ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಜನಸಂಖ್ಯಾ ಹೆಚ್ಚಳದಿಂದ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಷ್ಟವಾಗುತ್ತಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್.ಕೆ. ಉಮೇಶ್ ಅಭಿಪ್ರಾಯಪಟ್ಟರು. ಜಿಲ್ಲಾ ಮತ್ತು ತಾಲ್ಲೂಕು ಆಡಳಿತ, ತಾಲೂಕು ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸಹಯೋಗದಲ್ಲಿ ನಗರ ಹೊರವಲಯದ ಎಸ್.ಜೆ.ಸಿ.ಐ.ಟಿ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.ಎರಡಕ್ಕಿಂತ ಹೆಚ್ಚು ಮಕ್ಕಳು ಬೇಡ
ಯಾವುದೇ ಕುಟುಂಬಗಳು 2 ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿದಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು ಕಷ್ಟಕರವಾಗಿಲಿದೆ. ಇದರ ಜೊತೆಗೆ ಸಾಮಾಜಿಕ, ಆರ್ಥಿಕತೆ ಸಮಸ್ಯೆಗಳು ಸಮಾಜದ ಮೇಲೆ ದುಷ್ಪರಿಣಾಮ ಬೀರುವುದಲ್ಲದೆ ಪರಿಸರ ನಾಶಕ್ಕೂ ಕಾರಣವಾಗಲಿದೆ. ಆದ್ದರಿಂದ ಕುಟುಂಬ ಕಲ್ಯಾಣ ವಿಧಾನಗಳನ್ನು ಎಲ್ಲರೂ ಅಳವಡಿಕೊಂಡು ಜನಸಂಖ್ಯೆ ನಿಯಂತ್ರಣಕ್ಕೆ ಸಂಕಲ್ಪ ಮಾಡಬೇಕು ಎಂದರು.ತಮ್ಮ ಸುತ್ತ ಮುತ್ತ ಬಾಲ್ಯ ವಿವಾಹಗಳು ನಡೆಯುವುದು ಗಮನಕ್ಕೆ ಬಂದರೆ ಕೂಡಲೇ ಸಂಬಂಧಪಟ್ಟ ಇಲಾಖೆಗಳಿಗೆ, ಸಕ್ಷಮ ಪ್ರಮಾಧಿಕಾರಿಗಳಿಗೆ ಮಾಹಿತಿ ನೀಡಿ ಬಾಲ್ಯ ವಿವಾಹ ತಡೆಯುವ ಕೆಲಸ ಆಗಬೇಕಿದೆ. ಒಟ್ಟಾರೆ ಜನಸಂಖ್ಯೆ ನಿಯಂತ್ರಣ ಎಲ್ಲರ ಜವಾಬ್ದಾರಿ. ಜನಸಂಖ್ಯಾ ದಿನಾಚರಣೆಯ ದಿನದ ಮಹತ್ವವನ್ನು ಅರಿತುಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು. 144 ಕೋಟಿ ದಾಟಿದ ಜನಸಂಖ್ಯೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ಎಸ್ ಮಹೇಶ್ ಕುಮಾರ್ ಅವರು ಮಾತನಾಡಿ, ಭಾರತದ ಜನಸಂಖ್ಯೆಯು 144 ಕೋಟಿ, ಕರ್ನಾಟಕದ ಜನಸಂಖ್ಯೆಯು 6.8 ಕೋಟಿಯನ್ನು ದಾಟಿದೆ. ಮದುವೆಯಾದ ನಂತರ ಕನಿಷ್ಠ 3 ವರ್ಷಗಳ ವರೆಗೂ ಮೊದಲನೆ ಮಗುವನ್ನು ಪಡೆಯಬಾರದು ಎಂದು ಸಲಹೆ ನೀಡಿದರು. ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಆರ್. ಶ್ರೀನಿವಾಸ್ ಅವರು ಮಾತನಾಡಿ ಜನಸಂಖ್ಯಾ ಅಧಿಕವಾಗುವುದರಿಂದ ಶಿಕ್ಷಣ, ಆರೋಗ್ಯ ಸೇವೆಗಳು ಮತ್ತು ಇತರೆ ಮಾನವ ಸಂಪನ್ಮೂಲಗಳ ಕೊರತೆಯುಂಟಾಗುತ್ತಿದೆ. ಇದನ್ನು ತಪ್ಪಿಸಲು ಜನಸಂಖ್ಯೆ ನಿಯಂತ್ರಣ ಒಂದೇ ಮಾರ್ಗೋಪಾಯ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಶಸ್ತ್ರ ಚಿಕಿತ್ಸಕಿ ಡಾ. ಮಂಜುಳ ದೇವಿ, ತಾಲೂಕು ಆರೋಗ್ಯಾಧಿಕಾರಿ ಡಾ.ಕೆ. ಮಂಜುಳ,ಎಸ್.ಜೆ.ಸಿ.ಟಿ ಕಾಲೇಜಿನ ಪ್ರಾಶಂಪಾಲ ಡಾ.ಜಿ.ಟಿ ರಾಜು, ಆರೋಗ್ಯ ಶಿಕ್ಷಣಾಧಿಕಾರಿ ಜಿ.ಹರೀಶ್, ಎಸ್.ಜೆ.ಸಿ.ಟಿ ಕಾಲೇಜಿನ ರಿಜೀಸ್ಟ್ರಾರ್ ಜೆ.ಸುರೇಶ್ ಇದ್ದರು.