ಕಾರಟಗಿ: ಜೀವನದಲ್ಲಿ ಉನ್ನತ ಮಟ್ಟ ತಲುಪಲು ವಿದ್ಯಾರ್ಥಿ ದೆಸೆಯಿಂದಲೇ ಯೋಜನೆ ರೂಪಿಸಿ ಮತ್ತು ಧನಾತ್ಮಕ ಚಿಂತನೆ ಮೈಗೂಡಿಸಿಕೊಂಡರೆ ಮಾತ್ರ ಗುರಿ ಮುಟ್ಟಲು ಸಾಧ್ಯ ಎಂದು ತುರ್ವಿಹಾಳ ಅಮೋಘ ಸಿದ್ದೇಶ್ವರ ಮಠದ ಶ್ರೀ ಮಾದಯ್ಯ ಗುರುವಿನ್ ಹೇಳಿದರು.
ವಿದ್ಯಾರ್ಥಿಗಳು ಮುಂದಿನ ಶೈಕ್ಷಣಿಕ ಭವಿಷ್ಯ ರೂಪಿಸಿಕೊಳ್ಳಲು ಗುರಿಯೊಂದಿಗೆ ಅಧ್ಯಯನ ಜತೆಗೆ ಗುರು-ಹಿರಿಯರ ಮಾರ್ಗದರ್ಶನ ಪಡೆದರೆ ಯಶಸ್ಸು ಖಚಿತವಾಗಿ ಸಿಗಲಿದೆ. ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಯಶಸ್ಸು ಸಾಧಿಸಬೇಕಾದರೆ ನಿಮ್ಮ ವಿದ್ಯಾರ್ಥಿ ಜೀವನದುದ್ದಕ್ಕೂ ಪರಿಶ್ರಮ, ಸಿದ್ಧತೆ ಎನ್ನುವುದು ಅತಿ ಮುಖ್ಯ ಎಂದರು.
ಜಿಪಂ ಮಾಜಿ ಸದಸ್ಯ ವೀರೇಶ್ ಸಾಲೋಣಿ, ಸಿ.ಮ.ನಾ ಕಾಲೇಜಿನ ಉಪನ್ಯಾಸಕ ನಾಗರಾಜ್ ಹುಡೇದ್, ಸಮುದಾಯ ಆರೋಗ್ಯ ಕೇಂದ್ರದ ಡಾ.ವೀರಭದ್ರಗೌಡ ಮಾತನಾಡಿ, ವಿದ್ಯಾರ್ಥಿಗಳಲ್ಲಿನ ಪ್ರತಿಭೆ ಗುರುತಿಸುವುದು ಮಹತ್ವದ ಕಾರ್ಯವಾಗಿದೆ. ಬಡ, ಆತ್ಮವಿಶ್ವಾಸ ವಂಚಿತ ಗ್ರಾಮೀಣ ಭಾಗದ ಪ್ರತಿಭಾವಂತ ಮಕ್ಕಳನ್ನು ಗುರುತಿಸಿ ಅವರಲ್ಲಿ ಆತ್ಮವಿಶ್ವಾಸ,ಭರವಸೆ ತುಂಬುವುದು ಸದ್ಯದ ತುರ್ತು ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ತಾಲೂಕು ಕುರುಬರ ಸಂಘ ಹಾಗೂ ಸಮಾಜದ ತಾಲೂಕು ನೌಕರರ ಸಂಘ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರತಿವರ್ಷ ಪ್ರೋತ್ಸಾಹ ನೀಡುವ ಮಾದರಿ ಕಾರ್ಯಕ್ರಮ ಆಯೋಜನೆಗೆ ಮುಂದಾಗಿರುವುದು ಶ್ಲಾಘನೀಯ, ಈ ರೀತಿ ವಿದ್ಯಾರ್ಥಿಗಳಿಗೆ ಬೆನ್ನು ತಟ್ಟಿ ಗುರುತಿಸಿದಾಗಲೇ ಏನಾದರೂ ಸಾಧಿಸಲು ಸಾಧ್ಯ. ಇದೊಂದು ಅನುಕರಣೀಯ ನಡೆ ಎಂದರು.ಕನಕ ನೌಕರರ ಸಂಘದ ಅಧ್ಯಕ್ಷ ವಿಠ್ಠಲ್ ಜೀರಗಾಳಿ ಮಾತನಾಡಿ, ಸತತ ನಾಲ್ಕು ವರ್ಷಗಳ ಪ್ರಯತ್ನದ ನಂತರ ತಾಲೂಕಿನ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸಿ ಅವರ ಸಾಧನೆ ಗುರುತಿಸುವ ಪ್ರಯತ್ನಕ್ಕೆ ಇಂದು ಯಶಸ್ಸು ಸಿಕ್ಕಿದೆ. ಈ ಯಶಸ್ಸಿನ ಹಿಂದೆ ಸಮಾಜದ ಹಿರಿಯರ ಸಹಕಾರ, ಸಹಾಯ ಇದ್ದು, ಮುಂದಿನ ಪೀಳಿಗೆಯ ಯುವಕರಿಗೆ ಸ್ಫೂರ್ತಿ ನೀಡುವ ಕಾರ್ಯಕ್ರಮವಾಗಿದೆ ಎಂದರು.
ಕಾರ್ಯಕ್ರಮದ ಸಾನ್ನಿಧ್ಯ ಬಸಾಪಟ್ಟಣ್ಣ ನಂಜುಂಡೇಶ್ವರ ಮಠದ ಸಿದ್ದರಾಮಯ್ಯ ಗುರುವಿನ್, ಅಗ್ನಿಕೊಂಡ ದ್ಯಾವಮ್ಮದೇವಿ ಅರಾಧಕ ಭೀಮೇಶಪ್ಪ ಅಜ್ಜ, ಜನಗಂಡೆಪ್ಪ ಪೂಜಾರ ಗುರುಗಳು ವಹಿಸಿದ್ದರು.ಈ ವೇಳೆ ಪುರಸಭೆ ಅಧ್ಯಕ್ಷ ಮಂಜುನಾಥ್ ಮೇಗೂರು, ತಾಲೂಕು ಕುರುಬರ ಸಂಘದ ಅಧ್ಯಕ್ಷ ಉಮೇಶ್ ಭಂಗಿ, ರಮೇಶ ಕುಂಟೋಜಿ, ರಾಮಚಂದ್ರ ದೇವರಗುಡಿ, ಸಂಜೀವಪ್ಪ ಸಾಲೋಣಿ, ರವಿ ಗಚ್ಚಿನಮನಿ, ಪುರಸಭೆ ಮಾಜಿ ಸದಸ್ಯ ಹೊಳೆಯಪ್ಪ ದೇವರಮನಿ, ಬಸವರಾಜ್ ಹತ್ತಿಕಾಳ, ವಿಕ್ರಂ ಮೇಟಿ ಬೇವಿನಾಳ, ಶರಣಪ್ಪ ಎಚ್. ಪನ್ನಾಪುರ, ಆಗರೆಪ್ಪ ಕೊಟ್ನೇಕಲ್, ಮರಿಯಪ್ಪ, ಸಣ್ಣಲಿಂಗಪ್ಪ ರೌಡಕುಂದಿ, ಶಿವಪ್ಪ ಬೇವಿನಾಳ, ಕಾರಮಿಂಚಪ್ಪ, ಲಿಂಗಪ್ಪ ಗೌರಿಪುರ, ಬೀರಪ್ಪ ಸಿದ್ದಾಪುರ ಸೇರಿದಂತೆ ಇನ್ನಿತರರು ಇದ್ದರು.