯಾಗಲಿಲ್ಲ, ಬಡ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರಿತು ಎಂದು ಹೇಳಿದರು.ಶೇ. 16 ರಷ್ಟು ಬಡ್ಡಿಯಲ್ಲಿ ಖಾಸಗಿ ಸಂಸ್ಥೆಗಳಿಗೆ ಸಾಲ ನೀಡಬೇಕಾಗಿರುವುದನ್ನು ಶೇ. 15 ಕ್ಕೆ ಕೇಂದ್ರ ಸರ್ಕಾರ ಕೊಟ್ಟಿತು. ಇದರಿಂದ ಖಾಸಗಿ ಕಂಪನಿಗಳ ₹11 ಲಕ್ಷ ಕೋಟಿ ಉಳಿತಾಯವಾಯಿತು. ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿಯಾಗಿದ್ದಾಗ ರೈತರ ₹73 ಸಾವಿರ ಕೋಟಿ ಸಾಲವನ್ನು ಮನ್ನಾ ಮಾಡಲಾಗಿತ್ತು. ರಾಜ್ಯದಲ್ಲಿದ್ದ ಕಾಂಗ್ರೆಸ್ ಸರ್ಕಾರ ₹8.5 ಕೋಟಿ ರು. ಸಾಲ ಮನ್ನಾ ಮಾಡಿತು. ಬಿಜೆಪಿ ಏನು ಮಾಡಿತು ಎಂದು ಪ್ರಶ್ನಿಸಿದರು.
ಕಳೆದ 9 ವರ್ಷದ ಹಿಂದೆ ಜಿಎಸ್ಟಿ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದ್ದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದೊಂದು ಅವೈಜ್ಞಾನಿಕ ಎಂದು ಹೇಳಿದಾಗ ಅವರನ್ನು ಪಪ್ಪು ಎಂದು ಕರೆದರು. ತಪ್ಪಿನ ಅರಿವಾಗಿ ಪಪ್ಪು ಎಂದವರೆ ಇದೀಗ ಜಿಎಸ್ಟಿ ವಾಪಸ್ ಪಡೆದಿದ್ದಾರೆ. ಈಗ ಜನರೇಷನ್ ನೆಕ್ಸ್ಟ್ ಜಿಎಸ್ಟಿ ಎಂದು ಹೇಳಿದ್ದಾರೆ. ಎಲ್ಲದಕ್ಕೂ ಒಂದು ಸ್ಲೋಗನ್ ಹೇಳುತ್ತಾರೆಂದು ಸಚಿವರು ವ್ಯಂಗ್ಯವಾಡಿದರು.ರಾಜ್ಯ ಸರ್ಕಾರ ವಿಧವಾ ವೇತನ ಸೇರಿದಂತೆ ಇತರೆ ಪೆನ್ಷನ್ಗಳಿಗೆ ಒಂದು ವರ್ಷದಲ್ಲಿ ₹60 ಸಾವಿರ ಕೋಟಿ, ಗ್ಯಾರಂಟಿಗಳಿಗೆ ₹60 ಸಾವಿರ ಕೋಟಿ ಕೊಡುತ್ತಿದೆ. ಗ್ಯಾರಂಟಿಗಳ ಬಗ್ಗೆ ಟೀಕೆ ಮಾಡುವ ಬಿಜೆಪಿ ದೇಶದ 20 ರಾಜ್ಯಗಳಲ್ಲಿ ಆಡಳಿತದಲ್ಲಿದೆ. ಯಾವುದೇ ರಾಜ್ಯದಲ್ಲೂ ಕೂಡ ಬಡವರಿಗೆ ನಾವು ಜಾರಿಗೆ ತಂದಿರುವ ಕಾರ್ಯಕ್ರಮ ಅನುಷ್ಠಾನಕ್ಕೆ ತಂದಿಲ್ಲ. ಅಂದರೆ, ಇವರಿಗೆ ಬಡವರ ಕಳಕಳಿ ಇಲ್ಲ.
ರಸ್ತೆ ಅಪಘಾತದಲ್ಲಿ ಮೃತಪಡುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಇಂತಹ ಪ್ರಕರಣಗಳಲ್ಲಿ ಮೃತಪಡುವವರಲ್ಲಿ ಹೆಚ್ಚಿನವರು ಯುವಕರು. ಸುರಕ್ಷಿತ ರಸ್ತೆ ಸಂಚಾರದ ಬಗ್ಗೆ ಅರಿವು ಮೂಡಿಸಲು ಜಿಲ್ಲಾಮಟ್ಟದಲ್ಲಿ ಕಾರ್ಯಕ್ರಮ ಆಯೋಜಿಸ ಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಸಿನಿಮಾ, ನಾಟಕ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರ ಹಿತರಕ್ಷಣೆಗೆ ಸಿನಿ ಬಿಲ್ ಸಿದ್ಧಪಡಿಸಲಾಗುತ್ತಿದೆ. ಇದು, ದೇಶದಲ್ಲೇ ಮೊದಲ ಪ್ರಯತ್ನ.
ಇಡೀ ರಾಜ್ಯದಲ್ಲಿ ಒಂದು ವರ್ಷದಲ್ಲಿ ಸಿನಿಮಾ ನೋಡಲು ಹೋಗುವ 8 ಕೋಟಿ ಜನರು ತೆಗೆದುಕೊಳ್ಳುವ ಟಿಕೇಟ್ ಮೇಲೆ ಶೇ. 2 ರಷ್ಟು ಸೆಸ್ ಹಾಕಲಾಗುವುದು. ಇಲ್ಲಿ ಸಂಗ್ರಹವಾಗುವ ಹಣ ಮೆಕಪ್ ಆರ್ಟಿಸ್ಟ್, ಸ್ಟೇಂಟ್, ಪೌರಾಣಿಕ ನಾಟಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ನೋಂದಾಯಿತ ಸಂಸ್ಥೆಗಳಿಗೆ ಆರ್ಥಿಕ ನೆರವು ನೀಡಲು ಬಳಸಲಾಗುವುದು ಎಂದು ಹೇಳಿದರು.ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಮಾತನಾಡಿ, ಅತ್ಯಂತ ಕಡಿಮೆ ವಿಸ್ತೀರ್ಣದ ಭೂಮಿ ಹೊಂದಿರುವ ರೈತರನ್ನು ಕಾರ್ಮಿಕರೆಂದು ಪರಿಗಣಿಸಬೇಕು. ಸರ್ಕಾರದ ಸೌಲಭ್ಯ ನೀಡಬೇಕು. ಶಿಕ್ಷಣದಲ್ಲಿ ಪಡೆಯುವ ಪದವಿಗಿಂತ ಕಸುಬು ಕಲಿತರೆ ಎಲ್ಲೆ ಹೋದರೂ ಬದುಕು ಸಾಗಿಸಬಹುದು ಎಂದು ಕಿವಿ ಮಾತು ಹೇಳಿದರು.
ಕಾರ್ಮಿಕರ ಮಕ್ಕಳಿಗೆ ಕೌಶಲ ತರಬೇತಿ ನೀಡಲು ಜಿಲ್ಲಾ ಕೇಂದ್ರಗಳಲ್ಲಿ ತರಬೇತಿ ಕೇಂದ್ರಗಳನ್ನು ತೆರೆಯಬೇಕು. ಇದರಿಂದ ಮುಂದೆ ಸ್ವಾವಲಂಬಿ ಬದುಕು ನಡೆಸಲು ಸಾಧ್ಯ. ಆಗ ದೇಶ ಜಗತ್ತಿಗೆ ಗುರುವಾಗುತ್ತದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಡಿ. ತಮ್ಮಯ್ಯ ಮಾತನಾಡಿ, ಗ್ಯಾರಂಟಿ ಕಾರ್ಯಕ್ರಮಗಳಿಂದ ಜನರ ಜೀವನ ಮಟ್ಟ ಸುಧಾರಿಸಿದೆ. ಮಹಿಳೆಯರು ಆರ್ಥಿಕವಾಗಿ ಸಬಲರಾಗುತ್ತಿದ್ದಾರೆ. ಆದರೆ, ಪ್ರತಿ ಪಕ್ಷಗಳು ಟೀಕೆ ಮಾಡುತ್ತಿದೆ. ಗ್ಯಾರಂಟಿಯಿಂದ ಯಾವುದೇ ಅಭಿವೃದ್ಧಿ ಕಾರ್ಯಗಳು ನಿಂತಿಲ್ಲ ಎಂದರು.
ತರೀಕೆರೆ ಶಾಸಕ ಜಿ.ಎಚ್. ಶ್ರೀನಿವಾಸ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಭದ್ರಾ ಕಾಡಾ ಅಧ್ಯಕ್ಷ ಡಾ.ಕೆ.ಪಿ. ಅಂಶುಮಂತ್, ಕ.ರಾ.ಕೃಷಿ ಉತ್ಪನ್ನ ಸಂಸ್ಕರಣೆ ಮತ್ತು ರಫ್ತು ನಿಗಮದ ಅಧ್ಯಕ್ಷ ಬಿ.ಎಚ್.ಹರೀಶ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಯಾಜ್ ಅಹಮ್ಮದ್, ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಮೊಹಸಿನ್, ಕಾರ್ಮಿಕ ಇಲಾಖೆ ಆಯುಕ್ತ ಡಾ.ಗೋಪಾಲಕೃಷ್ಣ, ಜಿಲ್ಲಾಧಿಕಾರಿ ಸಿ.ಎನ್.ಮೀನಾ ನಾಗರಾಜ್, ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಚ್.ಎಸ್.ಕೀರ್ತನಾ ಉಪಸ್ಥಿತರಿದ್ದರು. 13 ಕೆಸಿಕೆಎಂ 1ಚಿಕ್ಕಮಗಳೂರಿನ ಒಕ್ಕಲಿಗರ ಸಮುದಾಯ ಭವನದಲ್ಲಿ ಮಂಗಳವಾರ ನಡೆದ ವಿವಿಧ ವರ್ಗಗಳ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್ ಕಾರ್ಡ್ ವಿತರಣೆ ಹಾಗೂ ಅರಿವು ಕಾರ್ಯಕ್ರಮವನ್ನು ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಲಾಡ್ ಉದ್ಘಾಟಿಸಿದರು. ಶಾಸಕ ಎಚ್.ಡಿ. ತಮ್ಮಯ್ಯ, ಜಿ.ಎಚ್. ಶ್ರೀನಿವಾಸ್ ಇದ್ದರು.